ಹೃದಯಸ್ತಂಭನದಿಂದ ನಿಧನರಾದ ನಟ ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ, ಪತಿಯ ಅಗಲಿಕೆಯ ನೋವಿನಲ್ಲಿ ದೇವರಿಗೆ ಹಿಡಿಶಾಪ ಹಾಕಿದ್ದಾರೆ. ಖುಷಿಯಾಗಿರುವ ಸಂಸಾರಗಳನ್ನು ದೇವರು ನಾಶಮಾಡುತ್ತಾನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಮತ್ತು ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಹೃದಯಸ್ತಂಭನದಿಂದ ಸಾವಿಗೀಡಾದ ನಟ, ನಿರ್ಮಾಪಕ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಇದೀಗ ಪತಿಯ ಅಗಲಿಕೆಯ ಆಘಾತದಲ್ಲಿ ದೇವರಿಗೆ ಹಿಡಿಶಾಪ ಹಾಕಿದ್ದಾರೆ. ತನ್ನ ಬದುಕನ್ನು ನೋವಿಗೆ ತಳ್ಳಿದ ದೇವರ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

‘ದೇವರಿದ್ದಾನೆ, ಖುಷಿಯಾಗಿದ್ದರೆ ಅವನು ನಿಮ್ಮ ಸಂಸಾರವನ್ನು ಖಂಡಿತಾ ನಾಶಮಾಡದೇ ಬಿಡುವುದಿಲ್ಲ’ ಎಂದು ವ್ಯಂಗ್ಯವಾಗಿ ಕಟುನುಡಿಯನ್ನಾಡಿದ್ದು, ತನ್ನ ಸದ್ಯದ ಮನಸ್ಥಿತಿ ಹೇಗಿದೆ ಎಂದು ಬರೆದುಕೊಂಡಿದ್ದಾರೆ.
‘ನನಗೆ ಸದ್ಯದ ಪರಿಸ್ಥಿತಿಯಲ್ಲಿ ಏನನಿಸುತ್ತದೆ ಎಂದರೆ- ಒಂದು ಸಂಸಾರ ಹೇಗಿರಬೇಕು ಅಂದ್ರೆ, ಗಂಡ ಹೆಂಡತಿಯನ್ನು ಯಾವಾಗಲೂ ಹೊಡೆಯುತ್ತ ಇರಬೇಕು, ಕುಡಿದು ಬಂದು ಗಲಾಟೆ ಮಾಡುತ್ತ ಇರಬೇಕು. ಹೆಂಡತಿ ಗಂಡನನ್ನು ದೂಷಿಸುತ್ತಾ ಇರಬೇಕು. ಮಕ್ಕಳು ತಂದೆ ತಾಯಿಯನ್ನು ಗೌರವಿಸಬಾರದು. ತಂದೆ ತಾಯಿಯೂ ಅಷ್ಟೇ, ಮಕ್ಕಳನ್ನು ನಿಂದಿಸುತ್ತಿರಬೇಕು. ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದು ಇರಬಾರದು. ಯಾಕೆಂದರೆ ದೇವರಿದ್ದಾನೆ. ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೋ, ಯಾರು ತುಂಬ ಖುಷಿಯಿಂದ ಬದುಕುತ್ತಿರುತ್ತಾರೋ ಅಂಥವರ ಮನೆ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ’ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
‘ದೇವರಿದ್ದಾನೆ ಹುಷಾರಾಗಿರಿ. ಖುಷಿಯಾಗಿದ್ದರೆ ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ನಾಶ ಮಾಡದೆ ಬಿಡುವುದಿಲ್ಲ’ ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ. ಅನೇಕರು ಶ್ರೀವಿದ್ಯಾ ಅವರ ನೋವಿಗೆ ಸ್ಪಂದನೆಯ ನುಡಿಗಳನ್ನಾಡಿದ್ದಾರೆ.


