ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಅಭ್ಯರ್ಥಿಗಳ ಆಯ್ಕೆ ಕುತೂಹಲವು ಕೂಡ ಗರಿಗೆದರಿದೆ. ಚಿತ್ರದುರ್ಗದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೆಲ ನಾಯಕರು ಸ್ಪಷ್ಟ ನಿರ್ಧಾರ ತಳೆದಿದ್ದಾರೆ.
ಬೆಂಗಳೂರು : ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲದ ನಡುವೆಯೇ ದೂರದ ರಾಯಚೂರು ಜಿಲ್ಲೆ ಲಿಂಗಸುಗೂರಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಕಂಡು ಬರುತ್ತಿದೆ.
ಆದರೆ, ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವೇಳೆ ಭಾನುವಾರದ ಕೋರ್ ಕಮಿಟಿ ಸಭೆಯಲ್ಲಿ ಪರ-ವಿರೋಧದ ಚರ್ಚೆ ನಡೆಯುವುದು ಬಹುತೇಕ ಖಚಿತವಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬೋವಿ ಸಮುದಾಯಕ್ಕೆ ಸೇರಿದ ಮಾನಪ್ಪ ವಜ್ಜಲ್ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ಇತರ ನಾಯಕರ ಬಳಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇತರ ನಾಯಕರು ಪೂರ್ಣ ಸಹಮತ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ.
ಜಾರಕಿಹೊಳಿ ಸಹೋದರರ ಸವಾಲ್ : ಬಂಡಾಯ ಭೀತಿ
ವಾಸ್ತವವಾಗಿ ಚಿತ್ರದುರ್ಗ ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರದಿಂದ ಮಾನಪ್ಪ ವಜ್ಜಲ್ ಅವರಿಗಿಂತ ಮಾಜಿ ಸಚಿವ ಎ.ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೇನಾರಾಯಣ ಅವರ ಹೆಸರೂಗಳು ಗಂಭೀರವಾಗಿ ಕೇಳಿಬಂದಿವೆ. ಅದರಲ್ಲೂ ಪರಿಶಿಷ್ಟಜಾತಿ ಎಡಗೈ ಗುಂಪಿಗೆ ಸೇರಿದ ನಾರಾಯಣಸ್ವಾಮಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದರಿಂದ ಪರಿಚಿತರಾಗಿದ್ದಾರೆ. ಮೇಲಾಗಿ ಚಿತ್ರದುರ್ಗದಿಂದ ಎಡಗೈ ಗುಂಪಿಗೆ ಸೇರಿದವರನ್ನೇ ಕಣಕ್ಕಿ ಳಿಸುವುದರಿಂದ ಸುತ್ತಲಿನ ಲೋಕಸಭಾ ಕ್ಷೇತ್ರಗಳಾದ ಬಳ್ಳಾರಿ, ದಾವಣಗೆರೆ ಮತ್ತು ತುಮಕೂರಿನಲ್ಲೂ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ವಾದವನ್ನು ಪಕ್ಷದ ಇತರ ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
'ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟ'
ಆರಂಭದಲ್ಲಿ ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಲು ಸೂಚಿಸಿದ್ದೇ ಯಡಿಯೂರಪ್ಪ ಅವರು. ಆ ಸೂಚನೆ ಮೇರೆಗೆ ನಾರಾಯಣಸ್ವಾಮಿ ಅವರು ಚಿತ್ರದುರ್ಗಕ್ಕೆ ತೆರಳಿ ಮನೆಯನ್ನೂ ಮಾಡಿ ಕೆಲಸ ಆರಂಭಿಸಿದ್ದರು. ನಂತರ ದಿಢೀರನೆ ಮಾನಪ್ಪ ವಜ್ಜಲ್ ಹೆಸರು ಪ್ರಸ್ತಾಪವಾಯಿತು. ಬೋವಿ ಸಮುದಾಯದ ಮಾನಪ್ಪ ವಜ್ಜಲ್ ಅವರನ್ನು ಕಣಕ್ಕಿಳಿಸೋಣ ಎಂಬ ಯಡಿಯೂರಪ್ಪ ಅವರ ಅಭಿಪ್ರಾಯದ ಬಗ್ಗೆ ಭಾನುವಾರ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಇತರ ನಾಯಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕುತೂಹಲಕರವಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 15, 2019, 1:00 PM IST