ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಜೋಡಿಯ ಮತ್ತೊಂದು ಚಿತ್ರತೆರೆಗೆ ಬರಲು ರೆಡಿ ಆಗಿದೆ. ಮೇ 1 ಚಿತ್ರದ ನಂತರ ಈ ಜೋಡಿಯ ಹೊಸ ಚಿತ್ರದ ಹೆಸರು ‘ವಾರಂಟ್’.

ಇದೊಂದು ಕ್ರೈಮ್ ಥ್ರಿಲ್ಲರ್. ಹಾಗೆಯೇ ಸೇಡಿನ ಕತೆ. ಪ್ರೀತಿ, ಪ್ರೇಮ ಎನ್ನುವ ಮಾಮೂಲು ಮಸಾಲೆಯ ಜತೆಗೆ ಸೆಂಟಿಮೆಂಟ್ ಸಂಗತಿಗಳು ಈ ಚಿತ್ರದ ಮುಖ್ಯ ಕಥಾಹಂದರ. ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ಲ್ಯಾನ್ ಚಿತ್ರ ತಂಡಕ್ಕಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ನಾಗೇಂದ್ರ ಅರಸ್ ಮತ್ತು ನಟ ಜೆಕೆ ಮಾಧ್ಯಮದ ಮುಂದೆ ಬಂದಾಗ ಪತ್ರಕರ್ತರ ಆಕ್ರೋಶಕ್ಕೆ ಗುರಿಯಾದರು. ನಿರ್ದೇಶಕ ನಾಗೇಂದ್ರ ಅರಸ್ ‘ಮೇ 1’
ಚಿತ್ರದ ರಿಲೀಸ್ ಸಂದರ್ಭದಲ್ಲಿ ಮಾಧ್ಯಮದವರಿಗೆ ಚಿತ್ರ ತೋರಿಸಬೇಕಿಲ್ಲ ಎಂದು ಹೇಳಿದ್ದರು. ಆ ಹೇಳಿಕೆ ಚರ್ಚೆಗೆ ಬಂತು. ಕೊನೆಗೆ ನಾಗೇಂದ್ರಅರಸ್ ಮತ್ತು ಜೆಕೆ ಇಬ್ಬರು ಕ್ಷಮೆ ಯಾಚಿಸಿದ ನಂತರ ಮಾತು ಶುರುವಾಯಿತು.

Add Asianetnews Kannada as a Preferred SourcegooglePreferred

‘ಈ ಚಿತ್ರ ಶುರುವಾಗಿದ್ದೇ ನಿರ್ಮಾಪಕಿ ಮನೀಷಾ ಅವರ ಮೂಲಕ. ಅವರೊಂದು ಕತೆ ಬರೆದಿದ್ದರು. ಸೂಕ್ತ ಸಮಯಕ್ಕೆ ಬಂಡವಾಳ ಹೂಡಲು ಯಾರು ಬರಲಿಲ್ಲ. ಕೊನೆಗೆ ಅವರೇ ನಿರ್ಮಾಪಕರಾದರು’ ಎಂದು ವಿವರಿಸಿದರು. ನಾಯಕಿ ಮನೀಮಷಾ ಮೂಲತಃ ಕರ್ನಾಟಕದವರು. ನಿರ್ದೇಶಕ ನಾಗೇಂದ್ರ ಅರಸ್ ಸಂಪರ್ಕದ ಮೂಲಕ ವಾರೆಂಟ್‌ಗೆ ನಿರ್ಮಾಪಕಿ ಹಾಗೂ ನಾಯಕಿ ಆಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.