ನಟ ಯಶ್ ಹೆಸರಲ್ಲಿ ಅಕ್ರಮ ದೇಣಿಗೆ ಸಂಗ್ರಹ
ನಟ ಯಶ್ ಅವರ ಯಶೋಮಾರ್ಗ ಸಂಸ್ಥೆಯ ಹೆಸರು ಹೇಳಿಕೊಂಡು ಕೊಡಗು ಮಹಾಮಳೆಯ ಸಂತ್ರಸ್ತರಿಗಾಗಿ ಕೆಲವರು ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದರಿಂದ ಯಶೋಮಾರ್ಗದ ಹೆಸರು ಹೇಳಿಕೊಂಡು ಬರುವವರಿಗೆ ದೇಣಿಗೆ ಕೊಡಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.
ಬೆಂಗಳೂರು : ಖ್ಯಾತ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆಯ ಹೆಸರು ಹೇಳಿಕೊಂಡು ಕೊಡಗು ಮಹಾಮಳೆಯ ಸಂತ್ರಸ್ತರಿಗಾಗಿ ಕೆಲವರು ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಕುರಿತು ಸ್ವತಃ ಯಶ್ ಅವರು ಜನರಿಗೆ ಮಾಹಿತಿ ನೀಡಿದ್ದು, ಯಶೋಮಾರ್ಗದ ಹೆಸರು ಹೇಳಿಕೊಂಡು ಬರುವವರಿಗೆ ದೇಣಿಗೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
‘ನೆರೆ ಸಂತ್ರಸ್ತರಿಗಾಗಿ ನಾನು ದೇಣಿಗೆ ಸಂಗ್ರಹಿಸುತ್ತಿಲ್ಲ. ಯಶೋಮಾರ್ಗ ಸಂಸ್ಥೆ ಮೂಲಕ ನನ್ನ ಸ್ವಂತ ಸಂಪಾದನೆಯ ಹಣದಲ್ಲಿ ಕೈಲಾದಷ್ಟುಸೇವಾಕಾರ್ಯ ಮಾಡುತ್ತಾ ಬಂದಿದ್ದೇನೆ.
ಇದಕ್ಕಾಗಿ ಯಾರಿಂದಲೂ ದೇಣಿಗೆಯನ್ನು ಸ್ವೀಕರಿಸುತ್ತಿಲ್ಲ. ಆದರೆ, ಕೊಡಗಿನಲ್ಲಿ ಮಹಾಮಳೆಯಿಂದ ನಿರಾಶ್ರಿತರಾದವರಿಗೆ ನೆರವಾಗುವ ನೆಪದಲ್ಲಿ ಅನೇಕರು ಯಶೋಮಾರ್ಗ ಸಂಸ್ಥೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೂ ಅವರಿಗೆ ದೇಣಿಗೆ ನೀಡಬೇಡಿ’ ಎಂದು ಯಶ್ ವಿನಂತಿಸಿದ್ದಾರೆ.