ಈ ವಾರ ತೆರೆ ಕಾಣಲಿದೆ ನಾತಿ ಚರಾಮಿ | ಶೃತಿ ಹರಿಹರನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ | ವಿಭಿನ್ನ ಕಥೆಯನ್ನು ಕಟ್ಟುಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ 

ಬೆಂಗಳೂರು (ಡಿ. 26): ಹರಿವು ಚಿತ್ರದ ಮೂಲಕ ನಮ್ಮ ನಡುವಿನದ್ದೇ ಕಥೆಯೊಂದನ್ನು ಪ್ರೇಕ್ಷಕರೆದೆಗೆ ದಾಟಿಸಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಮ್ಮ ನೆಲದ ಪ್ರತಿಭಾವಂತ ನಿರ್ದೇಶಕ ಮಂಸೋರೆ. ಇದೀಗ ಅವರ ನಾತಿಚರಾಮಿ ಎಂಬ ಭಿನ್ನ ಕಥಾನಕವೊಂದನ್ನು ಚಿತ್ರವಾಗಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ವಾರ ತೆರೆ ಕಾಣಲಿದೆ ’ನಾತಿ ಚರಾಮಿ’

ಹರಿವು ಚಿತ್ರದ ಪ್ರಭೆಯಲ್ಲಿಯೇ ಸದ್ಯ ನಾತಿಚರಾಮಿಯ ಬಗೆಗೂ ಗಾಢವಾದ ನಿರೀಕ್ಷೆ ಹುಟ್ಟಿಕೊಂಡಿದೆ. ಯಾಕೆಂದರೆ ಇದೇ ವಾರ ಈ ಸಿನಿಮಾ ಥಿಯೇಟರಿನಲ್ಲಿ ಪ್ರತ್ಯಕ್ಷವಾಗುತ್ತಿದೆ.

ನಿರ್ದೇಶಕನೊಬ್ಬ ಎಲ್ಲ ಥಳುಕು ಬಳುಕುಗಳಾಚೆಗಿನ ಕಥೆಯೊಂದನ್ನು ಮುಟ್ಟಲು ಸಾಧ್ಯವಾಗೋದು ಅಕ್ಷರಗಳ ಸಾಂಗತ್ಯದಿಂದ. ಅಂಥದ್ದೊಂದು ಸೂಕ್ಷ್ಮವಂತಿಕೆಯ ಪರಾಗವನ್ನು ಪುಸ್ತಕಗಳಲ್ಲದೆ ಮತ್ಯಾವ ಮಾಯೆಯೂ ಮನಸಿಗೆ ಸವರಲು ಸಾಧ್ಯವಿಲ್ಲ. ಇದನ್ನೆಲ್ಲ ಯಾಕೆ ಹೇಳಬೇಕಾಯ್ತೆಂದರೆ, ಮಂಸೋರೆ ಎಂಬ ನಿರ್ದೇಶಕ ಭಿನ್ನವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾದದ್ದು ಅವರ ಓದಿನ ಅಭ್ಯಾಸ. ಮಂಸೋರೆಯವರ ಓದಿನ ಹಿಂದಿನ ಒಂದಷ್ಟು ವಿವರಗಳನ್ನು ಪುಸ್ತಕ ಪ್ರೀತಿಯ ಸಂಕೇತದಂತಿರುವ, ಅಪರೂಪದ ಪುಸ್ತಕಗಳನ್ನು ಓದುಗರಿಗೆ ಸಿಗುವಂತೆ ಮಾಡುತ್ತಿರುವ ಆಕೃತಿ ಪುಸ್ತಕ ಮಳಿಗೆಯ ಗುರುಪ್ರಸಾದ್ ಅವರು ತೆರೆದಿಟ್ಟಿದ್ದಾರೆ.

’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆ

ಮೂಲತಃ ಪತ್ರಕರ್ತರೂ ಆಗಿರುವ ಗುರುಪ್ರಸಾದ್ ಅವರು ಮಂಸೋರೆ ಅವರ ಬಗ್ಗೆ ಬರೆದುಕೊಂಡಿರೋ ವಿವರಗಳು ನಿರ್ದೇಶಕರಾಗ ಬಯಸುವವರಿಗೆ ಖಂಡಿತಾ ಸ್ಫೂರ್ತಿಯಂತಿವೆ. ಕಥೆ ಹೇಳುವ ಸಾಮಥ್ರ್ಯ ಅಂತೊಂದಿದೆಯಲ್ಲಾ? ಅದನ್ನು ಗಟ್ಟಿಗೊಳಿಸುವುದು ಬಾಲ್ಯದಿಂದಲೇ ಹಚ್ಚಿಕೊಂಡ ಓದಿನ ರುಚಿ.

ಆರಂಭ ಕಾಲದಲ್ಲಿ ಓದಿಗೆ ಹಚ್ಚಿದ ಪುಸ್ತಕಗಳು ಮತ್ತೆ ಸಿಕ್ಕಾವಾ ಎಂಬ ಆಸೆಗಣ್ಣೊಂದು ಓದಿನ ಹುಚ್ಚಿರೋ ಪ್ರತಿಯೊಬ್ಬರನ್ನೂ ಸದಾ ಕಾಡುತ್ತಿರುತ್ತೆ. ಅಂಥಾದ್ದೇ ಸೂಕ್ಷ್ಮತೆ ಹೊಂದಿರೋ ಮಂಸೋರೆ ಇತ್ತೀಚೆಗೆ ಆಕೃತಿ ಪುಸ್ತಕಾಲಯಕ್ಕೆ ಭೇಟಿ ನೀಡಿ ಅಂಥಾ ಆಸೆಗಳನ್ನು ನೆರವೇರಿಸಿಕೊಂಡಿದ್ದಾರೆ. ಅಗಾಧವಾದ ನೆನಪಿನ ಶಕ್ತಿ ಹೊಂದಿರೋ ಮಂಸೋರೆ ಅವರಿಗೆ ಬಾಲ್ಯದಲ್ಲಿ ಓದಿಗೆ ಹಚ್ಚಿದ್ದ ಕೇರಳದ ಮಾತ್ರಿಕರ ಕಥೆಗಳು ಇಂದಿಗೂ ನೆನಪಿದೆಯಂತೆ. ಅದೇ ಗುಂಗಿನಲ್ಲಿ ಬಾಲ್ಯದಲ್ಲಿ ಅವರ ಕಲ್ಪನಾ ಜಗತ್ತನನು ವಿಸ್ತರಿಸಿದ್ದ ಅಮರಚಿತ್ರಕಥೆಯ ಚಿತ್ರ ಪುಸ್ತಕಗಳನ್ನೂ ಖರೀದಿಸಿಕೊಂಡು ಹೋಗಿದ್ದಾರಂತೆ.

ಬಹುಶಃ ಇಂಥಾ ಓದಿನ ಗುಂಗಿಲ್ಲದೇ ಹೋದರೆ ಕಥೆ ಹೇಳುವ ಕಸುವು ಪರಿಣಾಮಕಾರಿಯಾಗಲು ಸಾಧ್ಯವಿಲ್ಲವೇನೋ. ಇಂಥಾ ಅಪಾರ ಓದಿನ ಪ್ರೇರಣೆಯಿಂದಲೇ ಗುರುತಿಸಿಕೊಂಡಿರೋ ಮಂಸೋರೆ ನಿರ್ದೇಶನದ, ಲೇಖಕಿ ಸಂಧ್ಯಾರಾಣಿಯವರು ಚಿತ್ರಕಥೆ, ಸಂಭಾಷಣೆ ಬರೆದಿರುವ ನಾತಿಚರಾಮಿ ಚಿತ್ರ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.