Spider Man Brand New Day India: 'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್, ತನ್ನ ಬಹುನಿರೀಕ್ಷಿತ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಚಿತ್ರದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿಯನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಇಂತಹ ಬೃಹತ್ ಹಾಲಿವುಡ್ ಸೂಪರ್ಹೀರೋ ಫ್ರಾಂಚೈಸಿಯ ಅಧಿಕೃತ ಪ್ರಚಾರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸೋನಿ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, "ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ…" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೊ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಪ್ರೋಮೋ ವೈರಲ್ ಆಗಿದ್ದು, ಕನ್ನಡ ಸಿನಿಪ್ರಿಯರಲ್ಲೂ ಸಂಚಲನ ಮೂಡಿಸಿದೆ.
ಪ್ರೋಮೋದಲ್ಲಿ ಏನಿದೆ?
ಈ ವಿಶೇಷ ಪ್ರೋಮೋದಲ್ಲಿ, 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಅಂತ್ಯದಲ್ಲಿ ನಡೆಯುವ ಪ್ರಮುಖ ತಿರುವನ್ನು ರಿಷಬ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ತನ್ನ ನಿಜವಾದ ಗುರುತನ್ನು ಇಡೀ ಜಗತ್ತಿನಿಂದ ಅಳಿಸಿಹಾಕಿಕೊಂಡ ಪೀಟರ್ ಪಾರ್ಕರ್ನ ಒಂಟಿತನ, ತ್ಯಾಗ ಮತ್ತು ಸೂಪರ್ಹೀರೋ ಆಗಿರುವ ಜವಾಬ್ದಾರಿಯನ್ನು ಭಾವನಾತ್ಮಕವಾಗಿ ನಿರೂಪಿಸಿರುವುದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ, 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಮುಂದುವರಿದ ಭಾಗವಾಗಿದೆ. ಡಾಕ್ಟರ್ ಸ್ಟ್ರೇಂಜ್ನ ಮಂತ್ರದ ಪರಿಣಾಮವಾಗಿ ಪೀಟರ್ ಪಾರ್ಕರ್ನನ್ನು ಸ್ನೇಹಿತ ನೆಡ್, ಪ್ರಿಯತಮೆ ಎಂಜೆ ಸೇರಿದಂತೆ ಇಡೀ ಜಗತ್ತೇ ಮರೆತುಬಿಡುತ್ತದೆ. ನಂತರ ನ್ಯೂಯಾರ್ಕ್ ನಗರದಲ್ಲಿ ತನ್ನ ನಿಜವಾದ ಗುರುತನ್ನು ಯಾರಿಗೂ ಬಹಿರಂಗಪಡಿಸದೆ, ಸಂಪೂರ್ಣ ಒಂಟಿಯಾಗಿ ಸ್ಪೈಡರ್ ಮ್ಯಾನ್ ಆಗಿ ಅಪರಾಧಗಳ ವಿರುದ್ಧ ಹೋರಾಡುವ ಪೀಟರ್ ಪಾರ್ಕರ್ನ ಹೊಸ ಅಧ್ಯಾಯವೇ ಈ ಚಿತ್ರದ ಕಥಾಹಂದರ.
ಚಿತ್ರ ಬಿಡುಗಡೆಯ ಮುನ್ನವೇ ಭಾರತದಲ್ಲಿ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ'ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ವೇಗ ಪಡೆದುಕೊಂಡಿದೆ. ಟಾಮ್ ಹಾಲ್ಯಾಂಡ್ ನಟನೆಯ ಈ ಬಹುನಿರೀಕ್ಷಿತ ಸಿನಿಮಾ ಜುಲೈ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಇಂಗ್ಲಿಷ್ ಜೊತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಪ್ರೇಕ್ಷಕರ ಮುಂದೆ ಬರಲಿದೆ. ರಿಷಬ್ ಶೆಟ್ಟಿ ಮತ್ತು ಸೋನಿ ಪಿಕ್ಚರ್ಸ್ಗಳ ಈ ಸಹಯೋಗವು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಗೌರವ ತಂದುಕೊಟ್ಟಿದ್ದು, ಜಾಗತಿಕ ಸಿನಿರಂಗದಲ್ಲಿ ಕನ್ನಡ ಪ್ರತಿಭೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.


