ಎರಡೂವರೆ ವರ್ಷಗಳಿಂದ ವೀಕ್ಷಕರನ್ನು ರಂಜಿಸಿದ್ದ ಸೀತಾರಾಮ ಸೀರಿಯಲ್​ ಶೂಟಿಂಗ್​ ಮುಗಿದಿದ್ದು, ಇನ್ನೇನು ಮುಕ್ತಾಯ ಆಗಲಿದೆ. ಅಷ್ಟಕ್ಕೂ ಸೀರಿಯಲ್​ ಮುಗಿಸಲು ಕಾರಣವೇನು? ನಟ ಅಶೋಕ್​ ಹೇಳಿದ್ದೇನು?

ಸೀತಾರಾಮ ಸೀರಿಯಲ್​ನ ಕ್ಲೈಮ್ಯಾಕ್ಸ್​ ಭಾಗ ಶುರುವಾಗಿದೆ. ಇನ್ನೇನು ಭಾರ್ಗವಿಯ ಕಿತಾಪತಿ, ರಾಮ್​ಗೆ ಗೊತ್ತಾಗುವುದು ಒಂದು ಬಾಕಿ ಇತ್ತು. ಅದು ಕೂಡ ಬಹುತೇಕ ಗೊತ್ತಾಗಿದೆ. ಸುಬ್ಬಿಗೆ ಇದಾಗಲೇ ಸಿಹಿಯಿಂದ ಎಲ್ಲಾ ಗೊತ್ತಾಗಿರುವ ಹಿನ್ನೆಲೆಯಲ್ಲಿ, ಅವಳೇ ಸತ್ಯ ಹೇಳಿದ್ದಾಳೆ. ಸಿಹಿ ತನಗೆ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ವಿಷಯಗಳನ್ನು ಹೇಳಿದ್ದಾಳೆ ಎಂದು ಸುಬ್ಬಿ ಕೂಡ ಹೇಳಿಯಾಗಿದೆ. ಸತ್ಯಜೀತ್​ ವಾಣಿಯ ಕೊಲೆ ಮಾಡಿಲ್ಲ ಎನ್ನುವ ಸತ್ಯವೂ ತಿಳಿದಾಗಿದೆ. ಇದರ ಹಿಂದೆ ಭಾರ್ಗವಿಯ ಕೈವಾಡ ಇದೆ ಎನ್ನುವುದು ಸೀತಾಳಿಗೆ ಗೊತ್ತಾಗಿದ್ದು, ಆಕೆಯನ್ನು ಭಾರ್ಗವಿ ಕಿಡ್​ನ್ಯಾಪ್​ ಮಾಡಿಕೊಂಡು ಹೋಗಿದ್ದಾಳೆ. ಮುಂದೆ ಏನಾಗಬಹುದು ಎಂದು ಎಲ್ಲರೂ ಊಹಿಸಿಯೇ ಇರುತ್ತಾರೆ. ಆದರೆ ಎರಡೂವರೆ ವರ್ಷಗಳಿಂದ ಶುರುವಾಗಿರುವ ಸೀತಾರಾಮ ಸೀರಿಯಲ್​ ಇನ್ನೂ ಮುಂದುವರೆಸಿ ಎಂದು ಹಲವು ವೀಕ್ಷಕರು ಹೇಳುತ್ತಲೇ ಇದ್ದಾರೆ. ಕೆಲವು ಸೀರಿಯಲ್​ಗಳು ನಾಲ್ಕೈದು ವರ್ಷ ಎಳೆಯುವುದು ಇದೆ. ಈ ಸೀರಿಯಲ್​ ಅನ್ನು ಇಷ್ಟು ಬೇಗ ಮುಗಿಸಬೇಡಿ ಎನ್ನುವುದು ಅವರ ಮಾತು. ಆದರೆ ಈ ಸೀರಿಯಲ್​ ಅನ್ನು ಯಾಕೆ ಮುಗಿಸುತ್ತಿದ್ದಾರೆ ಎನ್ನುವ ಬಗ್ಗೆ ಅಶೋಕ್​ ಪಾತ್ರಧಾರಿಯಾಗಿರುವ ಅಶೋಕ್​ ಶರ್ಮಾ ಅವರು ಸಂದರ್ಶನವೊಂದರಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಇದೇ ಕಾರಣ ಎಂದು ಅವರು ನೇರವಾಗಿ ಹೇಳದಿದ್ದರೂ ಸಂದರ್ಶಕರು ಕೇಳಿದ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರದಿಂದ ಸೀರಿಯಲ್​ ಮುಗಿಯಲು ಏನು ಕಾರಣ ಎನ್ನುವುದನ್ನು ಸುಲಭದಲ್ಲಿ ತಿಳಿಯಬಹುದಾಗಿದೆ.

ಎಫ್​ಡಿಎಫ್​ಎಸ್​ ಯುಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್​ ಮಾಡಿದ್ದಾರೆ. ಸೀತಾರಾಮ ಸೀರಿಯಲ್​ ಮುಗಿಯುತ್ತಿರುವ ಬಗ್ಗೆ ನೋವನ್ನೂ ತೋಡಿಕೊಂಡಿರುವ ಅಶೋಕ್​ ಅವರು ಈ ಎರಡೂವರೆ ವರ್ಷಗಳಲ್ಲಿ ಹೇಗೆ ನಟ-ನಟಿಯರು ಕನೆಕ್ಟ್​ ಆಗಿದ್ವಿ, ಹೇಗೆ ದೂರವಾಗುವುದು ಬೇಸರವಾಗುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸೀತಾರಾಮ ಸೀರಿಯಲ್​ ಟಿಆರ್​ಪಿ ಕಳೆದುಕೊಳ್ಳುತ್ತಿರುವ ಕಾರಣ, ಈ ಸೀರಿಯಲ್ ಮುಗಿಸಲು ಕಾರಣ ಎನ್ನುವಂಥ ಪ್ರಶ್ನೆಗೆ ಅಶೋಕ್​ ಅವರು ನೇರವಾಗಿ ಉತ್ತರ ಹೇಳದಿದ್ದರೂ ಕೆಲವೊಮ್ಮೆ ರಿಸ್ಕ್​ ತೆಗೆದುಕೊಂಡಾಗ ಹೀಗೆ ವರ್ಕ್​ಔಟ್​ ಆಗುವುದಿಲ್ಲ. ಲೈಫ್​ನಲ್ಲಿಯೂ ಹಾಗೆಯೇ ಅಲ್ವಾ, ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ.

ಅಷ್ಟಕ್ಕೂ ಆ ರಿಸ್ಕ್​ ಏನು ಎಂದು ನೋಡುವುದಾದರೆ, ಸೀರಿಯಲ್​ ವೀಕ್ಷಕರಿಗೆ ತಿಳಿದಿರುವಂತೆ ಅದು ಸಿಹಿಯ ಸಾವು. ಸಿಹಿಯನ್ನು ಅಪಘಾತದಲ್ಲಿ ಯಾವಾಗ ಸಾಯಿಸಲಾಯಿತೋ ಆಗಲೇ ಬಹುತೇಕ ಮಂದಿ ಸೀರಿಯಲ್​ ನೋಡುವುದನ್ನೇ ಬಿಟ್ಟರು. ಅದೇ ಇನ್ನೊಂದೆಡೆ, ಸೀರಿಯಲ್​ ಟೈಮಿಂಗ್ ಬದಲಾವಣೆಯಿಂದ ಟಿಆರ್​ಪಿ ಕೂಡ ಕುಸಿದಿತ್ತು. ಸಿಹಿಯ ಸಾವಿನ ಬಳಿಕ ಜನರು ಇದನ್ನು ಮತ್ತೆ ನೋಡಲು ಇಷ್ಟಪಟ್ಟಿರಲಿಲ್ಲ ಎನ್ನುವುದು ಒಂದುಕಡೆಯಾದರೆ, ಈಗ ಪ್ರಸಾರ ಆಗ್ತಿದ್ದ ಸಮಯದಲ್ಲಿ ನೋಡಲು ಬಹಳಷ್ಟು ಮಂದಿಗೆ ಆಗುತ್ತಿರಲಿಲ್ಲ ಎನ್ನುವುದೂ ಮತ್ತೊಂದು ಕಾರಣ. ಹೀಗೆ ಸಿಹಿಯ ಪಾತ್ರದ ಜೊತೆ ತುಂಬಾ ಕನೆಕ್ಟ್​ ಆಗಿದ್ದ ವೀಕ್ಷಕರು, ಸಿಹಿಯಿಂದಾಗಿಯೇ ಸೀರಿಯಲ್​ ನೋಡುತ್ತಿದ್ದ ಜನರು ಸೀರಿಯಲ್​ ಕೈಬಿಟ್ಟರು. ಅದನ್ನು ಮೇಲಕ್ಕೆ ಎತ್ತಲು ಸಾಕಷ್ಟು ಸರ್ಕಸ್​ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಇದೇ ಕಾರಣಕ್ಕೆ ಸೀರಿಯಲ್​ ಮುಗಿಸಲಾಗಿದೆ ಎಂದು ಅಶೋಕ್ ಅವರ ಮಾತುಗಳಿಂದ ತಿಳಿಯಬಹುದಾಗಿದೆ.

ಅದೇನೇ ಇದ್ದರೂ ಒಂದು ಒಳ್ಳೆಯ ರೀತಿಯಲ್ಲಿ ಸೀರಿಯಲ್​​ ಮುಕ್ತಾಯ ಕಾಣಲಿದೆ ಎನ್ನುವುದು ಸಮಾಧಾನ. ಮೂರು ವರ್ಷಗಳವರೆಗೆ ಒಂದೇ ಟೀಮ್​ನಲ್ಲಿ ಕೆಲಸ ಮಾಡುತ್ತಿದ್ದರೆ, ಅವರೇ ಕುಟುಂಬದ ಸದಸ್ಯರು ಎನ್ನಿಸಿಕೊಳ್ಳುವ ಕಾರಣ, ಅವರನ್ನು ಬಿಟ್ಟುಹೋಗುವುದು ಕಲಾವಿದರಿಗೆ ನೋವಿನ ಮಾತೇ. ಇದಾಗಲೇ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಶೇರ್​ ಮಾಡಿಕೊಂಡಿದ್ದ ವಿಡಿಯೋದಲ್ಲಿ ಸಿಹಿ ಮತ್ತು ರಾಮ್​ ಪಾತ್ರಧಾರಿಗಳು ತುಂಬಾ ಭಾವುಕ ಆಗಿದ್ದನ್ನು ನೋಡಬಹುದು. ಇಬ್ಬರೂ ತುಂಬಾ ಕಣ್ಣೀರು ಹಾಕಿದರು ಎಂದು ಈ ಸಂದರ್ಶನದಲ್ಲಿ ಅಶೋಕ್​ ಅವರೂ ಹೇಳಿದ್ದಾರೆ. ಅಂದಹಾಗೆ ಅಶೋಕ್​ ಅವರ ನಿಜವಾದ ಹೆಸರು ಕೂಡ ಅಶೋಕ್​ ಶರ್ಮಾ ಆಗಿದೆ. ಅಶೋಕ್ ಅವರ ನಿಜವಾದ ಹೆಸರು ಅಶೋಕ್​ ಶರ್ಮಾ. ಅವರು ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ.

YouTube video player