ಪೆಟ್ಟಾ ನಿರ್ದೇಶಕ ಕಾರ್ತಿಕ್ ಚಿತ್ರದಲ್ಲಿ ಕಿಚ್ಚ ಸುದೀಪ್!
ಕಾಲಿವುಡ್ ಸ್ಟಾರ್ ನಿರ್ದೇಶಕ, ‘ಪೆಟ್ಟಾ’ ಖ್ಯಾತಿಯ ಕಾರ್ತಿಕ್ ಸುಬ್ಬರಾಜ್ ಜತೆಗೆ ನಿರ್ಮಾಪಕ ಜಾಕ್ ಮಂಜು ಅದ್ಧೂರಿ ವೆಚ್ಚದ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರೇ ಹೇಳುವ ಪ್ರಕಾರ ಕನ್ನಡದ ಜತೆಗೆ ಇದು ತಮಿಳಿನಲ್ಲೂ ನಿರ್ಮಾಣವಾಗುವ ಸಾಧ್ಯತೆಯಿದೆ. ಎರಡು ಭಾಷೆಯಲ್ಲೂ ಈ ಚಿತ್ರಕ್ಕೆ ಕಿಚ್ಚ ಸುದೀಪ್ ಅವರೇ ನಾಯಕ.
ಸದ್ಯಕ್ಕೆ ಇದಿನ್ನು ಮಾತುಕತೆ ಹಂತದಲ್ಲಿದೆ. ಆದರೂ, ನಿರ್ಮಾಣ ಮಾಡುವುದು ಖಚಿತ ಎನ್ನುವ ಜಾಕ್ ಮಂಜು, ಈ ವರ್ಷದೊಳಗೆ ಆ ಆಸೆ ಈಡೇರಬಹುದು ಅಂತಲೂ ಹೇಳಿಕೊಂಡಿದ್ದಾರೆ.
‘ಪೆಟ್ಟಾ’ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಕಾಲಿವುಡ್ನ ಸ್ಟಾರ್ ನಿರ್ದೇಶಕ. ಈಗಾಗಲೇ ತೆರೆ ಕಂಡ ‘ಪಿಜ್ಜಾ’, ‘ಜಿಗರ್ಥಂಡ ’, ‘ಇರೈವಿ’ ಹಾಗೂ ‘ಮಕ್ರ್ಯುರಿ’ ಚಿತ್ರಗಳು ವಿಭಿನ್ನ ಕಥಾ ಹಂದರದ ಜತೆಗೆ ಸ್ಟಾರ್ ಸಿನಿಮಾಗಳಾಗಿಯೂ ದೇಶಾದ್ಯಂತ ಸದ್ದು ಮಾಡಿದ್ದವು. ಈಗ ಅದೇ ಕಾರಣಕ್ಕೆ ‘ಪೆಟ್ಟಾ’ ಕೂಡ ಸಾಕಷ್ಟುನಿರೀಕ್ಷೆ ಮೂಡಿಸಿದೆ. ಕರ್ನಾಟಕಕ್ಕೆ ಈ ಚಿತ್ರದ ವಿತರಣೆಯ ಹಕ್ಕು ಜಾಕ್ ಮಂಜು ಪಾಲಾಗಿದೆ. ಅವರಿಗೆ ನಿರ್ಮಾಪಕ ಸೈಯದ್ ಸಲಾಂ ಕೂಡ ಸಾಥ್ ನೀಡಿದ್ದಾರೆ. ಅವರಿಬ್ಬರು ರಾಜ್ಯಾದ್ಯಂತ ‘ಪೆಟ್ಟಾ’ದ ತಮಿಳು, ಹಿಂದಿ ಆವೃತ್ತಿ ವಿತರಣೆ ಮಾಡುತ್ತಿದ್ದು, ಈಗಾಗಲೇ 200ಕ್ಕೂ ಹೆಚ್ಚು ಚಿತ್ರಮಂದಿರಗಳು ಫಿಕ್ಸ್ ಆಗಿವೆಯಂತೆ. ಅದರ ಜತೆಗೆ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವ ಚಿಂತನೆಯಲ್ಲೂ ಇದ್ದಾರೆ ಜಾಕ್ ಮಂಜು.
'ಪೆಟ್ಟಾ' ಕನ್ನಡ ಚಿತ್ರಕ್ಕೆ ರಜನಿ ಧ್ವನಿ ನೀಡ್ತಾರಾ?
ಸುದೀಪ್ ಮತ್ತು ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್ನಲ್ಲಿ ಚಿತ್ರ ನಿರ್ಮಿಸುವ ಕುರಿತು ಜಾಕ್ ಮಂಜು, ‘ಕಾರ್ತಿಕ್ ಸುಬ್ಬರಾಜು ಜತೆಗೆ ಅದ್ಧೂರಿ ವೆಚ್ಚದಲ್ಲೇ ಒಂದು ಸಿನಿಮಾ ಮಾಡುವ ಚಿಂತನೆ ಇದೆ. ಅದು ಕನ್ನಡದ ಜತೆಗೆ ತಮಿಳಿನಲ್ಲೂ ನಿರ್ಮಾಣವಾಗುವ ಸಾಧ್ಯತೆಯಿದೆ. ಅದಕ್ಕೆ ಕಿಚ್ಚ ಸುದೀಪ್ ಅವರೇ ನಾಯಕ ನಟ’ ಎನ್ನುತ್ತಾರೆ. ಆದರೆ ಅವರ ಪಕ್ಕದಲ್ಲೇ ಕುಳಿತಿದ್ದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈ ಮಾತಿಗೆ ಪ್ರತಿಕ್ರಿಯೆ ನೀಡಲಿಲ್ಲ.
ಮಿಸ್ಸಾಗಿದ್ದ ಪೇಟಾ ರಜನಿಗೆ ಸಿಕ್ಕಿದ್ದು ಹೇಗೆ?
‘ಕಾರ್ತಿಕ್ ಸಿನಿಮಾಗಳನ್ನು ನಾನು ನೋಡಿದ್ದೇನೆ. ಅವರೇ ನಿರ್ದೇಶಿಸಿದ ‘ಜಿಗರ್ಥಂಡ’ ಹಾಗೂ ‘ಪಿಜ್ಜಾ ’ರಿಮೇಕ್ ಮೂಲಕ ಕನ್ನಡಕ್ಕೂ ಬಂದಿವೆ. ಅವೆರಡು ಸೂಪರ್ ಹಿಟ್ ಚಿತ್ರಗಳು. ಅವರು ಕತೆ ಹೇಳುವ ಶೈಲಿ, ನಿರೂಪಣೆಯ ಮಾದರಿ ಅದ್ಭುತ. ಅದೇ ನಂಬಿಕೆ ಮತ್ತು ವಿಶ್ವಾಸದ ಮೇಲೆ ‘ಪೆಟ್ಟಾ’ಚಿತ್ರದ ವಿತರಣೆ ಹಕ್ಕು ಪಡೆದಿದ್ದೇನೆ’ ಎಂದರು ಮಂಜು.