Asianet Suvarna News Asianet Suvarna News

ಕೊನೆಗೂ ಆರಂಭವಾದ ಸರ್ಕಾರಿ ಎಂಜನಿಯರಿಂಗ್‌ ಕಾಲೇಜು!

  • ಕೊನೆಗೂ ಆರಂಭವಾದ ಸರ್ಕಾರಿ ಎಂಜನಿಯರಿಂಗ್‌ ಕಾಲೇಜು
  • ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾದ ಕಾಲೇಜು
  •  ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಆ್ಯಂಡ್‌ ಡಾಟಾ ಸೈನ್ಸ್‌ ಕೋರ್ಸ್‌ ಆರಂಭ
The government engineering college has finally started naragunda rav
Author
First Published Dec 11, 2022, 2:31 PM IST

ಎಸ್‌.ಜಿ. ತೆಗ್ಗಿನಮನಿ

ನರಗುಂದ (ಡಿ.11) : ಪಟ್ಟಣದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಹೊಸ ಮೈಲುಗಲ್ಲಿಗೆ ಮುನ್ನುಡಿ ಇಡುವಂತೆ ಪಟ್ಟಣದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆರಂಭವಾಗಿದೆ. ಇದರಲ್ಲಿ ಬೀದರ್‌ ಹೊರತುಪಡಿಸಿದ ರಾಜ್ಯದ ಯಾವುದೇ ಕಾಲೇಜಿನಲ್ಲಿ ಇರದ ಹೊಸ ಕೋರ್ಸ್‌ ಆರಂಭಿಸಲಾಗುತ್ತಿರುವುದು ಈ ಭಾಗದ ಶಿಕ್ಷಣ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.

2017ರಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಆರ್‌. ಯಾವಗಲ್‌ ಅವರ ಪ್ರಯತ್ನದ ಫಲವಾಗಿ ಕಟ್ಟಡ ಆರಂಭಗೊಂಡಿತು. 2022ರ ಏಪ್ರಿಲ್‌ನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರಿಂದ ಉದ್ಘಾಟನೆಗೊಳ್ಳುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ.

ರಾಜ್ಯದಲ್ಲಿರುವುದು ಎರಡೇ ಕಾಲೇಜು:

ಈ ಸಾಲಿನಲ್ಲಿ ರಾಜ್ಯದಲ್ಲೇ ಎರಡು ಹೊಸ ಸರ್ಕಾರಿ ಕಾಲೇಜುಗಳು ಆರಂಭವಾಗಿವೆ. ಅದರಲ್ಲಿ ಬೀದರ್‌ ಹಾಗೂ ನರಗುಂದದಲ್ಲಿ ಮಾತ್ರ. ರಾಜ್ಯದಲ್ಲಿ ಯಾವ ಸರ್ಕಾರಿ ಕಾಲೇಜುಗಳಲ್ಲಿ ಇರದ ಹೊಸ ಕೋರ್ಸ್‌ ‘ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಆ್ಯಂಡ್‌ ಡಾಟಾ ಸೈನ್ಸ್‌’ ಕೋರ್ಸ್‌ ಆರಂಭವಾಗಿದ್ದು, ಇದು ಭವಿಷ್ಯದ ಮೊಬೈಲ್‌ ತಂತ್ರಜ್ಞಾನ ರೂಪಿಸುವ ಕೋರ್ಸ್‌ ಇದಾಗಿದೆ. ಇದು ನರಗುಂದ ಕಾಲೇಜಿಗೆ ಬಂದಿರುವುದರಿಂದ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಜತೆಗೆ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ ಆರಂಭಗೊಂಡಿದ್ದು, ಹೊಸ ಶಿಕ್ಷಣ ನೀತಿಗೆ ಪೂರಕವಾಗಿ ತರಬೇತಿ ಆರಂಭವಾಗಿದೆ.

88 ವಿದ್ಯಾರ್ಥಿಗಳ ಪ್ರವೇಶ:

ತಲಾ ಕೋರ್ಸ್‌ಗೆ 60 ವಿದ್ಯಾರ್ಥಿಗಳು ಸೇರಿದಂತೆ ಮೊದಲ ಸೆಮಿಸ್ಟರ್‌ಗೆ 120 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಇದರಲ್ಲಿ ಈಗಾಗಲೇ 88 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಈ ತಿಂಗಳ ಕೊನೆಯ ವರೆಗೂ ಸಿಇಟಿ ಕೌನ್ಸೆಲಿಂಗ್‌ ಮೂಲಕ ವಿದ್ಯಾರ್ಥಿಗಳು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಡವಟ್ಟು, 9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯ

ಕೊಡಗು, ಬೆಂಗಳೂರು, ಶಿವಮೊಗ್ಗ, ಬೀದರ, ಹಾವೇರಿ, ಬೆಳಗಾವಿ, ರಾಯಚೂರು ಸೇರಿದಂತೆ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳು ಸಿಇಟಿ ಮೂಲಕ ನರಗುಂದದಲ್ಲಿರುವ ನೂತನ ಎಂಜಿನಿಯರಿಂಗ್‌ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. ಆದರೆ, ಅವರಿಗೆ ವ್ಯಾಸಂಗಕ್ಕಾಗಿ ಹಾಸ್ಟೆಲ್‌ನ ಸೌಲಭ್ಯ ಅತ್ಯವಶ್ಯಕವಾಗಿದೆ. ಸುಸಜ್ಜಿತ ಎರಡು ಹಾಸ್ಟೆಲ್‌ ಕಟ್ಟಡಗಳಿದ್ದರೂ ಆರಂಭದಲ್ಲಿ ಅವುಗಳಿಗೆ ಎಲ್ಲ ವ್ಯವಸ್ಥೆ ಮಾಡಲು ಆಗದ ಪರಿಣಾಮ ಹಾಸ್ಟೆಲ್‌ ಆರಂಭವಾಗದಿರುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾಸ್ಟೆಲ್‌ ಬೇಗ ಒದಗಿಸಲು ವಿದ್ಯಾರ್ಥಿಗಳು ಆಗ್ರಹಿಸುತ್ತಾರೆ.

ಭದ್ರತೆಯ ಕೊರತೆ:

ಪಟ್ಟಣದ ಹೊರವಲಯದ ರೋಣ ರಸ್ತೆಯಲ್ಲಿ 2 ಕಿ.ಮೀ. ದೂರದಲ್ಲಿ 24 ಎಕರೆ ಜಾಗದಲ್ಲಿ 6 ಎಕರೆ ಬೃಹತ್‌ ಕಟ್ಟಡ ಹೊಂದಿರುವ ಕಾಲೇಜು ವಿಶಾಲವಾಗಿದೆ. ಇದಕ್ಕೆ ಭದ್ರತೆ ಇಲ್ಲವಾಗಿದೆ. ಇದಕ್ಕಾಗಿ ಪೊಲೀಸ್‌ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ಇಂದಿಗೂ ಭದ್ರತೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವ ಕಾರ್ಯವಾಗಿಲ್ಲ.

ಅತಿಥಿ ಉಪನ್ಯಾಸಕರೇ ಬೋಧಕರು:

ಕಾಲೇಜು ಹೊಸದಾಗಿ ಆರಂಭವಾಗಿರುವುದರಿಂದ ಇಂತಿಷ್ಟೇ ಸರ್ಕಾರಿ ಹುದ್ದೆಗಳು ಇಲ್ಲಿರಬೇಕು ಎಂಬುದು ಇನ್ನೂ ಮಂಜೂರಿಯಾಗಿಲ್ಲ. ಹಾಗಾಗಿ ಪ್ರಾಚಾರ್ಯರೊಬ್ಬರನ್ನು ಹೊರತುಪಡಿಸಿದರೆ ಉಳಿದ 7 ಅತಿಥಿ ಉಪನ್ಯಾಸಕರೇ ಬೋಧಕರು. ಹೊರಗುತ್ತಿಗೆ ಆಧಾರದಲ್ಲಿ ನಾಲ್ವರು ಡಿ ಗ್ರೂಪ್‌ ನೌಕರರಿದ್ದಾರೆ. ಎಲ್ಲವೂ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರ ಮೂಲಕವೇ ನೇಮಕಗೊಳ್ಳಬೇಕಿದೆ.

ಬಿಲ್ ಬಾಕಿ ಪಾವತಿಸದ ರಾಜ್ಯದ 16 ಸರ್ಕಾರಿ ಕಾಲೇಜುಗಳ ವಿದ್ಯುತ್ ಕಟ್!

ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿರುವ ನರಗುಂದದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಅದರ ಫಲವಾಗಿ ಹಾಗೂ ಸಚಿವ ಸಿ.ಸಿ. ಪಾಟೀಲ ಅವರ ಸಹಕಾರದಿಂದ ಈಗ ಕಾಲೇಜು ಆರಂಭವಾಗಿದೆ. ನಿತ್ಯ ತರಗತಿಗಳು ನಡೆಯುತ್ತಿವೆ. ಇದನ್ನು ಸ್ಥಳೀಯ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು.

ಸಿದ್ದನಗೌಡ ಪಾಟೀಲ ಪ್ರಭಾರಿ ಪ್ರಾಚಾರ್ಯ

Follow Us:
Download App:
  • android
  • ios