'ಕದ್ದಚಿತ್ರ' ಸಿನಿಮಾ ಬಗ್ಗೆ ಕೊನೇ ಬಾರಿ ಸ್ಪಂದನಾ ಹೇಳಿದ್ದೇನು? ಇದು ವಿಜಯ್ ರಾಘವೇಂದ್ರ ಕೊನೆಯ ಚಿತ್ರವೇ?
ಮಡದಿ ಸ್ಪಂದನಾ ಸಾವಿನ ಬಳಿಕ ಮೊದಲ ಬಾರಿಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ನಟ ವಿಜಯ್ ರಾಘವೇಂದ್ರ, ತಮ್ಮ ಹೊಸ ಸಿನಿಮಾ 'ಕದ್ದಚಿತ್ರ'ದ ಬಗ್ಗೆ ಸ್ಪಂದನಾ ಅಭಿಪ್ರಾಯದ ಬಗ್ಗೆಯೂ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು (ಆ.31): ಮಡದಿ ಸ್ಪಂದನಾ ಸಾವಿನ ನಂತರ ಮೊದಲ ಬಾರಿಗೆ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರು, ತಮ್ಮ ಹೊಸ ಚಿತ್ರ 'ಕದ್ದಚಿತ್ರ'ದ ಬಗ್ಗೆ ಸ್ಪಂದನಾ ಅಭಿಪ್ರಾಯದ ಬಗ್ಗೆಯೂ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸ್ಯಾಂಡಲ್ವುಡ್ನ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅವರ ಕದ್ದಚಿತ್ರ ಇನ್ನೇನು ಸೆ.8ರಂದು ಬಿಡುಗಡೆ ಆಗುತ್ತಿದೆ. ಕನ್ನಡ ಚಿತ್ರರಂಗದ ಅತ್ಯಂತ ಸುಂದರ ಮತ್ತು ಉತ್ತಮ ಜೋಡಿಗಳಲ್ಲಿ ಒಂದಾಗಿದ್ದ ಸ್ಪಂದನಾ- ವಿಜಯ್ ರಾಘವೇಂದ್ರ ಜೋಡಿಯ ಮೇಲೆ ಅದ್ಯಾವ ಕರಾಳ ದೃಷ್ಟಿ ಬಿತ್ತೋ ಗೊತ್ತಿಲ್ಲ. ಆ.07ರಂದು ಇಹಲೋಕವನ್ನು ಬಿಟ್ಟು ಸ್ಪಂದನಾ ಬ್ಯಾಂಕಾಕ್ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ನಡೆದ ವಿಜಯ ಸ್ಪಂದನಾ ಸಂದರ್ಶನ ಕಾರ್ಯಕ್ರಮಲ್ಲಿ ಮಾತನಾಡಿದ ವಿಜಯ್ ರಾಘವೇಂದ್ರ ಅವರು, ಸ್ಪಂದನಾ ಜೊತೆಗಿನ ಒಡನಾಟ, ಮದುವೆ, ವೈವಾಹಿಕ ಜೀವನ, ಮಗನ ಭವಿಷ್ಯಕ್ಕೆ ಮಾಡಿಕೊಂಡಿದ್ದ ಯೋಜನೆಗಳು ಹಾಗೂ ತಮ್ಮ ಸಿನಿಮಾಗಳ ಬಗ್ಗೆ ಪತ್ನಿ ಸ್ಪಂದನಾ ಮಾಡುತ್ತಿದ್ದ ವಿಮರ್ಶೆಯ ಬಗ್ಗೆ ತಿಳಿಸಿದ್ದಾರೆ.
ದೇವರು ಒಂದು ಅವಕಾಶ ಕೊಟ್ಟಿದ್ದರೂ ಸ್ಪಂದನಾ ಸಾವು ಗೆದ್ದು ಬಿಡುತ್ತಿದ್ದಳು: ವಿಜಯ್ ರಾಘವೇಂದ್ರ
ಕದ್ದಚಿತ್ರದ ಬಗ್ಗೆ ಸ್ಪಂದನಾ ಕೊನೇ ಮಾತು: ಇನ್ನು ಸ್ಪಂದನಾ ಜೊತೆಗಿದ್ದಾಗ ನಾನು ಅಭಿನಯ ಮಾಡುತ್ತಿದ್ದ ಕದ್ದಚಿತ್ರದಲ್ಲಿನ ವಿಭಿನ್ನ ಮತ್ತು ಎಂದೂ ಮಾಡಿರದ ಹೊಸ ಪಾತ್ರವನ್ನು ಮಾಡುತ್ತಿದ್ದ ಬಗ್ಗೆ ಬಹಳ ಸಂತಸವಿತ್ತು. ಈ ಸಿನಿಮಾದ ಫಸ್ಟ್ಲುಕ್ ಮತ್ತ ಟ್ರೇಲರ್ ನೋಡಿ, ತುಂಬಾ ಸಂಸತ ವ್ಯಕ್ತಪಡಿಸಿ ಲವ್ ಸಿಂಬಲ್ ಕಳಿಸಿದ್ದರು. ಸಾಮಾನ್ಯವಾಗಿ ಎಂದಿಗೂ ಯಾವುದಕ್ಕೂ ರಿಯಾಕ್ಟ್ ಮಾಡದ ಸ್ಪಂದನಾಳ ಸ್ಪಂದನೆಯಿಂದ ನನಗೆ ತುಂಬಾ ಖುಷಿಯಾಗಿತ್ತು. ಹೊಸ ಆಲೋಚನೆ, ನಟನಾ ತಿದ್ದುಪಡಿಗಳನ್ನು ನಾನು ತಿದ್ದಿಕೊಳ್ಳುತ್ತಾ ಬಂದಿದ್ದ ನನಗೆ ಸ್ಪಂದನಾ ಪ್ರತಿಕ್ರಿಯೆಯಿಂದ ಸ್ಫೂರ್ತಿಯೂ ಸಿಕ್ಕಿದ್ದು, ಯಶಸ್ಸಿನ ನಿರೀಕ್ಷೆಯಲ್ಲಿದ್ದೇನೆ ಎಂದರು.
ಸಿಗರೇಟ್ ವಾಸನೆ ಬಂದಿದ್ದಕ್ಕೆ ರೇಗಿದ್ದಳು: ಕದ್ದ ಚಿತ್ರ ಸಿನಿಮಾದಲ್ಲಿ ಬರಹಗಾರನ ಪಾತ್ರ ನಿರ್ವಹಿಸಿದ್ದ ವೇಳೆ ಸಿಗರೇಟ್ ಸೇದುವ ಪಾತ್ರವನ್ನೂ ಮಾಡಿದ್ದೇನೆ. ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು, ಎಣ್ಣೆ ಬಾಟಲಿ ಕೈಯಲ್ಲಿ ಹಿಡಿದು ಪಾತ್ರ ಮಾಡಿದ್ದೇನೆ. ಈ ಹಿಂದೆ ಇಂತಹ ಯಾವುದೇ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆಗ, ಅಭ್ಯಾಸ ಮಾಡಿಕೊಳ್ಳಬೇಡಿ ಎಂದುನೇರವಾಗಿ ಹೇಳಿದ್ದಳು. ಇದಕ್ಕೆ ನಾನು 42 ವರ್ಷಗಳೇ ಮಾಡಿಲ್ಲದವರು ಈಗ್ಯಾಕೆ ಅಭ್ಯಾಸ ಮಾಡಿಕೊಳ್ಳಲಿ ಎಂದು ಪತ್ನಿಯೊಂದಿಗೆ ಚರ್ಚೆ ಮಾಡಿದ್ದನ್ನು ಹಂಚಿಕೊಂಡರು.
ಕದ್ದಚಿತ್ರದಲ್ಲಿ ಏನಿದೆ? ಜನರು ಯಾಕೆ ನೋಡಬೇಕು? ಸುಹಾಸ್ ಮತ್ತು ನಮ್ರತಾ ಫೋನ್ ಕರೆ ಮಾಡಿ ಕಥೆಯ ಬಗ್ಗೆ ಹೇಳಿಕೊಂಡರು. ನಾನು ಮಾಡಿದ 57-58 ಸಿನಿಮಾಗಳಲ್ಲಿ 35ಕ್ಕೂ ಹೆಚ್ಚು ಸಿನಿಮಾಗಳನ್ನು ಹೊಸಬರ ಜೊತೆಗೆ ಮಾಡಿದ್ದೇನೆ. ಹೊಸಬರು ಹೇಳಿದ ಎಲ್ಲ ಹೊಸ ಹೊಸ ಆಲೋಚನೆ, ನಟನಾ ತಿದ್ದುಪಡಿಗಳನ್ನು ನಾನು ತಿದ್ದಿಕೊಳ್ಳುತ್ತಾ ಬಂದಿದ್ದೇನೆ. ಇನ್ನು ಕದ್ದಚಿತ್ರ ಟೈಟಲ್ ಮತ್ತು ಟ್ರೇಲರ್ ಹೇಳುವಂತೆಯೇ ಕಥಾವಸ್ತು ವಿಭಿನ್ನವಾಗಿದೆ. ಸಿನಿಮಾ ಮನರಂಜನೆ ಕೊಡುವ ಜೊತೆಗ ಎಮೋಷನ್ ಕೂಡ ನೀಡುತ್ತದೆ. ಆದರೆ, ಸಿಕ್ಕಾಪಟ್ಟೆ ಟ್ವಿಸ್ಟ್ ಇದೆ ಎಂದು ಹೇಳೊಲ್ಲ. ಸಸ್ಪೆನ್ಸ್ ಹಾಗೂ ಟ್ವಿಸ್ಟ್ ಕೂಡ ಇದ್ದು ಅದನ್ನು ಕುಳಿತು ನೋಡಿದಾಗ ಗೊತ್ತಾಗುತ್ತದೆ ಎಂದು ಹೇಳಿದರು.
ಮೊನ್ನೆ ಕನಸಲ್ಲಿ ಬಂದಿದ್ದ ಸ್ಪಂದನಾ, ಮಗನ ಹೋಮ್ವರ್ಕ್ ಬಗ್ಗೆ ಕೇಳಿದ್ಲು: ವಿಜಯ್ ರಾಘವೇಂದ್ರ
ಸ್ಪಂದನಾಗೆ ಇಷ್ಟವಾಗುವ ಸಿನಿಮಾಗಳು: ಇನ್ನು ಸ್ಪಂದನಾಗೆ ನನ್ನ ನಟನೆಯ 'ಕಲ್ಲರಳಿ ಹೂವಾಗಿ' ಸಿನಿಮಾವನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಳು. ಜೊತೆಗೆ, ಇತ್ತೀಚಿನ ದಿನಗಳಲ್ಲಿ ಮಾಲ್ಗುಡಿ ಡೇಸ್ ಸಿನಿಮಾನವನ್ನು ಇಷ್ಟಪಟ್ಟಿದ್ದಳು. ಅದಾದ ನಂತರ ಕದ್ದಚಿತ್ರ ಸಿನಿಮಾ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಳು. ಈ ಚಿತ್ರ ಸೆಪ್ಟಂಬರ್ 8ರಂದು ಕದ್ದಚಿತ್ರ ಸಿನಿಮಾ ರಿಲೀಸ್ ಆಗುತ್ತಿದೆ. ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ನೀಡಿದಂತೆ ಮುಕ್ತ ಮನಸ್ಸಿನಿಂದ, ಪ್ರಾಕ್ಟಿಕಲ್ ಆಗಿ ಪ್ರೀತಿಯಿಂದ ಬಂದು ಸಿನಿಮಾ ನೋಡಿ ನಮ್ಮನ್ನು ಹಾರೈಸಿ. ನಿಮ್ಮ ಪ್ರೀತಿ ವಿಶ್ವಾಸ ಧೈರ್ಯ ಹೀಗೆಯೇ ಇರಲಿ. ಅದನ್ನು ಧೈರ್ಯವಾಗಿ ಕಾಪಾಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಹೇಳಿದರು.
ಕದ್ದಚಿತ್ರ ಇದೇ ನಿಮ್ಮ ಕೊನೇಚಿತ್ರವೇ?
ನಾನು ಸಿನಿಮಾದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದಾಗ್ಯೂ ಕೂಡ ಕದ್ದಚಿತ್ರದ ಪಾತ್ರಗಳು ನನಗೂ ಹೊಸತಾಗಿದೆ. ಆದರೆ, ನಾನು ಈಗ ಕದ್ದಚಿತ್ರದಲ್ಲಿ ಮಾಡಿದ ಪಾತ್ರವನ್ನು ಜನರು ಯಾವ ರೀತಿ ಸ್ವೀಕಾರ ಮಾಡುತ್ತಾರೆಯೋ ಅದನ್ನು ನೋಡಿಕೊಂಡು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಕದ್ದಚಿತ್ರದಲ್ಲಿ ಮಾಡಿದ ಪಾತ್ರ ನಿನಗೆ ಒಪ್ಪುವುದಿಲ್ಲ ಎಂದು ಹೇಳಿದರೆ, ಇಂತಹ ಪಾತ್ರಗಳಿಗೆ ಕೊನೆಯ ಚಿತ್ರವಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಯೋಜನೆ ಮಾಡಿಕೊಂಡೇ ಮುಂದೆ ಹೆಜ್ಜೆ ಇಡುತ್ತಿದ್ದು, ಎಲ್ಲ ಪ್ರಯತ್ನಗಳೂ ಹೊಸತಾಗಿರಲಿವೆ ಎಂದು ವಿಜಯ್ ರಾಘವೇಂದ್ರ ತಿಳಿಸಿದರು.