ಸಾಲಿಗ್ರಾಮ ಅಂದ್ರೆ ದೈವೀ ಕಲ್ಲು, ಹಾಗೆಯೇ ಅದು ನನ್ನ ಅಮ್ಮನ ಊರು!

-ಸಾಲಿಗ್ರಾಮ ಎನ್ನುವ ಹೆಸರಿಗಿರುವ ಅರ್ಥ, ಹಾಗೆಯೇ ಆ ಊರಿನ ಜತೆಗಿರುವ ತಮ್ಮ ನಂಟನ್ನು ಶಿವರಾಜ್ ಕುಮಾರ್ ಹೀಗೆ ನೆನಪಿಸಿಕೊಂಡರು. ಸಾಲಿಗ್ರಾಮ ಅಂದಾಕ್ಷಣ ಈಗಲೂ ನೆನಪಾಗುವ ಆ ದಿನಗಳ ಜತೆಗೆ ತಮ್ಮ ತಾಯಿಯನ್ನು ಸ್ಮರಿಸಿಕೊಂಡು ಭಾವುಕರಾದರು.

‘ಅಪ್ಪಾಜಿ ಅವರದ್ದು ಗಾಜನೂರು, ಅಮ್ಮ ಹುಟ್ಟಿ ಬೆಳೆದಿದ್ದು ಸಾಲಿಗ್ರಾಮದಲ್ಲಿ. ಅಪ್ಪಾಜಿ ನಂಟಿನ ಜತೆಗೆ ಗಾಜನೂರು, ಅಮ್ಮನ ನಂಟಿನ ಜತೆಗೆ ಸಾಲಿಗ್ರಾಮ. ಎರಡು ನನಗೆ ಅನುಭವ ಕೊಟ್ಟು, ನೆನಪು ಉಳಿಸಿದ ಊರು’ ಅಂತ ಶಿವರಾಜ್ ಕುಮಾರ್, ಬುಧವಾರ ಸಂಜೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಹೇಳಿದರು. ಅವರು ಅಲ್ಲಿ ಅಷ್ಟೆಲ್ಲ ಹೇಳಿದ್ದಕ್ಕೆ ಕಾರಣ ‘ಸಾಲಿಗ್ರಾಮ’ ಚಿತ್ರ. ಹರ್ಷ ನಾರಾಯಣ ಸ್ವಾಮಿ ನಿರ್ದೇಶನದ ಚಿತ್ರವೇ
‘ಸಾಲಿಗ್ರಾಮ’. ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗಷ್ಟೇ, ಆಡಿಯೋ ಸೀಡಿ ಹೊರ ತಂದಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಿವರಾಜ್ ಕುಮಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಹಿರಿಯ ನಿರ್ದೇಶಕ ದೊರೆ ಭಗವಾನ್, ಚಿತ್ರ ಸಾಹಿತಿ ಕೆ. ಕಲ್ಯಾಣ್ ಆಡಿಯೋ ಸೀಡಿ ಬಿಡುಗಡೆಗೊಳಿಸಿದರು.

ಚಿತ್ರಕ್ಕೆ ಸನ್ನಿರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಎಲ್ಲಾ ಹಾಡುಗಳು ಕೇಳಲು ಇಂಪಾಗಿವೆ. ಆಡಿಯೋ ಸೀಡಿ ಬಿಡುಗಡೆಗೂ ಮುನ್ನ, ಸಭಿಕರಿಗೆ ಹಾಡುಗಳನ್ನು ಕೇಳಿಸಲಾಯಿತು.ದಿನೇಶ್ ಗುಂಡೂರಾವ್ ‘ಸಂಗೀತ ನಿರ್ದೇಶಕರು ಚಿತ್ರಕ್ಕೆ ಒಳ್ಳೆಯ ಸಂಗೀತ ಕೊಟ್ಟಿದ್ದಾರೆ ಎಂದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ, ‘ತಮ್ಮೂರು ಸಾಲಿಗ್ರಾಮ ಹೆಸರಲ್ಲಿ ಸಿನಿಮಾ ಬರುತ್ತಿರುವುದು ಖುಷಿ ತಂದಿದೆ. ಚಿತ್ರಕ್ಕೆ ಸಕ್ಸಸ್ ಸಿಗುವುದು ಖಚಿತ’ ಎಂದರು. ನಾಯಕ ಸಿದ್ಧಾರ್ಥ್, ನಾಯಕಿಯರಾದ ಪಲ್ಲವಿ ರಾಜು, ದಿಶಾ ಪೂವಯ್ಯ ಕೂಡ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು.‘ಪೂರ್ಣಶ್ರೀ ಕ್ರಿಯೇಷನ್ಸ್’ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರ, ಈಗ
ಆಡಿಯೋ ಸೀಡಿ ಬಿಡುಗಡೆಯೊಂದಿಗೆ ಪ್ರಚಾರಕ್ಕೆ ಕಾಲಿಟ್ಟಿದೆ. ಇಷ್ಟರಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಚಿಂತನೆ ಚಿತ್ರತಂಡಕ್ಕಿದೆ.