Asianet Suvarna News Asianet Suvarna News

ನೃತ್ಯದ ಮೂಲಕ '18 days' ಕುರುಕ್ಷೇತ್ರ ದರ್ಶನ!

ಕನ್ನಡ ರಂಗಭೂಮಿ ಮಟ್ಟಿಗೆ ಇದೊಂದು ಹೊಸ ಬಗೆಯ ಪ್ರಯತ್ನ. ನೃತ್ಯನಾಟಕವಾದರೂ ಅದಕ್ಕೂ ಒಂದು ಕೈ ಮೇಲಾಗಿ ಹೊಸ ಬಗೆಯ ತಂತ್ರಜ್ಞಾನ, ಆನಿಮೇಷನ್‌, ಮ್ಯಾಜಿಕ್‌ಗಳನ್ನು ಬಳಕೆ ಮಾಡಿಕೊಂಡು ‘ಹದಿನೆಂಟು ದಿನಗಳು’ ಎನ್ನುವ ಮಹಾಭಾರತ ಆಧಾರಿತ ನೃತ್ಯ ನಾಟಕವನ್ನು ಮೊದಲ ಬಾರಿಗೆ ಮಾಡುತ್ತಿದೆ ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌. ಭರತ್‌ ಆರ್‌. ಪ್ರಭಾತ್‌ ಹಾಗೂ ಶರತ್‌ ಆರ್‌. ಪ್ರಭಾತ್‌ ಎನ್ನುವ ಸೋದರರು ಇದರ ಸಾರಥಿಗಳು. ಇಲ್ಲಿ ಶರತ್‌ ಆರ್‌. ಪ್ರಭಾತ್‌ ಮಾತನಾಡಿದ್ದಾರೆ.

Prabhat Arts International to play 18 days dusk of era show in Ravindra kalakshetra
Author
Bangalore, First Published Aug 31, 2019, 12:08 PM IST

ಕೆಂಡಪ್ರದಿ

ಈ ಪರಿಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ?

ನಮ್ಮದು ಹರಿಕತೆ ಪರಂಪರೆ. ನಮ್ಮ ಪೂರ್ವಜರು ಹರಿಕತೆಗಳನ್ನು ಹೇಳುತ್ತಿದ್ದವರು. ಅವರಿಂದ ನಾವು ಮಹಾಭಾರತವನ್ನು ಚಿಕ್ಕವಯಸ್ಸಿನಿಂದಲೂ ಕೇಳಿ ಪ್ರಭಾವಿತರಾದವರು. ನನ್ನ ಅಣ್ಣ ಭರತ್‌ ಮತ್ತು ನಾನು ಮಹಾಭಾರತವನ್ನು ಕೇಳಿ, ಅದರಲ್ಲಿ ಬರುವ ಒಂದೊಂದು ಪಾತ್ರವನ್ನೂ ಎದೆಗಿಳಿಸಿಕೊಂಡವರು. ಕುಮಾರವ್ಯಾಸ ಭಾರತ ಅತ್ಯಂತ ಅದ್ಭುತವಾದ ಕೃತಿ. ಅದನ್ನು ಇಟ್ಟುಕೊಂಡು ನಾಲ್ಕು ವರ್ಷಗಳ ಹಿಂದೆ ಕಥಾಸ್ತ್ರ ಎನ್ನುವ ಪ್ರಯೋಗ ಮಾಡಿದ್ದೆವು. ಅದಕ್ಕೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆಗಲೇ ಕುರುಕ್ಷೇತ್ರವನ್ನು ಆಧರಿಸಿ ಹೀಗೊಂದು ಪ್ರಯೋಗ ಮಾಡುವ ನಿರ್ಧಾರ ಮಾಡಿದ್ದೆವು. ಅದಕ್ಕೆ ತಕ್ಕಂತೆ ನಾಲ್ಕು ವರ್ಷಗಳಿಂದಲೂ ಚಟುವಟಿಕೆ ಆರಂಭಿಸಿದ್ದರೂ, ಎರಡು ವರ್ಷಗಳಿಂದ ಸೂಕ್ತ ಸ್ಕಿ್ರಪ್ಟ್‌ ಮತ್ತು ಮ್ಯೂಸಿಕ್‌ ಮಾಡಲು ತೊಡಗಿಕೊಂಡಿದ್ದೆವು.

ಈ ಪ್ರಯೋಗ ಕೇವಲ ಕುರುಕ್ಷೇತ್ರಕ್ಕೆ ಸಂಬಂಧಿಸಿದ್ದಾ?

ಹೌದು, ‘ಹದಿನೆಂಟು ದಿನಗಳು’ ಕುರುಕ್ಷೇತ್ರ ಯುದ್ಧದಲ್ಲಿ ಹದಿನೆಂಟು ದಿನಗಳ ಕಾಲ ನಡೆದ ರೋಚಕ ಸನ್ನಿವೇಶಗಳು, ಪ್ರತಿಯೊಬ್ಬರ ಸಮರ ಕಲೆ, ಬುದ್ಧಿವಂತಿಕೆ, ಯುದ್ಧ ತಂತ್ರ ಮೊದಲಾದವುಗಳನ್ನು ತೋರಿಸುತ್ತದೆ. ಕಡೆಗೆ ಶ್ರೀಕೃಷ್ಣನ ಧರ್ಮದ ನಡೆಯನ್ನು ಸಾಕ್ಷಾತ್ಕರಿಸುವ ದರ್ಶನವೂ ಇಲ್ಲಾಗುತ್ತದೆ.

ಅನ ಸುಬ್ಬರಾಯರ ಕಲಾಮಂದಿರಕ್ಕೆ ಶತಕದ ಸಂಭ್ರಮ!

ಇದರ ಹಿಂದಿನ ತಯಾರಿ ಹೇಗಿತ್ತು?

ಹೀಗೆ ಕುರುಕ್ಷೇತ್ರವನ್ನು ನೃತ್ಯರೂಪಕಕ್ಕೆ ಇಳಿಸಬೇಕು ಎಂದುಕೊಂಡ ನಾವು ಮೂಲ ಮಹಾಭಾರತವನ್ನೇ ಆಧಾರವಾಗಿ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಸಾಕಷ್ಟುಸಂಶೋಧನೆ ಮಾಡಿ ಹಿರಿಯ ವಿದ್ವಾಂಸರಿಂದ ಅಗತ್ಯ ಸಲಹೆ ಪಡೆದುಕೊಂಡಿದ್ದೇವೆ. ಒಂದು ವರ್ಷ ಸ್ಕಿ್ರಪ್ಟ್‌ ಮತ್ತು ಸಂಗೀತ ಸಂಯೋಜನೆಗೆ ತೆಗೆದುಕೊಂಡಿದ್ದೇವೆ. ಅಲ್ಲದೇ ಸಾಮಾನ್ಯ ನೃತ್ಯ ರೂಪಕಕ್ಕಿಂತ ಭಿನ್ನವಾಗಿ ನಾವಿಲ್ಲಿ ಹೊಸ ಹೊಸ ತಂತ್ರಜ್ಞಾನ, ತ್ರಿಡಿ ಆನಿಮೇಷನ್‌, ಏರಿಯಲ್‌ ತಂತ್ರಜ್ಞಾನ, ಹೊಸ ಬಗೆಯ ಬೆಳಕಿನ ವಿನ್ಯಾಸವನ್ನು ಮಾಡಿದ್ದೇವೆ. 60 ಮಂದಿ ಕಲಾವಿದರು ಪಾತ್ರಕ್ಕೆ ತಕ್ಕಂತೆ ಜಿಮ್‌, ಮಾರ್ಷಲ್‌ ಆಟ್ಸ್‌ರ್‍ಗಳನ್ನು ಕಲಿತಿದ್ದಾರೆ. ಸುಮಾರು 40 ಮಂದಿ ತಂತ್ರಜ್ಞರು ಇದಕ್ಕಾಗಿ ದುಡಿದಿದ್ದಾರೆ. ಅಲ್ಲದೇ ಇದನ್ನು ಸಿನಿಮಾ ಹಂತಕ್ಕೆ ಕೊಂಡೊಯ್ಯುವ ಕನಸು ನಮ್ಮದು.

ಸಿನಿಮಾ ಹಂತಕ್ಕೆ ಎಂದರೆ ಹೇಗೆ?

ಸಿನಿಮಾದಲ್ಲಿ ವರ್ಕ್ ಮಾಡುವ ಹಾಗೆಯೇ ನಾವೂ ವರ್ಕ್ ಮಾಡಿದ್ದೇವೆ. ಒಂದೊಂದು ಕಾಸ್ಟೂ್ಯಮ್‌ ಕೂಡ ಹೇಗೆ ಇರಬೇಕು ಎಂಬುದನ್ನು ಸರಿಯಾಗಿ ಅಧ್ಯಯನ ಮಾಡಿ ಪಾತ್ರಕ್ಕೆ ತಕ್ಕ ಹಾಗೆ ಮಾಡಿದ್ದೇವೆ. ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೂ ನಮ್ಮ ನೃತ್ಯ ನಾಟಕದಲ್ಲಿ ಕೆಲಸ ಮಾಡಿದ್ದಾರೆ.

ಸಾಮಾನ್ಯ ನಾಟಕಕ್ಕೂ ನೃತ್ಯ ನಾಟಕಕ್ಕೂ ಏನು ವ್ಯತ್ಯಾಸ?

ಸಾಮಾನ್ಯ ನಾಟಕ ಲೈವ್‌ ಇರುತ್ತದೆ. ಆದರೆ ನೃತ್ಯ ನಾಟಕ ಹಾಗೆ ಇರುವುದಿಲ್ಲ. ಅಲ್ಲಿ ನಟನೆಯೇ ಪ್ರಧಾನ, ಇಲ್ಲಿ ನೃತ್ಯವೇ ಪ್ರಧಾನ. ಸಾಮಾನ್ಯವಾಗಿ ಒಂದು ಕತೆಯನ್ನು ಇಟ್ಟುಕೊಂಡು ನಾಟಕ ಮಾಡಬಹುದು. ಆದರೆ ಅದನ್ನು ನೃತ್ಯ ರೂಪಕ್ಕೆ ಇಳಿಸಬೇಕು ಎಂದರೆ ಮತ್ತೊಂದು ಹಂತಕ್ಕೆ ಹೋಗಬೇಕಾಗುತ್ತದೆ. ಹಾಗಾಗಿ ನಾಟಕಕ್ಕಿಂತ ಇದು ಪಕ್ವತೆ ಹೊಂದಿರುತ್ತದೆ. ನೃತ್ಯ ರೂಪಕ ಹೆಚ್ಚು ಪ್ರಭಾವಶಾಲಿ.

ದಶಕಗಳ ಹಾದಿ ಪೂರೈಸಿದ ಕಲಾಕದಂಬ!

ಮೊದಲ ಶೋ ತಯಾರಿ ಹೇಗಿದೆ?

ಆ. 31 ಮತ್ತು ಸೆ. 1ರಂದು ಎರಡು ಶೋ ಇದೆ. ಮೊದಲ ದಿನ ಕನ್ನಡದಲ್ಲಿ ಮತ್ತು ಎರಡನೇ ದಿನ ಇಂಗ್ಲಿಷ್‌ನಲ್ಲಿ ಶೋ ಆಯೋಜನೆ ಮಾಡಿಕೊಂಡಿದ್ದೇವೆ. 90 ನಿಮಿಷದ ಪ್ರದರ್ಶನ ಇದು. ಇದಕ್ಕಾಗಿ ರವೀಂದ್ರ ಕಲಾಕ್ಷೇತ್ರವನ್ನು ಭಿನ್ನವಾಗಿ ರೂಪಿಸಿದ್ದೇವೆ. ಪ್ರೇಕ್ಷಕರಿಗಾಗಿ ಇಂದ್ರಪ್ರಸ್ತ, ಹಸ್ತಿನಾಪುರ, ಪಾಂಚಾಲ, ಮತ್ಸ್ಯನಗರ ಎನ್ನುವ ನಾಲ್ಕು ವಿಭಾಗ ಇರಲಿದೆ. ಗೆಸ್ಟ್‌ಗಳಿಗೆ ದ್ವಾರಕಾ ಎನ್ನುವ ವಿಭಾಗ ಇದ್ದರೆ, ಪ್ರಧಾನ ವೇದಿಕೆ ಕುರುಕ್ಷೇತ್ರವಾಗಿರಲಿದೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

ಸಮಯ: ಆ.31 ಮತ್ತು ಸೆ. 01, ಸಂಜೆ 6.15ಕ್ಕೆ

ದೂ.9448045253

 

Follow Us:
Download App:
  • android
  • ios