ತೆಲುಗಿನ ಕ್ಲಾಸಿಕ್ ಸಿನಿಮಾಗಳ ರೀಮೇಕ್ ಬಗ್ಗೆ ಮಾತನಾಡಿದ ನಟ ನಾಗಾರ್ಜುನ, ಸೂಪರ್ ಸ್ಟಾರ್ ಕೃಷ್ಣ ಅವರ ಫ್ಲಾಪ್ ಚಿತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬಾಲಕೃಷ್ಣ ಬಗ್ಗೆಯೂ ಮಾತನಾಡಿದ್ದಾರೆ. ಏನಿದು ವಿಚಾರ? ಇಲ್ಲಿದೆ ವಿವರ.
ಕ್ಲಾಸಿಕ್ ಸಿನಿಮಾಗಳನ್ನು ರೀಮೇಕ್ ಮಾಡಬೇಕು, ಸೀಕ್ವೆಲ್ ಮಾಡಬೇಕು ಅಂತ ಹಲವರು ಪ್ರಯತ್ನಿಸುತ್ತಾರೆ. ಆದರೆ, ಕ್ಲಾಸಿಕ್ ಚಿತ್ರಗಳನ್ನು ಮುಟ್ಟಬಾರದು, ಅವುಗಳನ್ನು ಹಾಳು ಮಾಡಬಾರದು ಎಂದು ಭಾವಿಸುವವರೂ ಇದ್ದಾರೆ. ನಾಗಾರ್ಜುನ ಅವರಿಗೂ ಇಂಥದ್ದೇ ಸಂದಿಗ್ಧತೆ ಎದುರಾಗಿತ್ತು. ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಎನ್ಟಿಆರ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಅವರಿಬ್ಬರು ನಟಿಸಿದ ಸಿನಿಮಾಗಳು ಇತಿಹಾಸದಲ್ಲಿ ಉಳಿದುಕೊಂಡಿವೆ.
ಒಂದು ಸಂದರ್ಶನದಲ್ಲಿ, ಎಎನ್ಆರ್ ಮತ್ತು ಎನ್ಟಿಆರ್ ಅವರಂತೆ ನೀವು ಮತ್ತು ಬಾಲಕೃಷ್ಣ ಯಾಕೆ ಒಟ್ಟಿಗೆ ನಟಿಸಬಾರದು ಎಂದು ನಾಗಾರ್ಜುನ ಅವರಿಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ ನಾಗಾರ್ಜುನ, 'ಬಾಲಯ್ಯ ಜೊತೆ ನಟಿಸಲು ನಾನು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೇನೆ. ನಾವು ಆಗಾಗ ಮಾತನಾಡುತ್ತೇವೆ. ಇಬ್ಬರೂ ಸೇರಿ ಒಂದು ಸಿನಿಮಾ ಮಾಡುವ ಬಗ್ಗೆ ಚರ್ಚೆಯೂ ನಡೆದಿದೆ' ಎಂದಿದ್ದರು.
ಇತ್ತೀಚೆಗೆ ಬಾಲಯ್ಯ ನನಗೆ 'ಚುಪ್ಕೆ ಚುಪ್ಕೆ' ಚಿತ್ರದ ಸಿಡಿ ಕಳುಹಿಸಿದ್ದರು. 'ಒಮ್ಮೆ ನೋಡು, ಈ ಸಿನಿಮಾವನ್ನು ನಾವಿಬ್ಬರೂ ಮಾಡಿದರೆ ಚೆನ್ನಾಗಿರುತ್ತದೆ' ಎಂದು ಹೇಳಿದ್ದರು. ಸಿನಿಮಾ ನನಗೂ ತುಂಬಾ ಇಷ್ಟವಾಯಿತು. ಆದರೆ ಆಮೇಲೆ ಅದರ ಬಗ್ಗೆ ಚರ್ಚೆ ಆಗಲಿಲ್ಲ. 'ಗುಂಡಮ್ಮ ಕಥಾ' ಸಿನಿಮಾವನ್ನು ಜೂನಿಯರ್ ಎನ್ಟಿಆರ್ ಮತ್ತು ನಾಗ ಚೈತನ್ಯ ಮಾಡಬೇಕೆಂದುಕೊಂಡಿದ್ದಾರೆ. ನಾನು ಮತ್ತು ಬಾಲಯ್ಯ ಸೇರಿ ಮಾಡಲು ಧೈರ್ಯ ಸಾಲುತ್ತಿಲ್ಲ' ಎಂದರು ನಾಗಾರ್ಜುನ.
ಕೆಲವು ಕ್ಲಾಸಿಕ್ ಚಿತ್ರಗಳನ್ನು ಮುಟ್ಟದೇ ಇರುವುದೇ ಒಳ್ಳೆಯದು. 'ಗುಂಡಮ್ಮ ಕಥಾ' ಎಂಥಾ ಸಿನಿಮಾ ಅಂತ ತಾರಕ್ ಮತ್ತು ಚೈತುಗೆ ಗೊತ್ತಿಲ್ಲ. 'ದೇವದಾಸ್' ರೀಮೇಕ್ ಏನಾಯ್ತು ಗೊತ್ತಲ್ಲವೇ? ಎಂದು ನಾಗಾರ್ಜುನ, ಸೂಪರ್ ಸ್ಟಾರ್ ಕೃಷ್ಣ ಅವರ ಚಿತ್ರದ ಬಗ್ಗೆ ವ್ಯಂಗ್ಯವಾಡಿದರು. ಎಎನ್ಆರ್ ವೃತ್ತಿಜೀವನದ ಅದ್ಭುತ ಚಿತ್ರಗಳಲ್ಲಿ 'ದೇವದಾಸ್' ಕೂಡ ಒಂದು. ಆ ಚಿತ್ರವನ್ನು ಕೃಷ್ಣ ರೀಮೇಕ್ ಮಾಡಿದ್ದರು. ಆದರೆ ಅದು ಹೀನಾಯವಾಗಿ ಸೋತಿತ್ತು. ಇದೇ ವಿಷಯವನ್ನು ನಾಗಾರ್ಜುನ ಪರೋಕ್ಷವಾಗಿ ಪ್ರಸ್ತಾಪಿಸಿದರು.
ಇಬ್ಬರ ನಡುವೆ ಭಿನ್ನಾಭಿಪ್ರಾಯ
ಒಂದು ಕಾಲದಲ್ಲಿ ಬಾಲಕೃಷ್ಣ ಮತ್ತು ನಾಗಾರ್ಜುನ ಉತ್ತಮ ಸ್ನೇಹಿತರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂಬ ವರದಿಗಳಿವೆ. ಚೈತನ್ಯ ಮತ್ತು ತಾರಕ್ 'ಗುಂಡಮ್ಮ ಕಥಾ' ರೀಮೇಕ್ನಲ್ಲಿ ನಟಿಸುತ್ತಿದ್ದಾರೆ ಎಂದು ಆಗ ವರದಿಗಳು ಬಂದಿದ್ದವು, ಆದರೆ ಆ ಪ್ರಾಜೆಕ್ಟ್ ಮುಂದೆ ಸಾಗಲಿಲ್ಲ.


