ವಿವಾದದಲ್ಲಿ ಅಕ್ಷಯ್ ‘ಮಿಶನ್ ಮಂಗಲ್’: ಯಾರದ್ದೋ ಕಥೆ ಕದ್ದರಾ?
ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ನಟಿ ವಿದ್ಯಾ ಬಾಲನ್ ಜೋಡಿಯ ‘ಮಿಶನ್ ಮಂಗಲ್’ ಚಿತ್ರಕ್ಕೆ ತಡೆ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಭಾರತದ 2014ರ ಮಂಗಳಯಾನ ಕುರಿತ ಚಿತ್ರ ಇದಾಗಿದ್ದು, ಇದು ತಮ್ಮ ಮೂಲ ಕಥೆ ಎಂದು ಖ್ಯಾತ ನಿರ್ದೇಶಕಿ ರಾಧಾ ಭಾರಧ್ವಾಜ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಂಬೈ(ನ.24): ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ನಟಿ ವಿದ್ಯಾ ಬಾಲನ್ ಜೋಡಿಯ ‘ಮಿಶನ್ ಮಂಗಲ್’ ಚಿತ್ರಕ್ಕೆ ತಡೆ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.
ಭಾರತದ 2014ರ ಮಂಗಳಯಾನ ಕುರಿತ ಚಿತ್ರ ಇದಾಗಿದ್ದು, ಇದು ತಮ್ಮ ಮೂಲ ಕಥೆ ಎಂದು ಖ್ಯಾತ ನಿರ್ದೇಶಕಿ ರಾಧಾ ಭಾರಧ್ವಾಜ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದು ತಮ್ಮ ಮೂಲ ಕಥೆಯಾಗಿದ್ದು, ಕಳೆದ ವರ್ಷ ವಿದ್ಯಾ ಬಾಲನ್ ಅವರ ಮ್ಯಾನೇಜರ್ ಆಗಿದ್ದ ಅತುಲ್ ಕಸ್ಬೇಕರ್ ತಮ್ಮ ಅನುಮತಿ ಇಲ್ಲದೇ ಇದನ್ನು ನಟಿ ವಿದ್ಯಾಬಾಲನ್ ಅವರಿಗೆ ತೋರಿಸಿದ್ದಾಗಿ ರಾಧಾ ಭಾರಧ್ವಾಜ್ ನ್ಯಾಯಾಲಯಕ್ಕೆ ಸಲ್ಲಿಸಿದ ತಡೆ ಅರ್ಜಿಯಲ್ಲಿ ದೂರಿದ್ದಾರೆ.
ಈಗಾಗಲೇ ಸ್ಪೇಸ್ MOMs ಎಂಬ ಚಿತ್ರ ಸಿದ್ಧಪಡಿಸಿದ್ದು, ಮಿಶನ್ ಮಂಗಲ್ ತಮ್ಮದೇ ಕಥೆಯನ್ನು ಹೈಜಾಕ್ ಮಾಡಿದೆ ಎಂದು ರಾಧಾ ಆರೋಪಿಸಿದ್ದಾರೆ.
ರಾಧಾ ತಮ್ಮ ಚಿತ್ರದಲ್ಲಿ ಮಂಗಳಯಾನ ಯೋಜನೆಯಲ್ಲಿ ಕೆಲಸ ಮಾಡಿದ ಮಹಿಳಾ ಎಂಜಿನಿಯರ್ ಗಳ ಕುರಿತು ಚಿತ್ರ ತಯಾರಿಸಿದ್ದು, ಮಿಶನ್ ಮಂಗಲ್ ಕೂಡ ಬಹುತೇಕ ರಾಧಾ ಅವರ ಚಿತ್ರಕಥೆಯನ್ನು ಹೊಂದಿದೆ ಎನ್ನಲಾಗಿದೆ.
ಅತುಲ್ ಕಸ್ಬೇಕರ್ ಈ ಮೊದಲು ರಾಧಾ ಭಾರಧ್ವಾಜ್ ರಚಿತ ಕಥೆಯನ್ನು ಚಿತ್ರ ಮಾಡುವುದಾಗಿ ಒಪ್ಪಂದ ಮಾಡಿಕೊಂಡು, ನಂತರ ಅವರ ಅನುಮತಿ ಇಲ್ಲದೆಯೇ ವಿದ್ಯಾ ಬಾಲನ್ ಅವರಿಗೆ ಚಿತ್ರಕಥೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಇದರಿಂದ ಕುಪಿತಗೊಂಡ ರಾಧಾ ಅತುಲ್ ಕಸ್ಬೇಕರ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. ಅಲ್ಲದೇ ತಮ್ಮ ಚಿತ್ರಕ್ಕಾಗಿ ಬೇರೊಬ್ಬ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದರು.
ಆದರೆ ಅತುಲ್ ಕಸ್ಬೇಕರ್ ರಾಧಾ ಭಾರಧ್ವಾಜ್ ಅವರ ಚಿತ್ರಕಥೆಯನ್ನೇ ಇದೀಗ ಮಿಶನ್ ಮಂಗಲ್ ಚಿತ್ರಕ್ಕೆ ಬಳಸಿಕೊಳ್ಳುತ್ತಿರುವುದು ವಿವಾದದ ಕಿಡಿ ಹೊತ್ತಿಸಿದೆ.