ರ್ಯಾಲಿಗೂ ಮುನ್ನ ರಾಹುಲ್ ಕೊಟ್ರು ಖಡಕ್ ಎಚ್ಚರಿಕೆ!
ಭಿನ್ನಮತೀಯರಿಗೆ ರಾಹುಲ್ ಖಡಕ್ ಎಚ್ಚರಿಕೆ| ಎಲ್ಲ ಕಾಂಗ್ರೆಸ್ಸಿಗರೂ ಮೈತ್ರಿ ಅಭ್ಯರ್ಥಿ ಬೆಂಬಲಿಸಲೇಬೇಕು| ಬೆಂಬಲಿಸದಿದ್ದರೆ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕ್ರಮ| ವೇಣುಗೋಪಾಲ್ ಮೂಲಕ ಕಾಂಗ್ರೆಸ್ ಅಧ್ಯಕ್ಷ ಸಂದೇಶ
ಬೆಂಗಳೂರು[ಮಾ.31]: ‘ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಪಕ್ಷದ ಸೂಚನೆ ವಿರುದ್ಧವಾಗಿ ನಡೆದರೆ ಎಷ್ಟೇ ಉನ್ನತ ಸ್ಥಾನದಲ್ಲಿರುವವರಾದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಭಿನ್ನಮತೀಯ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
‘ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿರುವ ಸಣ್ಣ ಪುಟ್ಟವ್ಯತ್ಯಾಸ ಮರೆತು ಜೆಡಿಎಸ್ನೊಂದಿಗೆ ಕೈ ಜೋಡಿಸಿದೆ. ಲೋಕಸಭೆ ಚುನಾವಣೆಗೂ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಮುನ್ನುಗ್ಗುತ್ತಿದ್ದೇವೆ. ಪಕ್ಷ ಹಾಗೂ ದೇಶಕ್ಕೆ ಮಹತ್ವದ್ದಾಗಿರುವ ಚುನಾವಣೆ ವೇಳೆ ಯಾರೂ ಪಕ್ಷದ ಸೂಚನೆ ಮೀರಿ ನಡೆಯಬಾರದು’ ಎಂದು ರಾಜ್ಯ ಕಾಂಗ್ರೆಸ್ ಭಿನ್ನಮತೀಯರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಲ್ಲಿ ಇಂದು ಕೈ-ದಳ ಬೃಹತ್ ರ್ಯಾಲಿ: ದೋಸ್ತಿಗಳ ‘ಮಿಷನ್ ಶಕ್ತಿ’!
ಈ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮೂಲಕ ಭಿನ್ನಮತೀಯರಿಗೆ ಸಂದೇಶ ಕಳುಹಿಸಿರುವ ಅವರು, ‘ಕರ್ನಾಟಕ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ನೊಂದಿಗೆ ಸರ್ಕಾರ ರಚನೆ ಮಾಡಿ ಜನಸಾಮಾನ್ಯರ ಪರ ಉತ್ತಮವಾಗಿ ಆಡಳಿತ ನಡೆಯುತ್ತಿರುವುದು ಸಂತೋಷದ ವಿಷಯ. 2019ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮೈತ್ರಿಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.’
‘ಈ ಹಿನ್ನೆಲೆಯಲ್ಲಿ ಕಾರ್ಯಕರ್ತರಿಂದ ಹಿಡಿದು ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಬ್ಲಾಕ್ ಮತ್ತು ಜಿಲ್ಲಾ ಘಟಕಗಳು ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕು. ಜೆಡಿಎಸ್ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಬೇಕು. ಪಕ್ಷದ ಸೂಚನೆ ವಿರುದ್ಧವಾಗಿ ನಡೆದುಕೊಂಡು ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದರೆ ಪಕ್ಷ ಸಹಿಸುವುದಿಲ್ಲ. ಅಂತಹವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...