ವಿಷ್ಣುವರ್ಧನ್‌, ಅನಂತ್‌ನಾಗ್‌, ಬಿಸಿ ಪಾಟೀಲ್‌ ನಟಿಸಿದ 90ರ ದಶಕದ ಸೂಪರ್‌ ಹಿಟ್‌ ಕನ್ನಡ ಚಿತ್ರ ‘ನಿಷ್ಕರ್ಷ ಮರು ಬಿಡುಗಡೆ ಆಗುತ್ತಿದೆ. ಸುನೀಲ್‌ ಕುಮಾರ್‌ ದೇಸಾಯಿ ನಿರ್ಮಾಣದ ಈ ಜನಪ್ರಿಯ ಚಿತ್ರ 26 ವರ್ಷಗಳ ನಂತರ ರೀ ರಿಲೀಸ್‌ ಆಗುತ್ತಿದೆ.

ಸೆ.18ಕ್ಕೆ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಸೆಪ್ಟೆಂಬರ್‌ 20ಕ್ಕೆ ಈ ಚಿತ್ರ ಕನ್ನಡ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಇದರ ನಿರ್ಮಾಪಕರು ವನಜಾ ಬಿ.ಪಾಟೀಲ್‌. ಸೃಷ್ಟಿಫಿಲಂಸ್‌ ಮೂಲಕ ಈ ಚಿತ್ರ ನಿರ್ಮಾಣವಾಗಿತ್ತು. ಈ ಸಂಸ್ಥೆಯ ಮಾಲೀಕರು ನಟ, ನಿರ್ಮಾಪಕ ಕಮ್‌ ರಾಜಕಾರಣಿ ಬಿ.ಸಿ.ಪಾಟೀಲ್‌.

Add Asianetnews Kannada as a Preferred SourcegooglePreferred

ಹಿಂದಿ ಮತ್ತು ಕನ್ನಡದಲ್ಲಿ ‘ನಿಷ್ಕರ್ಷ’ ರೀ-ರಿಲೀಸ್!

1993ರಲ್ಲಿ ಈ ಚಿತ್ರ ನಿರ್ಮಾಣವಾಗಿದ್ದಾಗ ಇದರ ಒಟ್ಟು ಬಜೆಟ್‌ .60 ಲಕ್ಷ. ಈಗ ಅದರ ಮರು ಬಿಡುಗಡೆ ಮಾಡಲು ಅಂದಾಜು ವೆಚ್ಚ ಸುಮಾರು . 1 ಕೋಟಿ. ಆ ದಿನ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ, ಬಿ.ಸಿ.ಪಾಟೀಲ್‌ ಜತೆಗೆ ಸುಮನ್‌ ನಗರಕರ್‌, ಗುರುಕಿರಣ್‌ ಹಾಜರಿದ್ದರು. ‘ಬೆಳದಿಂಗಳ ಬಾಲೆ ಸಿನಿಮಾ ಮಾಡುವಾಗ ಪೊಲೀಸ್‌ ಇಲಾಖೆಗೆ ಸಂಬಂಧಿಸಿದಂತೆ ಒಂದು ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದೆ. ಆಗ ಶುರುವಾಗಿದ್ದು ನಿಷ್ಕರ್ಷ ಚಿತ್ರ. ಮಣಿಪಾಲ್‌ ಸೆಂಟರ್‌ ಕಟ್ಟಡದಲ್ಲಿದ್ದ ಹನ್ನೊಂದನೇ ಮಹಡಿಯನ್ನೇ ಬ್ಯಾಂಕ್‌ ಆಗಿ ಪರಿವರ್ತಿಸಿ, ಚಿತ್ರೀಕರಣ ನಡೆಸಿದ್ದೆವು. ಈಗಲೂ ಮಣಿಪಾಲ್‌ ಸೆಂಟರ್‌ ಕಂಡಾಗ ಆ ದಿನಗಳೇ ನನಪಾಗುತ್ತಿವೆ’ ಎನ್ನುತ್ತಾ ಹಳೇ ದಿನಗಳನ್ನು ನೆನಪಿಸಿಕೊಂಡರು ಸುನೀಲ್‌ ಕುಮಾರ್‌ ದೇಸಾಯಿ.

93ರಲ್ಲಿ ಈ ಚಿತ್ರ ರಿಲೀಸ್‌ ಆಗಿದ್ದಾಗ ಕೆಲವರು ಇದು 25 ವರ್ಷಗಳ ನಂತರ ಬರಬೇಕಾಗಿದ್ದ ಸಿನಿಮಾ ಅಂದಿದ್ರು. ಆ ಕಾಲಕ್ಕೆ ನಾನು ಆ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ, ಅದೇ ಮಾತು ಇವತ್ತು ಚಿತ್ರದ ಮರು ಬಿಡುಗಡೆಗೆ ಪ್ರಮುಖ ಕಾರಣ.- ಬಿ.ಸಿ. ಪಾಟೀಲ್‌

‘ಚಿತ್ರದಲ್ಲಿ ಇದ್ದಿದ್ದು ಚಿಕ್ಕ ಪಾತ್ರ. ಅದು ಕೂಡ ರೇಪ್‌ ಕೇಸ್‌. ಅಷ್ಟುಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಆ ಪಾತ್ರ ತಂದುಕೊಟ್ಟಜನಪ್ರಿಯತೆ ದೊಡ್ಡದು. ಈಗ ಅದು ಮರು ಬಿಡುಗಡೆ ಆಗುತ್ತಿದೆ ಎನ್ನುವುದು ಸಾಕಷ್ಟುಖುಷಿ ಕೊಟ್ಟಿದೆ’ ಎನ್ನುವುದು ನಟಿ ಸುಮನ್‌ ನಗರಕರ್‌ ಮಾತು. ಗುರುಕಿರಣ್‌ ಕೂಡ ಚಿತ್ರೀಕರಣದ ದಿನಗಳಿಗೆ ಜಾರಿದರು. ನಿರ್ಮಾಪಕಿ ವನಜಾ ಬಿ. ಪಾಟೀಲ್‌ ಹಾಗೂ ಪಾಟೀಲ್‌ ಪುತ್ರಿ ಹಾಗೂ ನಟಿ ಸೃಷ್ಟಿಪಾಟೀಲ್‌ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರವನ್ನು ಡಿಜಿಟಲ್‌ಗೆ ಒಳಪಡಿಸಲು ಓಡಾಡಿದವರು ಈಶ್ವರ್‌. ಕಳೆದ ಒಂದು ವರ್ಷದಿಂದ ಅವರು ಚಿತ್ರದ ತಾಂತ್ರಿಕ ಕೆಲಸಗಳಿಗೆ ಹೈದರಾಬಾದ್‌, ಮುಂಬೈ ಸುತ್ತಾಡಿದ ಅನುಭವ ಹಂಚಿಕೊಂಡರು. ಇದೇ ವೇಳೆ, ಚಿತ್ರದ ಟ್ರೇಲರ್‌ ಪ್ರದರ್ಶಿಸಲಾಯಿತು.