ಬೆಂಗಳೂರಲ್ಲಿ ಇಂದು ಕೈ-ದಳ ಬೃಹತ್ ರ್ಯಾಲಿ: ದೋಸ್ತಿಗಳ ‘ಮಿಷನ್ ಶಕ್ತಿ’!
ದೋಸ್ತಿಗಳ ‘ಮಿಷನ್ ಶಕ್ತಿ’!| ಬೆಂಗಳೂರಲ್ಲಿ ಇಂದು ಕೈ-ದಳ ಬೃಹತ್ ಯಾತ್ರೆ| ರಾಹುಲ್ ಗಾಂಧಿ, ದೇವೇಗೌಡ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನ| ಬಿಜೆಪಿ ವಿರುದ್ಧ ‘ಗಠಬಂಧನ್ ಶಕ್ತಿ’ ಸಂದೇಶ ನೀಡುವ ಲೆಕ್ಕಾಚಾರ| 3600 ಚದರಡಿ: ಬಿಐಇಸಿಯಲ್ಲಿ ಸಿದ್ಧಪಡಿಸಲಾಗಿರುವ ಬೃಹತ್ ವೇದಿಕೆಯ ಗಾತ್ರ| 4 ಕ್ಷೇತ್ರ: ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ, ಗ್ರಾಮಾಂತರದ ಕಾರ್ಯಕರ್ತರು ಭಾಗಿ| 500 ಆಸನ: ಕಾಂಗ್ರೆಸ್, ಜೆಡಿಎಸ್ನ ಪ್ರಮುಖ ನಾಯಕರಿಗಾಗಿ ವಿಶೇಷ ಆಸನ ವ್ಯವಸ್ಥೆ| 5 ಲಕ್ಷ: ಸಮಾವೇಶಕ್ಕೆ 5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್, ಜೆಡಿಎಸ್| 2 ಲಕ್ಷ: ಬೃಹತ್ ಸಮಾವೇಶಕ್ಕೆ ಆಗಮಿಸುವವರಿಗಾಗಿ ಮಾಡಲಾಗಿರುವ ಆಸನ ವ್ಯವಸ್ಥೆ| 2000 ಸಿಬ್ಬಂದಿ: ಮೆಗಾ ರಾರಯಲಿಯ ಭದ್ರತೆಗಾಗಿ ನಿಯೋಜಿಸಲಾಗಿರುವ ಪೊಲೀಸರು
ಬೆಂಗಳೂರು[ಮಾ.31]: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಟ್ಟಾಗಿ ದೋಸ್ತಿ ಶಕ್ತಿ ಪ್ರದರ್ಶನದ ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಬೆಂಗಳೂರು ಹೊರವಲಯದ ಬಿಐಇಸಿ ಮೈದಾನದಲ್ಲಿ ಭಾನುವಾರ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಒಂದೇ ವೇದಿಕೆಯಲ್ಲಿ ದೋಸ್ತಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಬಿಜೆಪಿ ವಿರುದ್ಧ ಭರ್ಜರಿ ಪ್ರಚಾರಾಂದೋಲನ ಆರಂಭಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಘೋಷಿಸಿರುವ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಮಾವೇಶವು ರಾಷ್ಟ್ರಮಟ್ಟದಲ್ಲಿ ಕುತೂಹಲ ಕೆರಳಿಸಿದ್ದು, 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಹಾಸನದಲ್ಲಿ ಮುಖ್ಯ ಚುನಾವಣಾಧಿಕಾರಿ, ಪಡೆದುಕೊಂಡ ಮಾಹಿತಿ ಏನೇನು?
ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಸೀಟು ಹೊಂದಾಣಿಕೆ ಗೊಂದಲ ಸಂಪೂರ್ಣ ತಿಳಿಯಾಗಿದೆ. ತುಮಕೂರು, ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಜೆಡಿಎಸ್-ಕಾಂಗ್ರೆಸ್ ನಾಯಕರು ಪರಸ್ಪರ ರಾಜಿಯಾಗುವ ಮೂಲಕ ‘ದೋಸ್ತಿ ಗೆಲುವೇ’ ಗುರಿ ಎಂದು ಮುಂದಡಿಯಿಟ್ಟಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಜಂಟಿ ಪ್ರಚಾರ ಸಭೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಈ ಹಂತದಲ್ಲಿ ಜಂಟಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲು ಬೆಂಗಳೂರು ನೆಲಮಂಗಲ ರಸ್ತೆಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ (ಬಿಐಇಸಿ) ಸಿದ್ಧವಾಗಿರುವ ಬೃಹತ್ ವೇದಿಕೆಯಲ್ಲಿ ರಾಹುಲ್ಗಾಂಧಿ- ದೇವೇಗೌಡ ಕೈ ಜೋಡಿಸಿ ‘ಗಠಬಂಧನ್’ ಶಕ್ತಿ ಪ್ರದರ್ಶಿಸಲಿದ್ದಾರೆ.
ಬೃಹತ್ ಸಮಾವೇಶಕ್ಕೆ ಈಗಾಗಲೇ ಸಕಲ ಸಿದ್ಧತೆಯೂ ಪೂರ್ಣಗೊಂಡಿದ್ದು, ಮಾ. 31 ರಂದು ಸಂಜೆ 4.30 ಗಂಟೆಗೆ ಸಮಾವೇಶ ಶುರುವಾಗಲಿದೆ. 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲು ವ್ಯವಸ್ಥೆ ಮಾಡಿದ್ದು, 2 ಲಕ್ಷ ಖುರ್ಚಿ ವ್ಯವಸ್ಥೆ ಮಾಡಲಾಗಿದೆ. 60/60 ಸುತ್ತಳತೆಯ 3,600 ಚದರಡಿ ವಿಸ್ತೀರ್ಣದ ಬೃಹತ್ ವೇದಿಕೆ, ಜೆಡಿಎಸ್-ಕಾಂಗ್ರೆಸ್ನ ತಲಾ 500 ಮಂದಿ ನಾಯಕರಿಗೆ ವಿಐಪಿ ಆಸನ ವ್ಯವಸ್ಥೆ, ಸಾವಿರಾರು ಪೊಲೀಸರ ಸರ್ಪಗಾವಲು, ಎಲ್ಇಡಿ ಪರದೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
3ನೇ ಬಾರಿಗೆ ರಾಜ್ಯಕ್ಕೆ ರಾಹುಲ್:
ಲೋಕಸಭೆ ಚುನಾವಣೆ ಹಿನ್ನೆಲೆ ಹಾವೇರಿ ಹಾಗೂ ಕಲಬುರ್ಗಿಯ ಪರಿವರ್ತನಾ ರಾರಯಲಿ ಬಳಿಕ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಮೂರನೇ ಬಾರಿಗೆ ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಮಾ.31 ರಂದು ಬೆಳಗ್ಗೆ ಆಂಧ್ರಪ್ರದೇಶದ ರಾರಯಲಿಗಳಲ್ಲಿ ಭಾಗವಹಿಸಲಿರುವ ಅವರು ಸಂಜೆ 4.30 ಗಂಟೆಗೆ ಬಿಐಇಸಿ ಮೈದಾನಕ್ಕೆ ಬರಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ನಲ್ಲಿನ ರಾಹುಲ್ಗಾಂಧಿ ಸಂವಾದದ ವೇಳೆ ಉಂಟಾಗಿದ್ದ ಗೊಂದಲಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ.
ದೇಶಕ್ಕೆ ಸಂದೇಶ ರವಾನೆ: ದಿನೇಶ್
ಜಂಟಿ ಪ್ರಚಾರ ಹಾಗೂ ಪರಿವರ್ತನಾ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಸಮಾವೇಶ ಯಶಸ್ಸಿನ ಮೂಲಕ ಇಡೀ ದೇಶಕ್ಕೆ ಸಂದೇಶ ರವಾನೆ ಮಾಡುತ್ತೇವೆ. ದಕ್ಷಿಣ ಭಾರತದಿಂದ ಬಿಜೆಪಿಯನ್ನು ಹೊರ ಹಾಕಲು ಇದು ವೇದಿಕೆಯಾಗಲಿದೆ. ಸಮಾವೇಶದಲ್ಲಿ ಮಹಾಘಟಬಂಧನ್ ಸಂಬಂಧಿಸಿದ ಬೇರೆ ಯಾವುದೇ ಪಕ್ಷಗಳು ಭಾಗವಹಿಸುವುದಿಲ್ಲ. ಇದು ಕೇವಲ ಜೆಡಿಎಸ್-ಕಾಂಗ್ರೆಸ್ ಶಕ್ತಿ ಪ್ರದರ್ಶನ.
- ದಿನೇಶ್ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
4 ಕ್ಷೇತ್ರದಿಂದಲೂ ಕಾರ್ಯಕರ್ತರು:
ಬೆಂಗಳೂರು ವ್ಯಾಪ್ತಿಯ ನಾಲ್ಕೂ ಲೋಕಸಭೆ ಕ್ಷೇತ್ರಗಳಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಆಗಮಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ಶಾಸಕರು, ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾಗಿದ್ದವರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಬೇಕು ಎಂಬ ಗುರಿ ನೀಡಲಾಗಿದೆ. ಸಮಾವೇಶದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದ ಬಗ್ಗೆ ಪಕ್ಷದ ಹೈಕಮಾಂಡ್ಗೆ ಭಾರೀ ನಿರೀಕ್ಷೆಗಳಿರುವುದರಿಂದ ಜನರನ್ನು ಸೇರಿಸುವುದನ್ನು ಸವಾಲಾಗಿ ಸ್ವೀಕರಿಸಿ, 5 ಲಕ್ಷ ಜನರನ್ನು ಸೇರಿಸಲು ಟಾರ್ಗೆಟ್ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಸಮಾವೇಶದಲ್ಲಿ ಜೆಡಿಎಸ್ ಪರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಕಾಂಗ್ರೆಸ್ನಿಂದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿಗಳಾದ ರಿಜ್ವಾನ್ ಅರ್ಷದ್, ಕೃಷ್ಣ ಬೈರೇಗೌಡ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಮುಖಂಡರು ಭಾಗವಹಿಲಿಸಲಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...