ಬೆಂಗಳೂರಿಗರೇ ಎಚ್ಚರ, ಸಾಕಷ್ಟುಮಂದಿಗೆ ಕೆಲಸವಿಲ್ಲದೆ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಅಪರಾಧ ಪ್ರಕರಣಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಬಾಸ್ಕರ್‌ ರಾವ್‌ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಬೆಂಗಳೂರಿಗರೇ ಎಚ್ಚರ, ಸಾಕಷ್ಟುಮಂದಿಗೆ ಕೆಲಸವಿಲ್ಲದೆ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಅಪರಾಧ ಪ್ರಕರಣಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಬಾಸ್ಕರ್‌ ರಾವ್‌ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Add Asianetnews Kannada as a Preferred SourcegooglePreferred

ವೈರಲ್‌ ಸಂದೇಶದಲ್ಲಿ, ‘ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಾಸ್ಕರ್‌ ರಾವ್‌ ನಗರದ ಹಾಗೂ ರಾಜ್ಯದ ಜನರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪೊಲೀಸ್‌ ಸಿಬ್ಬಂದಿ ಈಗಾಗಲೇ ಸಾಕಷ್ಟುಕಷ್ಟಪಟ್ಟಿದ್ದಾರೆ. ಅವರ ಮೇಲೆ ಇನ್ನಷ್ಟುಒತ್ತಡ ಹಾಕಲು ಸಾಧ್ಯವಿಲ್ಲ. ಆದ ಕಾರಣ ನೀವೇ ಜವಾಬ್ದಾರಿಯುತವಾಗಿ ಪರಿಸ್ಥಿತಿ ಎದುರಿಸಬೇಕಿದೆ. ಲಾಕ್‌ಡೌನ್‌ನಿಂದಾಗಿ ಸಾಕಷ್ಟುಮಂದಿಗೆ ಕೆಲಸವಿಲ್ಲ.

ಪರಿಣಾಮ ಕಳ್ಳತನ, ಅಪಹರಣದಂಥ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಯಾರೂ ದುಬಾರಿ ವಾಚ್‌, ಬೆಲೆಬಾಳುವ ಬಳೆ, ಸರ, ಕಿವಿಯೋಲೆ ಧರಿಸಬೇಡಿ. ನಿಮ್ಮ ಕೈಚೀಲದ ಬಗ್ಗೆ ಜೋಪಾನವಿರಲಿ. ಸಾರ್ವಜನಿಕವಾಗಿ ಹೆಚ್ಚು ಮೊಬೈಲ್‌ ಬಳಸಬೇಡಿ. ಕನಿಷ್ಠ 3 ತಿಂಗಳವರೆಗೆ ಈ ಸೂಚನೆಗಳನ್ನು ಅಳವಡಿಸಿಕೊಳ್ಳಿ’ ಎಂದು ಸಲಹೆಗಳನ್ನು ನೀಡಲಾಗಿದೆ.

ಆದರೆ ಬೂಮ್‌ಲೈವ್‌ ಈ ಸಂದೇಶದ ಸತ್ಯಾಸತ್ಯ ಪರಿಶೀಲಿಸಿದಾಗ ಮುಂಬೈ ಪೊಲೀಸ್‌ ಹೆಸರಿನಲ್ಲೂ ಇದೇ ಸಂದೇಶ ವೈರಲ್‌ ಆಗಿತ್ತು ಎಂದು ತಿಳಿದುಬಂದಿದೆ. ಅಲ್ಲದೆ ಬೆಂಗಳೂರು ಪೊಲೀಸ್‌ ಇಲಾಖೆಯನ್ನು ಸಂಪರ್ಕಿಸಿದಾಗ ಅವರೂ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಲಾಕ್‌ಡೌನ್‌ ನಂತರ ಕ್ರೈಮ್‌ ಹೆಚ್ಚಾಗುತ್ತದೆ ಜಾಗೃತರಾಗಿರಿ ಎಂದು ಪೊಲೀಸರು ಹೇಳಿದ್ದಾರೆಂಬ ಸುದ್ದಿ ಸುಳ್ಳು.

- ವೈರಲ್ ಚೆಕ್