ವಿದ್ಯುತ್ ಸರಿಯಾಗಿ ನೀಡಬೇಕು ಎಂದು ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಚೇಳೂರು: ವಿದ್ಯುತ್ ಸರಿಯಾಗಿ ನೀಡಬೇಕು ಎಂದು ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ನೂರಾರು ರೈತರು ಪ್ರತಿಭಟನೆ ನಡೆಸಿದರು.

Add Asianetnews Kannada as a Preferred SourcegooglePreferred

ಚೇಳೂರು ಬೆಸ್ಕಾಂ ಕಚೇರಿ ಬಳಿ ಹಾಗೂ ತುಮಕೂರು ಮತ್ತು ಸಿರಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರು ಅನ್ನದಾತರು ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿ ಬದುಕುತಿದ್ದಾರೆ, ಅಡಿಕೆ, ತೆಂಗು, ಬಾಳೆ ಬೆಳೆದಿದ್ದು ಕನಿಷ್ಠ ವಿದ್ಯುತ್‌ ನೀಡುತ್ತಿಲ್ಲ. ಇದರಿಂದ ರೈತರ ಜೀವನ ಅಧೋಗತಿಗೆ ಇಳಿದಿದೆ. ತೋಟದ ಮನೆಗಳಲ್ಲಿ ವಾಸಿಸುತ್ತಿರುವಂತಹ ಮನೆಯವರಿಗೂ ವಿದ್ಯುತ್ತ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ಸರ್ಕಾರ ನೀಡಿರುವ ಯಾವುದೇ ಭಾಗ್ಯಗಳು ನಮಗೆ ಬೇಕಿಲ್ಲ, ರೈತರಿಗೆ ಬೇಕಾದ ವಿದ್ಯುತ್‌ ನೀಡಿದರೆ ಅದೇ ದೊಡ್ಡ ಭಾಗ್ಯವಾಗುತ್ತದೆ.

ವಿದ್ಯುತ್‌ ನೀಡದೆ ಮೊಂಡತನ ತೋರಿಸಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡ ಕರೆಗೌಡ ಮಾತನಾಡಿ, ರೈತರು ಬೆಳೆದ ಯಾವುದೇ ಬೆಳೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದೆ. ಅಡಿಕೆ ಬೆಳೆದು ಜೀವನ ಕಟ್ಟಿಕೊಳ್ಳುವ ವೇಳೆ ವಿದ್ಯುತ್ ನೀಡದೆ ರೈತರ ಬದುಕನ್ನು ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ರಾಜ್ಯದ ಎಲ್ಲಾ ಭಾಗದಲ್ಲಿಯೂ ವಿದ್ಯುತ್‌ ಸಮಸ್ಯೆ ಇದೇ, ಎಲ್ಲಿಯೂ ವಿದ್ಯುತ್ ಉತ್ಪಾದನೆ ಆಗದೆ ಸಮಸ್ಯೆಆಗುತ್ತಿದ್ದು, ಭಾನುವಾರದ ವೇಳೆಗೆ ಬೇರೆ ರಾಜ್ಯಗಳಿಂದ ಮತ್ತು ಪಾವಗಡದ ಸೋಲಾರ್ ಪಾರ್ಕ್ ನಿಂದ ನಮಗೆ ಹೆಚ್ಚಿನ ವಿದ್ಯುತ್ ಗ್ರೀಡ್ಗಳಿಗೆ ವಿದ್ಯುತ್ ಒದಗುತ್ತದೆ ನಂತರ ಹಿಂದೆ ಯಾವ ರೀತಿ ನೀಡಲಾಗಿತ್ತೋ ಅದೇ ರೀತಿ ಮುಂದುವರಿಸುತ್ತೇವೆ. ಇನ್ನು ತೋಟದ ಮನೆಗಳಿಗೆ ವಿದ್ಯುತ್ ನೀಡುವುದಕ್ಕೆ ವಿಶೇಷವಾಗಿ ಸರಕಾರದ ಅನುಮತಿ ಪಡೆದು ನೀಡಲಾಗುತ್ತದೆ ಎಂದರು.

ರೈತ ಮುಖಂಡರಾದ ಕೆಂಪರಾಜು ಕೆ ಟಿ ರಂಗಸ್ವಾಮಿ, ಮಂಜುನಾಥ್, ಹೇಮಂತ್ ಕುಮಾರ್ ನಟರಾಜು,ರಾಜಶೇಖರ್, ಶಿವಕುಮಾರ್, ಬಾಳೆಕಾಯಿ ರಾಜು, ಲೋಕಣ್ಣ. ಎ ಇ ಇ ಕರಿಯಪ್ಪ ಬೆಸ್ಕಾಂ ಅಧಿಕಾರಿಗಳಾದ ನವೀನ್ ಕುಮಾರ್ ಇದ್ದರು.

ರೈತರ ಬೇಡಿಕೆ ಈಡೆರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದು ಮನವಿ ಪತ್ರ ಸಲ್ಲಿಸಿದರು. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

 ಎಲ್ಲೆಡೆ ಲೋಡ್ ಶೆಡ್ಡಿಂಗ್ ಬಿಸಿ

 ತುಮಕೂರು : ಎಲ್ಲೆಡೆ ಲೋಡ್ ಶೆಡ್ಡಿಂಗ್ ಬಿಸಿ ತಟ್ಟುತ್ತಿರುವ ಬೆನ್ನಲ್ಲೇ ನ್ಯಾಯಾಲಯದ ಕಲಾಪಕ್ಕೂ ಲೋಡ್ ಶೆಡ್ಡಿಂಗ್ ಬಿಸಿ ತಟ್ಟಿರುವ ಘಟನೆ ನಡೆದಿದೆ.

ತುಮಕೂರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ವಿದ್ಯುತ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಮೊಬೈಲ್ ಟಾರ್ಚರ್ ನಲ್ಲೇ ನ್ಯಾಯಾಲಯದ ಕಲಾಪಗಳನ್ನು ತುಮಕೂರು ಉಪವಿಭಾಗಾಧಿಕಾರಿ ಗೌರವಕುಮಾರ ಶೆಟ್ಟಿ ನಡೆಸಿದರು.

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಕಿ ಇದ್ದ ಪ್ರಕರಣಗಳ ಕಲಾಪ ನಡೆಸುತ್ತಿದ್ದ ವೇಳೆ ಬೆಸ್ಕಾಂ ನವರು ಲೋಡ್ ಶೆಡ್ಡಿಂಗ್ ಮಾಡಿದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದೆ ಮೊಬೈಲ್ ಟಾರ್ಚ್ ಬಳಸಿ ವಕೀಲರ ಹಾಗೂ ಸಾರ್ವಜನಿಕರ ಅಹವಾಲನ್ನು ಉಪವಿಭಾಗಾಧಿಕಾರಿಗಳು ಆಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಹೀಗಾದರೆ ಜನಸಾಮಾನ್ಯರ ಪಾಡೇನು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.