ನಟಿ ತ್ರಿಷಾ ಕೃಷ್ಣನ್ ಸಿನಿಮಾ ರಂಗದಿಂದ ದೂರ ಸರಿಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ತ್ರಿಷಾ ಅವರೇ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.
ನನ್ನ ಕಥೆ ಮುಗಿದಿದೆಯೇ? ನಾನು ಸಿನಿಮಾ ಬಿಟ್ಟಿದ್ದೇನೆ, ಶ್ರೀಮಂತನೊಬ್ಬನನ್ನು ಮದುವೆಯಾಗಿದ್ದೇನೆ, ನಾಲ್ಕು ಮಕ್ಕಳಿಗೆ ತಾಯಿಯಾಗಿದ್ದೇನೆ... ಅವರಿಗೆ ನಿನ್ನೆ ತಾನೇ ಎರಡು ವರ್ಷ ತುಂಬಿತು. ಇನ್ನೇನಾದರೂ ಸೇರಿಸಬೇಕೇ? ಎಂದು ತ್ರಿಷಾ ಪ್ರಶ್ನಿಸಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಕಲ್ಪನೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ತ್ರಿಷಾ ಅವರ ಈ ಉತ್ತರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಒಂದೇ ಪೋಸ್ಟ್ನಲ್ಲಿ ಎಲ್ಲಾ ವದಂತಿಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ಹಲವರು ಶ್ಲಾಘಿಸುತ್ತಿದ್ದಾರೆ. ಇದೇ ವೇಳೆ, ಪದೇ ಪದೇ ಇಂತಹ ಸುಳ್ಳು ಮಾಹಿತಿ ಹರಡುತ್ತಿರುವ ಬಗ್ಗೆ ಕೆಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತ್ರಿಷಾ ಅವರ ವೈಯಕ್ತಿಕ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿವೆ. ಅದರಲ್ಲೂ ಅವರ ಮದುವೆ, ಸಂಬಂಧಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ನಿರಂತರವಾಗಿ ವದಂತಿಗಳು ಹಬ್ಬುತ್ತಿವೆ. ನಟ ವಿಜಯ್ ಜೊತೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದನ್ನೂ ಕೆಲವರು ಅನಗತ್ಯ ಚರ್ಚೆಯಾಗಿಸಿದ್ದರು.
ಇಂತಹ ವಿವಾದಗಳಿಗೆ ಈವರೆಗೆ ಹೆಚ್ಚು ಪ್ರತಿಕ್ರಿಯಿಸದ ತ್ರಿಷಾ, ಈ ಬಾರಿ ವದಂತಿಗಳು ಮಿತಿಮೀರಿದ್ದರಿಂದ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ತಮ್ಮ ಕೆಲಸದತ್ತ ಸಂಪೂರ್ಣ ಗಮನ ಹರಿಸಿರುವ ಅವರು, ಒಂದೇ ಪೋಸ್ಟ್ ಮೂಲಕ ಎಲ್ಲಾ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಅವರ ಕೈಯಲ್ಲಿ 'ಕರುಪ್ಪು' ಎಂಬ ಸಿನಿಮಾ ಇದೆ. ಈ ಚಿತ್ರದಲ್ಲಿ ಅವರು ಸೂರ್ಯಗೆ ಜೋಡಿಯಾಗಿ ನಟಿಸಿದ್ದಾರೆ. 'ಕರುಪ್ಪು' ಸಿನಿಮಾ ಇದೇ ಮೇ 14 ರಂದು ತೆರೆಗೆ ಬರಲಿದೆ.
ಶೀಘ್ರದಲ್ಲೇ ಹೊಸ ಚಿತ್ರದ ಬಗ್ಗೆ ಘೋಷಣೆ
'ಕರುಪ್ಪು' ಚಿತ್ರದ ನಂತರ ಅವರ ಕೈಯಲ್ಲಿರುವ ಮತ್ತೊಂದು ಸಿನಿಮಾ ಎಂದರೆ ಮೋಹನ್ಲಾಲ್ - ಜೀತು ಜೋಸೆಫ್ ಕಾಂಬಿನೇಷನ್ನ 'ರಾಮ್'. ಆ ಚಿತ್ರವೂ ಹಲವು ವರ್ಷಗಳಿಂದ ಶೂಟಿಂಗ್ ಆಗದೆ ಬಾಕಿ ಉಳಿದಿದೆ. ಇತ್ತೀಚೆಗೆ ಅವರು ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕಿರಲಿಲ್ಲ. ಇದೇ ಅವರ ಬಗ್ಗೆ ವದಂತಿ ಹಬ್ಬಲು ಮುಖ್ಯ ಕಾರಣವಾಗಿತ್ತು. ತ್ರಿಷಾ ಶೀಘ್ರದಲ್ಲೇ ತಮ್ಮ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ತ್ರಿಷಾ ಕೂಡ ಒಬ್ಬರು ಎಂಬುದು ಗಮನಾರ್ಹ.


