ಜೋಡೆತ್ತು VS ಕಳ್ಳೆತ್ತು, ಶಬ್ದ ಸಮರದ ಅಸಲಿ ಕರಾಮತ್ತು!
ಮಂಡ್ಯದ ರಣ ಕಣದಲ್ಲಿ ಬಹಿರಂಗ ಪ್ರಚಾರದ ಭರಾಟೆಗೆ ಒಂದು ಅಂತಿಮ ಹಂತಕ್ಕೆ ಬಂದಿದೆ. ಹಾಗಾದರೆ ಮಂಡ್ಯ ರಣ ಕಣದಲ್ಲಿ ಇಲ್ಲಿಯವರೆಗೆ ನಡೆದ ಮಾತಿನ ಭರಾಟೆ ಎಂಥದ್ದು? ಎಲ್ಲಿಂದ ಆರಂಭವಾಗಿ ಎಲ್ಲಿಗೆ ಬಂದು ನಿಂತಿತು?
ಮಂಡ್ಯ[ಏ. 16] ಈ ಸಾರಿ ಮಂಡ್ಯದ ಪ್ರಚಾರದಲ್ಲಿ ಅತಿ ಹೆಚ್ಚು ಸಾರಿ ಬಳಕೆಯಾದ ಪದ ಜೋಡೆತ್ತು, ನಂತರದ ಸ್ಥಾನದಲ್ಲಿ ಕಳ್ಳೆತ್ತು. ಹಾಗಾದರೆ ಈ ಶಬ್ದ ಬಳಕೆಯ ಅಸಲಿ ಕತೆ ಏನು?
ಸುಮಲತಾ ನಾಮಪತ್ರ: ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆ ದಿನ ಯಶ್ ಮತ್ತು ದರ್ಶನ್ ಜತೆಯಾಗಿದ್ದರು. ಆ ದಿನ ಜೋಡೆತ್ತು ಎಂಬ ಪದ ಮೊದಲಿಗೆ ಬಳಕೆಗೆ ಬಂತು. ಅಂದರೆ ಯಶ್ ಮತ್ತು ದರ್ಶನ್ ನಿಜವಾದ ಜೋಡೆತ್ತುಗಳು ಎಂದು ಬಣ್ಣಿಸಲಾಯಿತು.
ಕಳ್ಳೆತ್ತಾ? ಜೋಡೆತ್ತಾ? ಉಸಾಬರಿಯೇ ಬೇಡ; ನಕ್ಕು ಹಗುರಾಗಿ!
ನಿಖಿಲ್ ನಾಮಪತ್ರ: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಜೋಡೆತ್ತು ಜತೆಗೆ ಕಳ್ಳೆತ್ತು ಪದ ಪ್ರಯೋಗ ಆಯಿತು. ಯಶ್ ಮತ್ತು ದರ್ಶನ್ ಕಳ್ಳೆತ್ತುಗಳು, ಅವು ಬೆಳೆದ ಪೈರು ತಿನ್ನಲು ಬಂದಿವೆ. ಮಂಡ್ಯದ ನಿಜವಾದ ಜೋಡೆತ್ತುಗಳು ನಾವು ಎಂದು ಸಿಎಂ ಕುಮಾರಸ್ವಾಮಿ ಡಿಕೆ ಶಿವಕುಮಾರ್ ಅವರನ್ನು ಜತೆಯಲ್ಲಿ ನಿಲ್ಲಿಸಿಕೊಂಡು ಹೇಳಿದರು.
ರಾಜಕೀಯ ವೈರಿಗಳನ್ನು ಒಂದು ಮಾಡಿದ ಶಬ್ದ: ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ರಾಜಕಾರಣದ ಬದ್ಧ ವೈರಿಗಳು ಆದರೆ ಅವರನ್ನು ಒಂದು ಮಾಡಿದ್ದೇ ಜೋಡೆತ್ತು ಶಬ್ದ. ಮೈಸೂರಿನಲ್ಲಿ ಇಬ್ಬರು ನಾಐಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ನಾವೇ ನಿಜವಾದ ಜೋಡೆತ್ತುಗಳು ಎಂದು ಹೇಳಿದರು.
‘ದರ್ಶನ್, ಯಶ್ ಜೋಡೆತ್ತುಗಳಲ್ಲ, ಬೆಳೆದ ಪೈರು ತಿನ್ನುವ ಕಳ್ಳ ಎತ್ತುಗಳು!’
ಸೋಶಿಯಲ್ ಮೀಡಿಯಾದಲ್ಲೂ ಸದ್ದು: ದರ್ಶನ್, ಯಶ್, ಎಚ್ ಡಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರವರ ಅಭಿಮಾನಿಗಳು ಜೋಡೆತ್ತು ಮತ್ತು ಕಳ್ಳೆತ್ತು ಶಬ್ದಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡರು. ಟ್ರೋಲ್ ಮತ್ತು ಕಮೆಂಟ್ ಗಳು ಜೋರಾಗಿಯೇ ಇತ್ತು.