ಕೆ ಮಂಜು ಪುತ್ರ ಶ್ರೇಯಸ್‌ ಮೊದಲ ಬಾರಿಗೆ ನಟಿ​ಸಿ​ರುವ ‘ಪಡ್ಡೆ​ಹು​ಲಿ’ ಚಿತ್ರದ್ದೇ ಈಗ ಹವಾ. ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಿಸಿರು, ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರ ಏಪ್ರಿಲ್‌ 19ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ಇಲ್ಲಿ ಮಾತನಾಡಿದ್ದಾರೆ.

ಆರ್‌ ಕೇಶವಮೂರ್ತಿ

Add Asianetnews Kannada as a Preferred SourcegooglePreferred

ನಿಮ್ಮ ಹಿಂದಿನ ಚಿತ್ರಗಳಿಗಿಂತಲೂ ಪಡ್ಡೆಹುಲಿ ಚಿತ್ರೀಕರಣಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದು ಯಾಕೆ?

ಸಾಕಷ್ಟುತಯಾರಿ ಬೇಕಿತ್ತು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ಹುಡುಗನ ಚಿತ್ರವಿದು. ಹಲವು ಗೆಟಪ್‌ಗಳಿವೆ. ಹೀಗಾಗಿ ಚಿತ್ರದ ನಾಯಕ ಶ್ರೇಯಸ್‌ ಅವರಿಗೆ ಪೂರ್ವ ತಯಾರಿ ಬೇಕಿತ್ತು. ಜತೆಗೆ ಹಾಡುಗಳಿಗೆ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ಮಾಡಿದ್ದೇವೆ. ಹೊಸಬನ ಸಿನಿಮಾ ಅಂತ ಲೈಟಾಗಿ ತೆಗೆದುಕೊಳ್ಳಲಿಲ್ಲ.

ಹಾಗಿದ್ದರೆ ಶ್ರೇಯಸ್‌ ನಿರ್ಮಾಪಕರ ಮಗ ಎನ್ನುವ ಒತ್ತಡ ನಿಮ್ಮ ಮೇಲಿತ್ತೇ?

ಚಿತ್ರರಂಗದಲ್ಲಿ 40 ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕರ ಮಗನ ಮೊದಲ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ ಎಂದಾಗ ಒತ್ತಡಕ್ಕಿಂತ ಜವಾಬ್ದಾರಿ ಹೆಚ್ಚಿರುತ್ತದೆ. ಚಿತ್ರರಂಗವೇ ಎದುರು ನೋಡುತ್ತಿರುತ್ತದೆ.

ಸರಿ, ‘ಪಡ್ಡೆಹುಲಿ’ ಚಿತ್ರದ ಕತೆಯ ತಿರುಳು ಏನು?

ಸೆಲೆಬ್ರಿಟಿಗಳ ಬಯೋಪಿಕ್‌ಗಳು ಸಿನಿಮಾ ಆಗುತ್ತವೆ. ಇದು ಮಧ್ಯಮ ಹುಡುಗನ ಬಯೋಗ್ರಪಿ. ಈಗಿನ ಜನ​ರೇ​ಷ​ನ್‌ಗೆ ನೇರ​ವಾಗಿ ಕನೆಕ್ಟ್ ಆಗುವ ಕತೆ. ಇಂಜಿ​ನಿ​ಯರ್‌, ಡಾಕ್ಟರ್‌ ಆಗುವ ಕನಸು ಕಾಣುವವರ ನಡುವೆ ಒಬ್ಬ ಹುಡುಗ ರಾರ‍ಯಪ್‌ ಸಿಂಗರ್‌ ಆಗಲು ಹೊರಡುವ ಕತೆ. ಅದ​ರಲ್ಲೂ ಕನ್ನ​ಡದ ಸೊಗ​ಡಿನ ಗೀತೆ​ಗ​ಳನ್ನು ಪಾಶ್ಚಿ​ಮಾತ್ಯ ಶೈಲಿ​ನ​ಯಲ್ಲಿ ಪ್ರಸ್ತುತ ಪಡಿ​ಸು​ವುದು ಈಗಿ​ನವರ ಹೊಸ ಟ್ರೆಂಡ್‌. ಈ ಕಾರ​ಣಕ್ಕೆ ಇದು ಯುವ ಪೀಳಿ​ಗೆಯ ಸಿನಿ​ಮಾ.

ನೆಲದ ಸೊಗಡಿನ ಕಥೆ ಹೇಳಲಿರೋ ಪಡ್ಡೆಹುಲಿ!

ಯಾವ ಕಾರಣಕ್ಕೆ ‘ಪಡ್ಡೆಹುಲಿ’ ಚಿತ್ರವನ್ನು ನೋಡಬೇಕು?

ಜೀವನದಲ್ಲಿ ಸಾಧನೆ, ಗುರಿಗಳ ಬಗೆಗಿನ ಕನಸನ್ನು ಈಡೇರಿಸಿಕೊಳ್ಳುವುದು ಹೇಗೆ? ಆ ಪ್ರಯತ್ನದಲ್ಲಿ ಹೆತ್ತವರ ಪಾತ್ರವೇನು? ಪೋಷಕರು ಮತ್ತು ಮಕ್ಕಳು, ಜತೆಗೆ ಅವರ ಬದುಕಿನ ದಾರಿ ಈ ಮೂರು ತಿರುವುಗಳು ಸಿನಿಮಾ ಆದರೆ ಹೇಗಿರುತ್ತದೆ ಎಂದು ಇಲ್ಲಿ ನೋಡಬಹುದು.

ನೀವು ಹೇಳುವ ಅಂಥ ಸೊಗಡು ಇಲ್ಲಿ ಏನಿದೆ?

ಹಾಡು, ಸಂಗೀತ ಎಂದಾಗ ನನಮಗೆ ನೆನಪಾಗುವುದು ಹಂಸಲೇಖ, ಕೆ ಎಸ್‌ ಅಶ್ವತ್‌್ಥ, ಮೈಸೂರು ಅನಂತಸ್ವಾಮಿ, ರಘು ದೀಕ್ಷಿತ್‌ ಮುಂತಾದವರು. ಕನ್ನಡದ ಸಾಹಿತ್ಯವನ್ನು ಗೀತೆಗಳನ್ನಾಗಿಸಿ ಕಾಲ ಕಾಲಕ್ಕೆ ಕೇಳುಗರಿಗೆ ತಲುಪಿಸುತ್ತಿದ್ದಾರೆ. ಅದೇ ರೀತಿ ಈಗಿನ ಒಬ್ಬ ಹುಡುಗ ಇಂಥ ದಿಗ್ಗಜರಿಂದ ಸ್ಫೂರ್ತಿಗೊಂಡು ಕನ್ನಡತನವನ್ನು, ಕನ್ನಡದ ಭಾವಗೀತೆಗಳನ್ನು ಈ ಜನರೇಷನ್‌ಗೆ ಹೇಗೆ ಮುಟ್ಟಿಸುತ್ತಾನೆ ಎನ್ನುವುದನ್ನು ತೋರಿಸಿದ್ದೇನೆ.

ಈ ಚಿತ್ರದ ಮುಖ್ಯ ಪಿಲ್ಲರ್‌ಗಳೇನು?

ಹಾಡು​ಗಳೇ ಜೀವಾಳ. ಹತ್ತು ಹಾಡು​ಗ​ಳಿವೆ. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ನಟ ರವಿ​ಚಂದ್ರನ್‌ ಅವರ ‘ಪ್ರೇಮ​ಲೋ​ಕ’ ಹೇಗೆ ಆ ದಿನಗಳಲ್ಲಿ ಹಾಡು​ಗಳ ಮೂಲ​ಕವೇ ಸದ್ದು ಮಾಡಿ​ತೋ ಅದೇ ರೀತಿ ಈಗ ‘ಪಡ್ಡೆ​ಹು​ಲಿ’ಯ ಹಾಡು​ಗಳು ಸಂಗೀತ ಪ್ರಿಯ​ರಲ್ಲಿ ಹೊಸದಾಗಿ ಕೇಳಿಸುತ್ತಿವೆ. ಜತೆಗೆ ಚಿತ್ರ​ದುರ್ಗ ಕೋಟೆ​ಯಲ್ಲಿ ರೂಪಿ​ಸಿ​ರುವ ಹಾಡು, ವಿಷ್ಣು ದಾದಾ ಅವ​ರನ್ನು ನೆನ​ಪಿ​ಸು​ತ್ತದೆ. ಈ ಚಿತ್ರ​ವನ್ನು ಅದ್ದೂ​ರಿ​ಯಾಗಿ ನಿರ್ಮಿ​ಸಿ​ರುವ ರಮೇಶ್‌ ರೆಡ್ಡಿ ನಂಗ್ಲಿ ಅವರು ಯಾವು​ದಕ್ಕೂ ಕಡಿಮೆ ಮಾಡಿಲ್ಲ. ಇನ್ನೂ ರವಿಚಂದ್ರನ್‌, ರಕ್ಷಿತ್‌ ಶೆಟ್ಟಿ, ಪುನೀತ್‌ ರಾಜ್‌ಕುಮಾರ್‌ ಅವರ ಪಾತ್ರಗಳು ಕೂಡ ಚಿತ್ರದ ಬೆನ್ನೆಲುಬು.

ಚಿತ್ರದ ಹೆಸರು ಮಾಸ್‌, ಕತೆ ಕ್ಲಾಸ್‌. ಜತೆಗೆ ಸಂಗೀತ ಪ್ರಧಾನ. ಸಂಗೀತಕ್ಕೂ ಹುಲಿಗೆ ಏನು ಸಂಬಂಧ?

ನಾಯಕನ ಕ್ಯಾರೆಕ್ಟರ್‌ ಅಷ್ಟುಜೋಶ್‌ ಆಗಿರುತ್ತದೆ. ಪಡ್ಡೆ ಅಂದರೆ ಹುಡುಗ. ಆ ಹುಡುಗನಲ್ಲಿರುವ ಹಸಿವು, ಕನಸು ಹುಲಿಗೆ ಸಮ. ಇನ್ನೂ ಕೆ ಮಂಜು ಅವರಿಗೆ ನಾನು ರಾಜಾಹುಲಿ ಮಾಡಿ ಗೆದ್ದಿರುವೆ. ಆ ಸೆಟಿಮೆಂಟ್‌ನಿಂದಲೇ ಚಿತ್ರಕ್ಕೆ ಪಡ್ಡೆಹುಲಿ ಅಂತ ಹೆಸರಿಟ್ಟಿರುವುದು. ಅಲ್ಲದೆ ಹಾಡುವವನು, ಸಂಗೀತ ನುಡಿಸುವವನು ಫೈಟ್‌ ಮಾಡಬಾರದು ಅಂತೇನಿಲ್ಲ. ಇಲ್ಲಿನ ನಾಯಕನ ಊರು ಚಿತ್ರದುರ್ಗ. ಹೋರಾಟದ ಕಲಿಗಳ ನಾಡು.

ಪುನೀತ್‌ ಹಾಗೂ ರಕ್ಷಿತ್‌ ಶೆಟ್ಟಿಅವರ ಪಾತ್ರಗಳು ಹೈಪ್‌ ಕ್ರಿಯೇಟ್‌ಗಾಗಿಯೇ?

ಖಂಡಿತ ಅಲ್ಲ. ಇಡೀ ಸಿನಿಮಾ ಒಂದು ವಿಶೇಷವಾದ ಕಾಂಬಿನೇಷನ್‌ನಿಂದ ಕೂಡಿದೆ. ಇಲ್ಲಿ ತಂದೆಯಾಗಿ ರವಿಚಂದ್ರನ್‌ ಇದ್ದಾರೆ. ಆ ಕಾಲದ ‘ಹಳ್ಳಿ ಮೇಸ್ಟು್ರ’ ಈಗ ಕನ್ನಡದ ಪ್ರೊಫೆಸರ್‌ ಆದರೆ ಹೇಗಿರುತ್ತದೆ ಎಂಬುದನ್ನು ರವಿಚಂದ್ರನ್‌ ಪಾತ್ರದಲ್ಲಿ ನೋಡಬಹುದು. ಇನ್ನೂ ತಾಯಿ ಪಾತ್ರದಲ್ಲಿ ಸುಧಾರಾಣಿ ಇದ್ದಾರೆ. ಹಾಗೆ ಕತೆಗೆ ಪೂರಕವಾಗಿ ರಕ್ಷಿತ್‌ ಶೆಟ್ಟಿಬರುತ್ತಾರೆ. ಅವರದ್ದು ಈ ಮೊದಲೇ ಹೇಳಿದಂತೆ ಚಿತ್ರದ ನಾಯಕನ ಸೀನಿಯರ್‌ ಪಾತ್ರ. ಜತೆಗೆ ಕಬಡ್ಡಿ ತಂಡದ ಕ್ಯಾಪ್ಟನ್‌ ಬೇರೆ. ಈ ಪಾತ್ರವನ್ನು ಒಬ್ಬ ಯಂಗ್‌ ಹೀರೋ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೆ ರಕ್ಷಿತ್‌ ಶೆಟ್ಟಿಅವರು ಬಂದಿದ್ದು. ‘ಕಿರಿಕ್‌ ಪಾರ್ಟಿ’ಯ ಮುಂದುವರೆದ ಪಾತ್ರ ಇಲ್ಲಿದೆ. ಹಾಗೆ ಪುನೀತ್‌ ರಾಜ್‌ಕುಮಾರ್‌ ಅವರದ್ದು ಒಂದು ರಿಯಾಲಿಸ್ಟಿಕ್‌ ಪಾತ್ರ. ಅದನ್ನು ತೆರೆ ಮೇಲೆಯೇ ನೋಡಬೇಕು. ಪ್ರತಿಯೊಂದು ಪಾತ್ರವೂ ಕತೆಗೆ ಪೂರಕವಾಗಿದೆ.