ಪ್ರಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು 65ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಯಿಯಂತೆಯೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ ಅವರ ಹಠಾತ್ ನಿಧನವು ಚಿತ್ರರಂಗ ಮತ್ತು ಅವರ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.
ಬೆಂಗಳೂರು (ಜ.22): ತಮ್ಮ ಸುಮಧುರ ಗಾಯನದಿಂದ ಇಂದಿಗೂ ದೇಶದೆಲ್ಲೆಡೆ ಸುಪ್ರಸಿದ್ಧರಾಗಿರುವ ಪ್ರಖ್ಯಾತ ಹಿರಿಯ ಗಾಯಕಿ ಎಸ್.ಜಾನಕಿ ತಮ್ಮ 88ರ ಇಳಿವಯಸ್ಸಿನಲ್ಲಿ ಇದ್ದೊಬ್ಬ ಏಕೈಕ ಮಗನನ್ನು ಕಳೆದುಕೊಂಡಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿರುವ ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಒಬ್ಬನೇ ಮಗ ಮುರಳಿ ಕೃಷ್ಣ ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
ನಕ್ಕೀರನ್ ವರದಿಯ ಪ್ರಕಾರ, ಅವರು ಹೃದಯಾಘಾತದಿಂದ ನಿಧನರಾದರು. ಇಡೀ ಚಿತ್ರರಂಗ ಮತ್ತು ಅವರ ಅಭಿಮಾನಿಗಳು ಮುರಳಿ ಕೃಷ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.
ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಎಸ್.ಜಾನಕಿ 50ರ ದಶಕದ ಆರಂಭದಲ್ಲಿಯೇ ಹಿನ್ನಲೆ ಗಾಯಕಿಯಾಗಿ ಪರಿಚತವಾಗಿದ್ದರು. ಬಳಿಕ ತಮ್ಮ ನೆಲೆಯನ್ನು ಚೆನ್ನೈಗೆ ಬದಲಾಯಿಸಿದ್ದರು. ಅವರ ಈ ಸಮಯ ಅಸಾಧಾರಣ ಕೆಲಸದ ಅವಧಿಯಾಗಿತ್ತು. ಈ ಅವಧಿಯಲ್ಲಿ ರಾಮ್ ಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್.ಜಾನಕಿ, ಕೆಲ ವರ್ಷದಲ್ಲೇ ಮುರಳಿ ಕೃಷ್ಣನಿಗೆ ಜನ್ಮ ನೀಡಿದ್ದರು. ಎಸ್. ಜಾನಕಿ ಅವರಂತೆಯೇ ಮುರಳಿ ಕೃಷ್ಣ ಕೂಡ ಕಲೆಯಲ್ಲಿ ತಮ್ಮ ಆಸಕ್ತಿ ಬೆಳೆಸಿಕೊಂಡಿದ್ದರು.
ಭರತನಾಟ್ಯ ಅಭ್ಯಾಸ ಮಾಡಿದ್ದ ಮುರಳಿ ಕೃಷ್ಣ
ತಮಿಳು ಹಾಗೂ ತೆಲುಗು ಭಾಷೆಯ ಕಲೆಯಲ್ಲಿ ಗಮನಸೆಳೆದಿದ್ದ ಮುರಳಿ ಕೃಷ್ಣ ಸಿನಿಮಾಗಳಲ್ಲಿ ಮಾತ್ರವಲ್ಲದೆ ಭರತನಾಟ್ಯವನ್ನೂ ಅಭ್ಯಾಸ ಮಾಡಿದ್ದರು. ಭರತನಾಟ್ಯದ ಅಭ್ಯಾಸ ವೇಳೆ ತಮ್ಮ ಗುರುವಾಗಿದ್ದ ಉಮಾ ಎನ್ನುವವರನ್ನೇ ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಜನಿಸಿದ ಬಳಿ ಉಮಾ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದರು. ವಿಚ್ಚೇದನದ ಬಳಿಕ ಹೆಣ್ಣು ಮಕ್ಕಳು ಕೂಡ ತಾಯಿಯೊಂದಿಗೆ ಹೋಗಿದ್ದರಿಂದ, ಮುರಳಿ ಕೃಷ್ಣ ತಮ್ಮ ತಾಯಿ ಎಸ್.ಜಾನಕಿಯೊಂದಿಗೆ ಉಳಿದ ದಿನಗಳನ್ನು ಕಳೆದಿದ್ದರು.
ಆದರೆ, ಗುರುವಾರ ಬೆಳಗಿನ ಜಾವ ಹಠಾತ್ ಆಗಿ ಅವರ ಆರೋಗ್ಯ ಏರುಪೇರಾಗಿದ್ದರಿಂದ ಹೃದಯಾಘಾತಕ್ಕೆ ಒಳಗಾಗಿ ಸಾವು ಕಂಡಿದ್ದಾರೆ. ಇದನ್ನು ಎಸ್.ಜಾನಕಿ ಅವರ ಕುಟುಂಬವೇ ಬಹಿರಂಗಪಡಿಸಿದೆ. ಈ ಶೋಕ ಕಾಲದಲ್ಲಿ ಅನೇಕ ಚಲನಚಿತ್ರ ಮತ್ತು ಸಂಗೀತ ಗಣ್ಯರು ಅವರಿಗೆ ಸಹಾಯ ಮಾಡಲು ಮತ್ತು ಹಿರಿಯ ಗಾಯಕನಿಗೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಲು ಮುಂದೆ ಬಂದರು.
ಎಸ್. ಜಾನಕಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 31 ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಯೋಜನೆಯ ಸಾಕಷ್ಟು ಗೀತೆಗಳನ್ನು ಅವರು ಹಾಡಿದ್ದಾರೆ ಇನ್ನು ಎಸ್ಪಿಬಿ ಅವರೊಂದಿಗಿನ ಯುಗಳ ಗೀತೆಗಳಿ ಇಂದಿಗೂ ಅಮರವಾಗಿ ಉಳಿದಿದೆ.


