ಸಾಹಸ ಸಿಂಹನ ಜರ್ನಿಗೊಂದು ರ್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’
‘ಪಡ್ಡೆಹುಳಿ’ ಚಿತ್ರತಂಡ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸುವುದಕ್ಕೆ ಹೊರಟಿದೆ.
ಶ್ರೇಯಸ್ ಹಾಗೂ ನಿಶ್ವಿಕ ನಾಯ್ಡು ಜೋಡಿಯಾಗಿ ನಟಿಸುತ್ತಿರುವ, ಗುರು ದೇಶಪಾಂಡೆ ನಿರ್ದೇಶನದ ಹಾಗೂ ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಣದ ಈ ಚಿತ್ರತಂಡ ನಾಗರಹಾವು ಚಿತ್ರದ ವಿಷ್ಣುವರ್ಧನ್ ಗೆಟಪ್ನಲ್ಲಿ ಶ್ರೇಯಸ್ ಲುಕ್ ಬಿಡುಗಡೆ ಮಾಡಿದೆ. ಇದೇ ಉತ್ಸಾಹದಲ್ಲಿ ಸಾಹಸ ಸಿಂಹನ ಹುಟ್ಟುಹಬ್ಬಕ್ಕಾಗಿಯೇ ಒಂದು ವಿಶೇಷವಾದ ಹಾಡನ್ನು ಬಿಡುಗಡೆ ಮಾಡುತ್ತಿದೆ.
ವಿಷ್ಣು ದಾದಾ ಹೆಜ್ಜೆ ಗುರುತುಗಳ ಜತೆಗೆ ಅವರ ಸಾಧನೆಯ ಶಿಖರವನ್ನು ನೆನಪಿಸುವಂತಹ ರೀತಿಯಲ್ಲಿ ಒಂದು ರ್ಯಾಪ್ ಸಾಂಗ್ ಕಂಪೋಸ್ ಮಾಡಲಾಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಚಾಮುಂಡಿಯ ಮಡಿಲಿಲ್ಲ ಹುಟ್ಟಿ, ದುರ್ಗದ ಕೋಟೆಯಲ್ಲಿ ಬೆಳಕು ಕಂಡ ವಿಷ್ಣು ಚಿತ್ರಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಪಡ್ಡೆಹುಲಿಗೂ ವಿಷ್ಣುವರ್ಧನ್ಗೂ ಸಂಬಂಧವೇನು? ನಿರ್ದೇಶಕರು ಹೇಳುವ ಕಾರಣಗಳು ಇಲ್ಲಿವೆ.
- ನಮ್ಮ ಚಿತ್ರದ ಕತೆ ಶುರುವಾಗುವುದೇ ಚಿತ್ರದುರ್ಗದ ಕೋಟೆಯಿಂದ. ನಾಯಕನ ಪರಿಚಯ ಇಲ್ಲಿಂದಲೇ ಆಗುತ್ತದೆ. ನಾಗರಹಾವು ಹುಟ್ಟಿಕೊಂಡು ಸಂಪತ್ ಕುಮಾರ್ ವಿಷ್ಣುವರ್ಧನ್ ಆಗಿದ್ದು ಇದೇ ಕೋಟೆಯ ನಾಡಿನಿಂದ.
- ಚಿತ್ರದ ನಾಯಕ ಡಾ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಚಿತ್ರದಲ್ಲಿ ನಾಯಕ ಗುರಿ ಮುಟ್ಟುವುದಕ್ಕೆ ವಿಷ್ಣುದಾದಾ ಅವರ ನಾಗರಹಾವು ಸ್ಫೂರ್ತಿಯಾಗುತ್ತದೆ.
- ಚಿತ್ರದ ನಾಯಕ ಶ್ರೇಯಸ್ ಅವರ ತಂದೆ ಕೆ ಮಂಜು ಅವರು ವಿಷ್ಣು ದೊಡ್ಡ ಅಭಿಮಾನಿ. ಅವರನ್ನು ತಮ್ಮ ಗುರುಗಳೆಂದೇ ಭಾವಿಸಿದ್ದಾರೆ. ಹೀಗಾಗಿ ತಮ್ಮ ಪುತ್ರನ ಮೊದಲ ಚಿತ್ರದ ಮೂಲಕ ಅವರು ಗುರುಗಳಿಗೆ ನೀಡುತ್ತಿರುವ ಗೌರವ ಇದು.
ಡಾ ವಿಷ್ಣುವರ್ಧನ್ ನನ್ನ ಗುರುಗಳು. ನನ್ನ ಬದುಕಿನ ಬಹುದೊಡ್ಡ ತಿರುವು, ಯಶಸ್ಸು ಸಿಕ್ಕಿರುವುದೇ ಅವರ ಸ್ನೇಹ ಮತ್ತು ಹಾರೈಕೆಯಿಂದಲೇ. ಹೀಗಾಗಿ ನನ್ನ ಮಗ ಶ್ರೇಯಸ್ನ ಮೊದಲ ಚಿತ್ರಕ್ಕೆ ಅವರ ಆಶೀರ್ವಾದ ಬೇಕಿದೆ. ಜತೆಗೆ ಅವರಿಗೆ ನಮ್ಮ ‘ಪಡ್ಡೆಹುಲಿ’ ಚಿತ್ರದಿಂದ ನಮನ ಸಲ್ಲಿಸುವ ನಿಟ್ಟಿನಲ್ಲಿ ಈ ರ್ಯಾಪ್ ಹಾಡು ಮಾಡಿದ್ದೇವೆ - ಕೆ ಮಂಜು, ನಿರ್ಮಾಪ
ವಿಷ್ಣುದಾದಾ ಅವರು ಈ ಜನರೇಷನ್ಗೂ ದೊಡ್ಡ ಸ್ಫೂರ್ತಿ. ಅವರನ್ನು ಅಭಿಮಾನಿಸುವವರು ಎಂದೆಂದಿಗೂ ಇರುತ್ತಾರೆ. ಅಂಥ ಅಭಿಮಾನಿಗಳ ಜತೆಗೆ ಮುಂದಿನ ಪೀಳಿಗೆಯ ಸಿನಿಮಾ ಪ್ರೇಕ್ಷಕರಿಗೂ ವಿಷ್ಣುದಾದಾ ಅವರ ಸಾಧನೆ ತಪಲುಪಿಸಬೇಕಿದೆ. ಆ ನಿಟ್ಟಿನಲ್ಲಿ ಸೆ.17 ರಂದು ಸಂಜೆ ರ್ಯಾಪ್ ಹಾಡು ಬಿಡುಗಡೆ ಮಾಡುತ್ತಿದ್ದೇವೆ - ಗುರು ದೇಶಪಾಂಡೆ, ನಿರ್ದೇಶಕ