ಮಹಾಮಳೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ’ಸಿಂಗಂ’ ಸಹೋದರರ ಹೃದಯ
ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಿನಿಮಾ ನಟರಾಗಿ ಮಾತ್ರವಲ್ಲ ಹೃದಯ ಶ್ರೀಮಂತಿಕೆಯಿಂದಲೂ ಜನರ ಮನ ಗೆದ್ದಿದ್ದಾರೆ. ಕೇರಳದ ಮಹಾಮಳೆಗೆ ನಲುಗಿದ ಸಂತ್ರಸ್ತರಿಗಾಗಿ ಸೂರ್ಯ ಮತ್ತು ಕಾರ್ತಿ ನೆರವಿನ ಹಸ್ತ ಚಾಚಿದ್ದಾರೆ.
ಚೆನ್ನೈ (ಆ. 11): ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಿನಿಮಾ ನಟರಾಗಿ ಮಾತ್ರವಲ್ಲ ಹೃದಯ ಶ್ರೀಮಂತಿಕೆಯಿಂದಲೂ ಜನರ ಮನ ಗೆದ್ದಿದ್ದಾರೆ. ಕೇರಳದ ಮಹಾಮಳೆಗೆ ನಲುಗಿದ ಸಂತ್ರಸ್ತರಿಗಾಗಿ ಸೂರ್ಯ ಮತ್ತು ಕಾರ್ತಿ ನೆರವಿನ ಹಸ್ತ ಚಾಚಿದ್ದಾರೆ.
ಮಹಾಮಳೆಯಿಂದ ಬದುಕನ್ನೇ ಕಳೆದುಕೊಂಡ ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದು ಹಣದ ನೆರವು ನೀಡಿದ್ದಾರೆ. ಕೇರಳ ಸಿಎಂ ನಿಧಿಗೆ 25 ಲಕ್ಷ ರೂ ಹಣ ನೀಡಿ, ಸಂತ್ರಸ್ತರ ನೆರವಿಗೆ ಸಹಕರಿಸಬೇಕೆಂದು ದೇಶದ ಜನರಿಗೆ ಮನವಿ ಮಾಡಿದ್ದಾರೆ.
ವರುಣನ ಆರ್ಭಟಕ್ಕೆ ಇದುವರೆಗೂ ಕೇರಳದಲ್ಲಿ 29 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕೇರಳದ ವಿವಿಧ ಪ್ರದೇಶಗಳಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು ಜನರಿಗೆ ಊಟ ಮತ್ತು ವಸತಿ ಒದಗಿಸಲಾಗುತ್ತಿದೆ. ಮಹಾಮಳೆಗೆ 29 ಮಂದಿ ನೀರಲ್ಲಿ ಸಮಾಧಿಯಾದರೆ 54 ಸಾವಿರ ಜನ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರೆದಿದೆ.