'ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟ'
ತುಮಕೂರು, ಮಂಡ್ಯ, ಬೆಂಗಳೂರು ಉತ್ತರ ಹಾಗೂ ಉಡುಪಿ-ಚಿಕ್ಕಮಗಳೂರು ಬಿಟ್ಟಿದ್ದಕ್ಕೆ ಬೇಸರ| ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟ: ನಾಯಕರ ವಾದ
ಬೆಂಗಳೂರು[ಮಾ.15]: ಜೆಡಿಎಸ್ ಜತೆ ಮೈತ್ರಿಯಿಂದ ಕಾಂಗ್ರೆಸ್ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂಬ ಭಾವ ಕಾಂಗ್ರೆಸ್ ವಲಯದಲ್ಲಿ ಪ್ರಬಲವಾಗತೊಡಗಿದೆ. ಏಕೆಂದರೆ, ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದ್ದ ತುಮಕೂರು, ಮಂಡ್ಯ, ಬೆಂಗಳೂರು ಉತ್ತರ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಬಗ್ಗೆ ಪಕ್ಷದಲ್ಲಿ ಸಾಕಷ್ಟುಅಸಮಾಧಾನ ಹುಟ್ಟಿಕೊಂಡಿದೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಸಾಂಪ್ರಾದಾಯಿಕ ಎದುರಾಳಿಗಳು. ಇಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಆದರೆ, ಮೈತ್ರಿಯಿಂದಾಗಿ ಬಿಜೆಪಿಗೆ ಈ ಭಾಗದಲ್ಲಿ ತಳವೂರಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಅಲ್ಲದೆ, ಮಂಡ್ಯ, ತುಮಕೂರು ಮತ್ತು ಬೆಂಗಳೂರು ಉತ್ತರದಂತಹ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಯಾವ ಕಾರಣಕ್ಕೂ ಜೆಡಿಎಸ್ಗೆ ಬೆಂಬಲ ನೀಡುವ ಸ್ಥಿತಿಯಲ್ಲಿ ಇಲ್ಲ. ಪಕ್ಷದ ನಾಯಕತ್ವದ ಮಾತಿಗೆ ಬೆಲೆ ಕೊಟ್ಟು ಬೆಂಬಲ ನೀಡಿದರೆ ರಾಜಕೀಯವಾಗಿ ಈ ನಾಯಕರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ.
ಇಂತಹ ನಾಯಕರು ಈಗ ಬಿಜೆಪಿ ಕಡೆ ವಾಲಿದರೆ ಅಂತಿಮವಾಗಿ ಇದು ಕಾಂಗ್ರೆಸ್ಗೆ ಭಾರಿ ನಷ್ಟಉಂಟಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುವುದಕ್ಕಿಂತ ಜೆಡಿಎಸ್ ಜತೆ ಫ್ರೈಂಡ್ಲಿ ಫೈಟ್ ಮಾಡಿದ್ದರೆ ಉತ್ತಮವಿತ್ತು. ಇದರಿಂದ ಎರಡು ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಿತ್ತು ಮತ್ತು ಬಿಜೆಪಿಗೆ ಅನಗತ್ಯ ಲಾಭ ತಂದುಕೊಡುವುದನ್ನು ತಪ್ಪಿಸಬಹುದಿತ್ತು ಎಂಬ ಭಾವನೆ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.