ಯೂಟ್ಯೂಬರ್ ಧ್ರುವ್ ರಾಥಿ ಅವರು 'ಧುರಂಧರ್ 2' ಚಿತ್ರವನ್ನು ಕಳಪೆ 'ಪ್ರೊಪಗಾಂಡ' ಎಂದು ಟೀಕಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರನ್ನು 'ಬಿಜೆಪಿ ಪ್ರಚಾರಕ' ಎಂದು ಕರೆದಿದ್ದು, ಈ ಚಿತ್ರದ ಮೂಲಕ ಅದು ಎಲ್ಲರಿಗೂ ತಿಳಿಯಲಿದೆ ಎಂದಿದ್ದಾರೆ.

ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಂಡಿದೆ. ಮೊದಲ ಭಾಗದಂತೆ ಎರಡನೇ ಭಾಗವೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಆದರೆ, ಈಗ ಯೂಟ್ಯೂಬರ್ ಧ್ರುವ್ ರಾಠಿ ಈ ಚಿತ್ರದ ಬಗ್ಗೆ ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. ಮೊದಲ ಭಾಗದಲ್ಲಿ ಪ್ರೊಪಗಾಂಡವನ್ನು ಸೂಕ್ಷ್ಮವಾಗಿ ತೋರಿಸಲಾಗಿತ್ತು, ಆದರೆ ಎರಡನೇ ಭಾಗದಲ್ಲಿ ಹಾಗಾಗಿಲ್ಲ ಎಂದು ಧ್ರುವ್ ರಾಠಿ ಹೇಳಿದ್ದಾರೆ. ಅತಿಯಾದ ಆತ್ಮವಿಶ್ವಾಸದಿಂದ ನಿರ್ದೇಶಕರು ಎಲ್ಲವನ್ನೂ ಬಹಿರಂಗವಾಗಿಯೇ ತೋರಿಸಿದ್ದಾರೆ ಎಂದು ರಾಠಿ ಅಭಿಪ್ರಾಯಪಟ್ಟಿದ್ದಾರೆ.

ಮೂರು ತಿಂಗಳ ಹಿಂದೆ ನಾನು ಆದಿತ್ಯ ಧರ್ ಅವರನ್ನು 'ಬಿಜೆಪಿಯ ಪ್ರಚಾರಕ' ಅಂತ ಕರೆದಿದ್ದೆ. ಈಗ ಅದು ಎಲ್ಲರಿಗೂ ಅರ್ಥವಾಗಿರಬಹುದು. ಮೊದಲ ಭಾಗದಲ್ಲಿ ಪ್ರೊಪಗಾಂಡ ತುಂಬಾನೇ ಸೂಕ್ಷ್ಮವಾಗಿತ್ತು. ಆದರೆ ಈ ಬಾರಿ, ಅತಿಯಾದ ಆತ್ಮವಿಶ್ವಾಸದಿಂದ ಅವರು ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ಚೆನ್ನಾಗಿ ಮಾಡಿದ ಪ್ರೊಪಗಾಂಡ ಹೆಚ್ಚು ಅಪಾಯಕಾರಿ ಅಂತ ನಾನು ಹಿಂದೆ ಹೇಳಿದ್ದು ನೆನಪಿದೆಯಾ? ಆದರೆ ಈ ಬಾರಿ, ಇದು ಅಷ್ಟೊಂದು ಚೆನ್ನಾಗಿಯೂ ಮೂಡಿಬಂದಿಲ್ಲ ಎಂದು ಧ್ರುವ್ ರಾಥಿ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ಮೊದಲ ಭಾಗವು ಭಾರತ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ, ವಿಶೇಷವಾಗಿ ಉತ್ತರ ಅಮೆರಿಕ, ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾಗಳಲ್ಲಿ ದಾಖಲೆಯ ಬಾಕ್ಸ್ ಆಫೀಸ್ ಗಳಿಕೆ ಮಾಡಿತ್ತು. ಹೀಗಾಗಿ, ಚಿತ್ರರಂಗ ಮತ್ತು ಪ್ರದರ್ಶಕರು 'ಧುರಂಧರ್ ಪ್ರತಿಕಾರ್' ಎಂಬ ಎರಡನೇ ಭಾಗದ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಭಾರಿ ಯಶಸ್ಸಿನ ಮೇಲೆ ಇಡೀ ಚಿತ್ರರಂಗವೇ ಬೆಟ್ ಕಟ್ಟಿದ್ದು, ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.

B62 ಸ್ಟುಡಿಯೋಸ್ ನಿರ್ಮಿಸಿ, ಜಿಯೋ ಸ್ಟುಡಿಯೋಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಆದಿತ್ಯ ಧರ್ ಅವರೇ ನಿರ್ದೇಶಿಸಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 2026ರ ಮಾರ್ಚ್ 19 ರಂದು ಚಿತ್ರವು ವಿಶ್ವಾದ್ಯಂತ ಥಿಯೇಟರ್‌ಗಳಿಗೆ ಬರಲಿದೆ. ಗುಡಿ ಪಾಡ್ವ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಹಾಗೂ ಈದ್‌ಗೂ ಮುನ್ನ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಆದಿತ್ಯ ಧರ್ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜ್ಯೋತಿ ದೇಶಪಾಂಡೆ, ಲೋಕೇಶ್ ಧರ್ ಮತ್ತು ಆದಿತ್ಯ ಧರ್ ಸೇರಿ ಈ ಮೆಗಾ ಮಾಸ್ ಆಕ್ಷನ್ ಸ್ಪೈ ಥ್ರಿಲ್ಲರ್ ಅನ್ನು ನಿರ್ಮಿಸಿದ್ದಾರೆ.