ಮಾಸ್ತಿಗುಡಿ ನಟರ ಸಾವು ಪ್ರಕರಣ : ಕೈಬಿಡಲು ಕೋರಿದ್ದ ಅರ್ಜಿ ವಜಾ
ಮಾಸ್ತಿ ಗುಡಿ ಚಿತ್ರದ ಇಬ್ಬರು ನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೈ ಬಿಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಮನಗರ ಕೋರ್ಟ್ ವಜಾ ಮಾಡಿದೆ.
ರಾಮನಗರ [ಆ.18] : ಮಾಸ್ತಿಗುಡಿ ಚಲನಚಿತ್ರ ಖಳನಟರ ದುರಂತ ಸಾವಿನ ಪ್ರಕರಣದಿಂದ ಕೈಬಿಡುವಂತೆ ಕೋರಿ ಸಲ್ಲಿಸಲಾಗಿದ್ದ 6 ಅರ್ಜಿಗಳಲ್ಲಿ 5 ಮಂದಿ ಆರೋಪಿಗಳ ಅರ್ಜಿಯನ್ನು ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ.
2016ರ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಲನಚಿತ್ರದ ಕ್ಲೈಮ್ಯಾಕ್ಸ್ ವೇಳೆ ಹೆಲಿಕಾಪ್ಟರ್ನಿಂದ ಜಲಾಶಯಕ್ಕೆ ಹಾರಿದ ನಟರಾದ ಅನಿಲ್ ಮತ್ತು ಉದಯ್ ಮುಳುಗಿ ಸಾವನ್ನಪ್ಪಿದ್ದರು. ಈ ಘಟನೆ ಸಂಬಂಧ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ರಾಜಶೇಖರ್, ಸಿದ್ಧಾರ್ಥ್ ಅಲಿಯಾಸ್ ಸಿದ್ದು, ಸಾಹಸ ನಿರ್ದೇಶಕ ರವಿವರ್ಮಾ, ಎ.ಪಿ.ಭರತ್ ರಾವ್ ಹಾಗೂ ಪೈಲೆಟ್ ಪ್ರಕಾಶ್ ಬಿರಾದರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಆರು ಮಂದಿ ಆರೋಪಿಗಳು ಸಲ್ಲಿಸಿದ ಅರ್ಜಿ ವಿಚಾರಣೆ 3ನೇ ಜಿಲ್ಲಾ ಸತ್ರ ನ್ಯಾಯಾಲಯ ಕೈಗೆತ್ತಿಕೊಂಡಿತು. 6ನೇ ಆರೋಪಿಯಾಗಿದ್ದ ಪೈಲೆಟ್ ಪ್ರಕಾಶ್ ಬಿರಾದರ್ ಅವರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶ ಸಿದ್ದಲಿಂಗಪ್ರಭು ಅವರು ಉಳಿದ ಐದು ಮಂದಿ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.