ಪತ್ನಿ ಆರತಿ ಜೊತೆಗಿನ ವೈವಾಹಿಕ ಸಮಸ್ಯೆಯಿಂದಾಗಿ ನಟ ರವಿ ಮೋಹನ್ ಅವರು ಸದ್ಯಕ್ಕೆ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, 'ಇಡ್ಲಿ ನಟಿ' ಎಂದು ಉಲ್ಲೇಖಿಸಿ, ಓರ್ವ ನಟಿ ತನ್ನ ಕುಟುಂಬವನ್ನು ಒಡೆಯಲು ಪ್ರಯತ್ನಿಸಿದಳು ಎಂದು ಭಾವನಾತ್ಮಕವಾಗಿ ಆರೋಪಿಸಿದ್ದಾರೆ.
ತಮಿಳು ಚಿತ್ರರಂಗದ ಜನಪ್ರಿಯ ನಟ ರವಿ ಮೋಹನ್, ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಿಕ್ಕಟ್ಟಿನಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಆರತಿ ಜೊತೆಗಿನ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ. ಹದಿನಾಲ್ಕು ವರ್ಷಗಳ ಕಾಲ ತಾನು ನರಕಯಾತನೆ ಅನುಭವಿಸಿದ್ದು, ಈಗ ಅದರಿಂದ ಹೊರಬರುತ್ತಿದ್ದೇನೆ ಎಂದು ಹೇಳಿ ರವಿ, ಆರತಿಯಿಂದ ದೂರವಾಗಿದ್ದರು. ಈ ಮಧ್ಯೆ, ಗಾಯಕಿ ಕೆನೀಶಾ ಜೊತೆ ರವಿಗೆ ಸಂಬಂಧವಿದೆ ಎಂಬ ವದಂತಿಗಳು ಹಬ್ಬಿದ್ದವು. ಇಬ್ಬರೂ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು.

ಆದರೆ, ಸೈಬರ್ ಟ್ರೋಲಿಂಗ್ ಹೆಚ್ಚಾದಾಗ, ಕೆನೀಶಾ ಅವರು ರವಿ ಜೊತೆಗಿನ ಸ್ನೇಹವನ್ನು ಮುರಿದುಕೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ರವಿ ಮೋಹನ್ ಮಾಧ್ಯಮಗಳ ಮುಂದೆ ಬಂದು ಭಾವುಕರಾಗಿ ಮಾತನಾಡಿದ್ದಾರೆ. ಪತ್ನಿ ಆರತಿ ಜೊತೆಗಿನ ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ಸಿನಿಮಾಗಳಿಂದ ದೂರ ಉಳಿಯುವುದಾಗಿ ಹೇಳಿದ ರವಿ ಮೋಹನ್, ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ, ತಮ್ಮ ಕುಟುಂಬವನ್ನು ಹಾಳುಮಾಡಲು ಯತ್ನಿಸಿದ ನಟಿಯೊಬ್ಬರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಆ ನಟಿಯನ್ನು 'ಇಡ್ಲಿ ನಟಿ' ಎಂದು ಕರೆದಿದ್ದು, ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದೆಂಥಾ ನಾಟಕ?
"ಒಬ್ಬರು ಮೂರು ಅಕ್ಷರದ ನಟಿ ಇದ್ದಾರೆ. ಅವರ ಹೆಸರು ಹೇಳಿದರೆ ನನ್ನ ಮೇಲೆ ಕೇಸ್ ಬೀಳುತ್ತೆ. ಹಾಗಾಗಿ 'ಇಡ್ಲಿ ನಟಿ' ಅಂತ ಕರೆಯೋಣ. ಮೂವರು ಹಿರಿಯ ನಟರು ಆಕೆಯ ಬಗ್ಗೆ ನನಗೆ ಹೇಳಿದ್ದಾರೆ. ತಮ್ಮ ಕುಟುಂಬವನ್ನು ಹಾಳುಮಾಡಲು ಆಕೆ ಪ್ರಯತ್ನಿಸಿದ್ದಳು ಎಂದು ಕೆಟ್ಟ ಭಾಷೆಯಲ್ಲಿ ಬೈದಿದ್ದರು. ಮೂರು ಗಂಡಸರ ಸಂಸಾರ ಹಾಳು ಮಾಡಿದ ಆ ಮಹಿಳೆ, ಈಗ ನನ್ನ ಜೀವನದ ಬಗ್ಗೆ ಮಾತಾಡುತ್ತಾಳೆ. ಬೇರೆ ವಿಷಯದ ಬಗ್ಗೆ ಮಾತಾಡಿದರೆ, ತಾನೊಬ್ಬಳು ಫೆಮಿನಿಸ್ಟ್ ಅಂತಾಳೆ. ಇದೆಂಥಾ ನಾಟಕ? ನನ್ನ ಬಗ್ಗೆ ಮಾತಾಡೋಕೆ ನಿನಗೆ ಯಾವ ಯೋಗ್ಯತೆ ಇದೆ? ಇಂಥಾ ಮನುಷ್ಯರು ಇರ್ತಾರಾ? ನನಗಿಂತ ಚೆನ್ನಾಗಿ ನಟಿಸ್ತೀಯಾ? ನಟಿಸು, ನಾನೇ ನಿನ್ನ ಕಾಲಿಗೆ ಬೀಳುತ್ತೇನೆ. ಅವಾರ್ಡ್ ಬೇಕಾ? ತಗೋ. ಒಬ್ಬ ವ್ಯಕ್ತಿ ಕೆಟ್ಟವನು ಅಂತ ಹೇಳೋಕೆ ನಿನಗೇನು ಹಕ್ಕಿದೆ? ಎಲ್ಲರನ್ನೂ ನೀನೇನಾ ಹೆತ್ತಿದ್ದು?" ಎಂದು ರವಿ ಮೋಹನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ರವಿ ಮೋಹನ್ ಹೇಳಿದ್ದು ನಟಿ ಖುಷ್ಬೂ ಬಗ್ಗೆಯೇ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಖುಷ್ಬು, ರವಿ ಮೋಹನ್ ಅವರ ಪತ್ನಿ ಆರತಿಯ ಆಪ್ತ ಸ್ನೇಹಿತೆ. ಆರತಿ ಪತಿಯ ವಿರುದ್ಧ ಪೋಸ್ಟ್ ಮಾಡಿದಾಗಲೆಲ್ಲಾ ಖುಷ್ಬು ಬೆಂಬಲಿಸಿ ಕಾಮೆಂಟ್ ಮಾಡುತ್ತಾರೆ. ಈ ಎಲ್ಲಾ ಗೊಂದಲಗಳಿಗೆ ಅವರೇ ಕಾರಣ ಎಂದು ಹಲವರು ಆರೋಪಿಸುತ್ತಿದ್ದಾರೆ.


