ಶಿವಮೊಗ್ಗ ರಾಘು ಅವರ ನಿರ್ದೇಶನದ ‘ಚೂರಿಕಟ್ಟೆ’ ಸಿನಿಮಾ ಇಂದು ತೆರೆಗೆ ಬರುತ್ತಿದೆ.

ಬೆಂಗಳೂರು (ಜ.26): ಶಿವಮೊಗ್ಗ ರಾಘು ಅವರ ನಿರ್ದೇಶನದ ‘ಚೂರಿಕಟ್ಟೆ’ ಸಿನಿಮಾ ಇಂದು ತೆರೆಗೆ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಂಬರ್ ಮಾಫಿಯಾ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ‘ಗಂ‘ದ ಗುಡಿ ಸರಹದ್ದು’ ಎನ್ನುವ ಟ್ಯಾಗ್ ಲೈನ್ ಕೊಟ್ಟಿದ್ದಾರೆ ನಿರ್ದೇಶಕರು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಗಡಿಯಲ್ಲಿ ಚೂರಿಕಟ್ಟೆ ಎಂಬ ಹೆಸರಿನ ಊರು ಇದೆ. ಇದೊಂದು ಎಲ್ಲಾ ಊರುಗಳಂತೆ ಮಲೆನಾಡಿನ ಒಂದು ಸಾಮಾನ್ಯ ಊರು. ಜತೆಗೆ ರಂಗ ನಿರ್ದೇಶಕ ಕೆ.ವಿ. ಅಕ್ಷರ ‘ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ’ ಎಂಬ ನಾಟಕವನ್ನು ಬಹುವರ್ಷಗಳ ಹಿಂದೆಯೇ ಬರೆದಿದ್ದಾರೆ. ಆದರೆ ‘ನನ್ನ ಸಿನಿಮಾ ಚೂರಿಕಟ್ಟೆ ಇವೆರಡಕ್ಕೂ ಸಂಬಂಧಿಸಿದ್ದಲ್ಲ’ ಎನ್ನುತ್ತಾರೆ ರಾಘು ಶಿವಮೊಗ್ಗ.

‘ಬಹಳಷ್ಟು ಜನ ಯಾವುದೇ ತಯಾರಿ ಇಲ್ಲದೆ ಚಿತ್ರ ಮಾಡುವುದಿದೆ. ಆದರೆ, ಶುದ್ಧ ತಾಲೀಮು ತೆಗೆದುಕೊಂಡು, ಅನುಭವ ಪಡೆದೇ ಸಿನಿಮಾ ಮಾಡೋಕೆ ಬಂದಿದ್ದಾರೆ ರಾಘು. ಆತನನ್ನ ಮೊದಲ ಬಾರಿಗೆ ಭೇಟಿ ಆದಾಗ, ಆತ ಒಳ್ಳೆಯ ನಟನಾಗುತ್ತಾನೆ ಅಂದುಕೊಂಡಿದ್ದೆ. ಕ್ರಮೇಣ ರಾಘು ತಮ್ಮ ದಾರಿ ಬದಲಾಯಿಸಿಕೊಂಡು ನಿರ್ದೇಶಕರಾದರು. ಈಗ ಅವರ ಸಿನಿಮಾದಲ್ಲೇ ನಟಿಸುವಂತಾಯಿತು. ರಾಘು ಕನ್ನಡದ ‘ಭರವಸೆಯ ನಿರ್ದೇಶಕರಾಗುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಶರತ್ ಲೋಹಿತಾಶ್ವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಚ್ಯುತ ಕುಮಾರ್, ಮಂಜುನಾಥ ಹೆಗಡೆ, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್ ಈ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಪ್ರವೀಣ್ ತೇಜ್, ಪ್ರೇರಣಾ, ದತ್ತಣ್ಣ, ಪ್ರಮೋದ್ ಶೆಟ್ಟಿ, ವಿನೋದ್ ಶೆಟ್ಟಿ ಸಹ ಇದ್ದಾರೆ. ‘ರಾಮಾರಾಮಾರೇ’ ಸಿನಿಮಾ ಖ್ಯಾತಿಯ ವಾಸುಕಿ ವೈ‘ವ್ ಸಂಗೀತ ನೀಡಿದ್ದಾರೆ. ಎಸ್. ನಯಾಜುದ್ದೀನ್ ಹಾಗೂ ಎಂ. ತುಳಸಿ ರಾಮುಡು ಈ ಸಿನಿಮಾ ನಿರ್ಮಾಪಕರು.