Asianet Suvarna News Asianet Suvarna News

ಸ್ಯಾಂಡಲ್’ವುಡ್’ಗೆ ಬರಲಿದೆ ಬೃಹತ್ ಚಿತ್ರ ನಗರಿ

ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ರಾಜಕೀಯದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದರೂ, ಅವರ ಕನಸಿನ ಸಿನಿಮಾವೊಂದು ನಿರ್ಮಾಣವಾಗದೇ ಉಳಿದಿದ್ದಕ್ಕೆ ಅವರಲ್ಲಿ ಸಾಕಷ್ಟು ಕೊರಗಿದೆಯಂತೆ! ಹೌದು, ಈ ಮಾತನ್ನು  ಅವರೇ ಹೇಳಿಕೊಂಡು, ಕುತೂಹಲ ಮೂಡಿಸಿದ್ದಾರೆ.

CM H D Kumaraswamy interested in making film

ಬೆಂಗಳೂರು (ಜು. 16): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜಕೀಯದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದರೂ, ಅವರ ಕನಸಿನ ಸಿನಿಮಾವೊಂದು ನಿರ್ಮಾಣವಾಗದೇ ಉಳಿದಿದ್ದಕ್ಕೆ ಅವರಲ್ಲಿ ಸಾಕಷ್ಟು ಕೊರಗಿದೆಯಂತೆ! ಹೌದು, ಈ ಮಾತನ್ನು ಅವರೇ ಹೇಳಿಕೊಂಡು, ಕುತೂಹಲ ಮೂಡಿಸಿದ್ದಾರೆ.

1.  ಐದು ಭಾಷೆಗಳಲ್ಲಿ ‘ಹೆಜ್ಜೆ’

‘ನನ್ನ ಸಾರ್ವಜನಿಕ ಬದುಕು ಶುರುವಾಗಿದ್ದೇ ಚಿತ್ರರಂಗದ ಮೂಲಕ. ಚೆನ್ನಾಂಬಿಕಾ ಸಂಸ್ಥೆಯೊಂದಿಗೆ ನಾನಿಲ್ಲಿಗೆ ಬಂದೆ. ಮೊದಲು ನಿರ್ಮಾಪಕನಾದೆ. 9 ಸಿನಿಮಾ ನಿರ್ಮಿಸಿದೆ. 200 ಕ್ಕೂ ಹೆಚ್ಚು ಚಿತ್ರಗಳಿಗೆ ವಿತರಕನಾದೆ. ಆದ್ರೂ ಈಗಲೂ ನನ್ನಲ್ಲಿ  ಕಾಡುತ್ತಿರುವುದು ಹೆಜ್ಜೆ ಕಾದಂಬರಿ ಆಧರಿತ ಚಿತ್ರ ಮಾಡಲು ಸಾಧ್ಯವಾಗಿಲ್ಲ ಎನ್ನುವ ಕೊರಗು. ‘ಹೆಜ್ಜೆ’ ವ್ಯಾಸರಾಯ ಬಲ್ಲಾಳ್ ಅವರ ಕಾದಂಬರಿ. ಖಂಡಿತವಾಗಿಯೂ ನಾನು ಅದನ್ನ ಮರೆತಿಲ್ಲ. ಅದನ್ನು ಸಿನಿಮಾ ಮಾಡುವ ಆಸೆ ಹಾಗೆಯೇ ಇದೆ.

ಒಂದಲ್ಲ, ಎರಡಲ್ಲ ಐದು ಭಾಷೆಯಲ್ಲಿ ಅದನ್ನು ತೆರೆಗೆ ತರಬೇಕೆನ್ನುವ ಹಂಬಲವಿದೆ. ಇಷ್ಟರಲ್ಲೇ ಅದಕ್ಕೊಂದು ಸ್ಪಷ್ಟರೂಪಕೊಟ್ಟು, ಮುಂದಿನ ದಿನಗಳಲ್ಲಿ ಅದನ್ನು ತೆರೆಗೆ ತಂದೇ ತರುತ್ತೇನೆ.

2.  ನಿಖಿಲ್ ಕಲ್ಯಾಣೋತ್ಸವ

ನಿಖಿಲ್ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’ ತೆರೆ ಕಂಡಾಗ ಅಭಿಮಾನಿಗಳು ದೂರವಾಣಿ ಕರೆ ಮಾಡಿ, ಸಿನಿಮಾದಲ್ಲಿ ಕನ್ನಡದ ನೇಟಿವಿಟಿಯ ಕೊರತೆಯಿದೆ ಎಂದರು. ಮಾಧ್ಯಮದ ಮಿತ್ರರ ಅಭಿಪ್ರಾಯವೂ ಹಾಗೆಯೇ ಇತ್ತು. ಅಲ್ಲಿ ಮಿಸ್ ಆಗಿದ್ದನ್ನು ಇಲ್ಲಿ ಕೊಡೋಣ ಅಂತ ಈ ಕತೆ ಆಯ್ಕೆ ಮಾಡಿಕೊಂಡೆವು. ಲವ್, ಸೆಂಟಿಮೆಂಟ್, ಕಾಮಿಡಿ ಜತೆಗೆ ಆ್ಯಕ್ಷನ್ ಈ ಚಿತ್ರದ ಹೈಲೈಟ್. ತುಂಬಾ ಸುಂದರವಾದ ಕತೆ ಕೇಳುತ್ತಾ ನಾನು ಅದರಲ್ಲೇ ಮುಳುಗಿ ಹೋಗಿದ್ದೆ.  ನಿಖಿಲ್ ಹೊಸ ರೀತಿಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರಚಿತಾ ಅವರಿಗೂ ಅಷ್ಟೇ ಆದ್ಯತೆ ಸಿಕ್ಕಿದೆ. ಪ್ರತಿ ಪಾತ್ರಗಳು ಇಲ್ಲಿ ಗಮನ ಸೆಳೆಯುತ್ತವೆ.

3.  ನಾನು ಹೇಳಿದ ಚಿತ್ರನಗರಿ

ರಾಮನಗರಕ್ಕೂ ಚಿತ್ರರಂಗಕ್ಕೂ ಒಂದು ನಂಟಿದೆ. ರವಿಚಂದ್ರನ್ ಅವರ ಅನೇಕ ಸಿನಿಮಾಗಳು ಅಲ್ಲಿನ ಪರಿಸರದಲ್ಲಿ ಚಿತ್ರೀಕರಣಗೊಂಡಿವೆ. ಹಿಂದಿಯ ಒಂದೆರೆಡು ಸಿನಿಮಾಗಳು ಇಲ್ಲಿ ಚಿತ್ರೀಕರಣ ಆಗಿವೆ. ಇಲ್ಲಿ ಚಿತ್ರನಗರಿ ಆದ್ರೆ ಚೆನ್ನಾಗಿರುತ್ತೆ ಎನ್ನುವ ಮಹದಾಸೆಯೊಂದಿಗೆ ನಾನು ಚಿತ್ರನಗರಿ ಪ್ರಸ್ತಾಪ ಮಾಡಿ, ಅದಕ್ಕೆ ಬಜೆಟ್‌ನಲ್ಲಿ ₹ 100 ಕೋಟಿ ಹಣ ತೆಗೆದಿರಿಸಿದ್ದೇನೆ. ಖಾಸಗಿ ಬಂಡವಾಳ ಹೂಡಿಕೆದಾರರೊಂದಿಗೆ ಇದನ್ನು ನಿರ್ಮಾಣ ಮಾಡುವ ಉದ್ದೇಶವಿದೆ.

ಇಲ್ಲಿನ ಚಿತ್ರನಗರಿ ಕಲ್ಪನೆಗೂ, ಮೈಸೂರಿನಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ಚಿತ್ರನಗರಿಗೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಚಿತ್ರನಗರಿಯಾದ್ರೆ, ಮೈಸೂರು ಚಿತ್ರನಗರಿಯ ಕತೆಯೇನು ಅಂತ ಹಲವರಲ್ಲಿ ಆತಂಕವಿದೆ. ಆದ್ರೆ ಆ ಯೋಜನೆಯನ್ನು ಕೈ ಬಿಡಿ ಅಂತ ನಾನೆಲ್ಲೂ ಹೇಳಿಲ್ಲ. ಅದು 250 ಎಕರೆ ಪ್ರದೇಶದಲ್ಲಿ ಆಗುತ್ತಿದೆ. ಇದು 2 ರಿಂದ 3 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ.ಈಗಾಗಲೇ ಚೈನಾ ಹಾಗೂ ಥೈಲ್ಯಾಂಡ್ ಸೇರಿದಂತೆ ವಿವಿಧ ಕಡೆಗಳಿಂದ ವಿದೇಶಿ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ.

ಅವರೊಂದಿಗೆ ಸೇರಿ ಬೃಹತ್ ಪ್ರಮಾಣದಲ್ಲಿ ಚಿತ್ರನಗರಿ ನಿರ್ಮಾಣ ಮಾಡಬೇಕು. ಅದೊಂದು ಹಾಲಿವುಡ್ ಶೈಲಿಯಲ್ಲಿ ಸಕಲ ರೀತಿಯಲ್ಲೂ ಸುಸ್ಸಜಿತವಾಗಿರಬೇಕು. ಹೊಸದಾಗಿ ಬರುವವರಿಗೆ ಸಿನಿಮಾದ ಎಲ್ಲಾ ಕಲಿಕೆಯ ಕೇಂದ್ರ ಆಗಬೇಕು ಅನ್ನೋದು ನನ್ನಾಸೆ. 

Follow Us:
Download App:
  • android
  • ios