• ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆ ಕಂಡು ಮೌಲ್ಯಮಾಪಕರೇ ಶಾಕ್..!‌• ಉತ್ತರ ಪತ್ರಿಕೆಯಲ್ಲಿ ವಿಚಿತ್ರ ಬೇಡಿಕೆ ಇಟ್ಟ ಪರೀಕ್ಷಾರ್ಥಿ..!• ಮೌಲ್ಯಮಾಪಕರಿಗೆ ಉತ್ತರ ಪತ್ರಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ..!

ವರದಿ- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್..

ವಿಜಯಪುರ (ಏ.29)
: SSCL ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದೆ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ಪರೀಕ್ಷಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದದ್ದನ್ನ ಕಂಡು ಮೌಲ್ಯಮಾಪಕರೇ ಶಾಕ್‌ ಆಗಿದ್ದಾರೆ. ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿರೋ ಪರೀಕ್ಷಾರ್ಥಿ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ಪರೀಕ್ಷಾರ್ಥಿಯ ಡಿಪ್ರೆಂಟ್‌ ಉತ್ತರ ಪತ್ರಿಕೆ ಕಂಡು ಮೌಲ್ಯಮಾಪಕರು ನೆಗೆಗಡಲಲ್ಲಿ ತೇಲಿದ್ದಾರೆ..

ಅಚ್ಚರಿ ಮೂಡಿಸಿದ SSLC ಉತ್ತರ ಪತ್ರಿಕೆ..!
ವಿಜಯಪುರ ನಗರದ ಮೌಲ್ಯ ಮಾಪನ ಕೇಂದ್ರದಲ್ಲಿ ಪರೀಕ್ಷಾರ್ಥಿಯೊಬ್ಬನ ಉತ್ತರ ಪತ್ರಿಕೆ ನಿಜಕ್ಕು ಮೌಲ್ಯಮಾಪಕರಿಗೆ ಒಂದು ಕ್ಷಣ ಶಾಕ್‌ ಮೂಡಿಸಿದೆ. ಉತ್ತರ ಪತ್ರಿಕೆಯಲ್ಲಿ ಆ ಪರೀಕ್ಷಾರ್ಥಿ ಬರೆದದ್ದನ್ನ ಕಂಡ ಮೌಲ್ಯಮಾಪಕರಿಗೆ ನಗಬೇಕೋ, ಮರುಕ ಪಡಬೇಕೋ ಅನ್ನೋದೆ ಅರ್ಥವಾಗಿಲ್ಲ. ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗೆ ಉತ್ತರ ಬರೆಯೋ ಬದಲು ವಿಚಿತ್ರ ಅಹವಾಲನ್ನ ಪರೀಕ್ಷಾರ್ಥಿ ಮೌಲ್ಯಮಾಪಕರಿಗೆ ಇಟ್ಟಿದ್ದಾನೆ.. ತನ್ನ ಅನಿವಾರ್ಯತೆ, ತನಗೇನಾಗಬೇಕಿದೆ ಅನ್ನೋದನ್ನ ಕೊಂಚ ಡಿಟೇಲ್‌ ಆಗಿಯೇ ಉತ್ತರ ಪತ್ರಿಕೆಯ ಮೇಲ್ಬಾಗದಲ್ಲಿ ನೀಟಾಗಿ ಬರೆದಿದ್ದಾನೆ.

ಹಿಜಾಬ್‌ ವಿವಾದದ ಮಧ್ಯೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತ್ಯ, ಮೇಗೆ ಫಲಿತಾಂಶ

ಮೌಲ್ಯಮಾಪಕರಿಗೆ ಸಾಷ್ಟಾಂಗ ನಮಸ್ಕಾರ.!
ತನ್ನನ್ನ ಈ ಪರೀಕ್ಷೆಯಲ್ಲಿ ಪಾಸ್‌ ಮಾಡುವಂತೆ ಅಹವಾಲು ಇಟ್ಟಿರೋ ಪರೀಕ್ಷಾರ್ಥಿ ಬರವಣಿಗೆ ಆರಂಭದಲ್ಲೆ "ಉತ್ತರ ಪತ್ರಿಕೆಯಲ್ಲೆ ಸಾಷ್ಟಾಂಗ ಸಮಸ್ಕಾರ ಹಾಕಿದ್ದಾನೆ" ಬಳಿಕ ದಯವಿಟ್ಟು ತನ್ನನ್ನ ಪಾಸ್‌ ಮಾಡಬೇಕು ಅಂತಾ ಗೋಗರೆದಿದ್ದಾನೆ. ಮೌಲ್ಯಮಾಪಕರ ಕರಳು ಚುರುಕ್‌ ಅನ್ನೋ ಹಾಗೇ ಪರಿಪರಿಯಾಗಿ ಪಾಸ್‌ ಮಾಡುವಂತೆ ಬೇಡಿಕೊಂಡಿದ್ದಾನೆ.

ಪರೀಕ್ಷಾರ್ಥಿ ಬರೆದಿದ್ದೇನು..?!
"ಮೌಲ್ಯಮಾಪನ ಮಾಡ್ತಿರೋ ನನ್ನ ಉಪಾಧ್ಯಾಯರೇ.. ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.. ಏನೆಂದರೇ ನಾನು ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 10 ವರ್ಷದಿಂದ ನೀರುಗಂಟೆಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ ಮುಂಬಡ್ತಿ ಇರೋದ್ರಿಂದ ಈ ಒಂದು ಪೇಪರ್ (ಮಾರ್ಕ್ಸ್) ಮೇಲೆ ನಿಂತಿದೆ. ಇದೊಂದನ್ನು ನನಗೆ ನಿಮ್ಮ ಒಳೆಯ ಮನಸ್ಸಿನಿಂದ ಪಾಸ್ ಮಾಡಿಕೊಡಿ. ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ. ನಾನೀಗ ಬಿಲ್ ಕಲೆಕ್ಟರ್ ಆಗುವ ಸಾಧ್ಯತೆ ಇದೆ. ನಿಮ್ಮಿಂದ ನನಗೆ ಅನ್ನ ಸಿಕ್ಕದಂತಾಗುತ್ತದೆ. ಉತ್ತೀರ್ಣ ಮಾಡಿಕೊಡಿ ಇದೊಂದೆ ಪಾಸ್ ಆಗಬೇಕಾಗಿರುವುದು ನನಗೆ"..
- ಇಂತಿ ನಿಮ್ಮ ವಿದ್ಯಾರ್ಥಿ Ravish

ಸ್ನೇಹ ಸಂಗಮ ಕೇಂದ್ರದಲ್ಲಿ ಬೆಳಕಿಗೆ ಬಂದ ಘಟನೆ.!
ವಿಜಯಪುರ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದ್ದ ಮೌಲ್ಯಮಾಪನ ವೇಳೆ ಈ ಉತ್ತರ ಪತ್ರಿಕೆ ಮೌಲ್ಯಮಾಪಕರ ಕೈಗೆ ಸಿಕ್ಕಿದೆ ಎನ್ನಲಾಗ್ತಿದೆ.. ಪರೀಕ್ಷಾರ್ಥಿಯ ಉತ್ತರ ಪತ್ರಿಕೆಯನ್ನ ನೋಡಿದಾಗ ಆರಂಭದಲ್ಲಿ ಮೌಲ್ಯಮಾಪಕರು ಶಾಕ್‌ ಆದರು ಬಳಿಕ ನಗೆಗಡಲಲ್ಲಿ ತೇಲಿದ್ದಾರೆ. ಇನ್ನೊಂದು ಕಡೆಗೆ ಹೀಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲು ಮಾರ್ಕ್ಸ್‌ ಗಾಗಿ ಬಕೇಟ್‌ ಹಿಡಿಯೋ ಕ್ಯಾಡಿಂಡೆಟ್‌ ಇನ್ನೂ ಇದ್ದಾರಾ ಅನ್ನೋ ಅಚ್ಚರಿಯು ಸಹ ಮೂಡಿದೆ..

ಗ್ರಾ.ಪಂಯಲ್ಲಿ ನೀರುಗಂಟಿಯಾಗಿರೋ ಪರೀಕ್ಷಾರ್ಥಿ..!
ಉತ್ತರ ಪತ್ರಿಕೆಯಲ್ಲಿ ಮಾರ್ಕ್ಸ್‌ ಗಾಗಿ ಅಹವಾಲು ಇಟ್ಟಿರುವವ ರೆಗ್ಯೂಲರ್‌ ವಿದ್ಯಾರ್ಥಿ ಅಲ್ಲ. ಈಗಾಗಲೇ 10 ವರ್ಷಗಳಿಂದ ಗ್ರಾಮ ಪಂಚಾಯ್ತಿಯೊಂದರಲ್ಲಿ ನೀರುಗಂಟಿಯಾಗಿ ಕೆಲಸ ಮಾಡ್ತಿದ್ದಾನೆ. ಈಗ ಬಿಲ್‌ ಕಲೆಕ್ಟರ್‌ ಆಗಿ ಪ್ರಮೋಷನ್‌ ಆಗ್ತಿದೆಯಂತೆ. ಅದಕ್ಕೆ SSLC ಪಾಸ್‌ ಆದ ಮಾರ್ಕ್ಸ್‌ ಕಾರ್ಡ್‌ ಬೇಕಾಗಿದೆ. ಹೀಗಾಗಿ ಪರೀಕ್ಷೆ ಕಟ್ಟಿ ಉತ್ತರ ಪತ್ರಿಕೆಯಲ್ಲಿ ಹೀಗೆ ಮಾರ್ಕ್ಸ್‌ ನೀಡುವಂತೆ ಬಕೇಟ್‌ ಹಿಡಿದಿದ್ದಾನೆ..

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಉತ್ತರ ಪತ್ರಿಕೆ..!
ಸಿದ್ದರಾಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ಸಿದ್ದಪ್ಪ ಅಂಬಳನೂರು ಈ ಪತ್ರಕೆಯ ಮೌಲ್ಯಮಾಪನ ಮಾಡಿದ್ದಾರೆ. ಮೌಲ್ಯ ಮಾಪನ ವೇಳೆ ಮೊಬೈಲ್‌ ನಲ್ಲಿ ಪತ್ರಿಕೆಯ ಪೋಟೊವನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಅದನ್ನ ತನ್ನ ವಾಟ್ಸಾಪ್‌ ಸ್ಟೆಟಸ್‌ ಗೆ ಹಾಕಿಕೊಂಡಿದ್ದಾರೆ. ಬಳಿಕ ನೋಡಿದವರು ಇದನ್ನ ಡೌನ್ಲೋಡ್‌ ಮಾಡಿಕೊಂಡು ಎಲ್ಲೆಡೆ ವೈರಲ್‌ ಮಾಡಿದ್ದಾರೆ..

ಉತ್ತರ ಪತ್ರಿಕೆ ಲೀಕ್‌ ಬಗ್ಗೆಯೂ ಕೆಲವರ ಆಕ್ರೋಶ..!
ಮೌಲ್ಯಮಾಪನ ವೇಳೆ ಮೊಬೈಲ್‌ ನಲ್ಲಿ ಉತ್ತರ ಪತ್ರಿಕೆಯ ಪೋಟೊ ತೆಗೆದಿರೋದು. ಬಳಿಕ ಅದನ್ನ ವಾಟ್ಸಾಪ್‌ ಸ್ಟೆಟಸ್‌ ಇಟ್ಟುಕೊಂಡ ಶಿಕ್ಷಕ ಸಿದ್ದಪ್ಪ ಅಂಬಳನೂರು ಬಗ್ಗೆ ಕೆಲವರು ಆಕ್ರೋಶ ಹೊರ ಹಾಕ್ತಿದ್ದಾರೆ. ಮೌಲ್ಯ ಮಾಪನದ ವೇಳೆ ತೆಗೆದುಕೊಂಡ ಸೆಲ್ಪಿ ಪೋಟೊಗಳು ಸಹ ವೈರಲ್‌ ಆಗಿವೆ. ಮೌಲ್ಯಮಾಪನ ಕೇಂದ್ರದಲ್ಲಿ ಮೊಬೈಲ್‌ ಬಳಕೆಗೆ ಅವಕಾಶ ಇದೇಯಾ ಎನ್ನುವ ಬಗ್ಗೆಯು ಪ್ರಶ್ನೆಗಳನ್ನ ಎತ್ತಿದ್ದಾರೆ. ವಿದ್ಯಾರ್ಥಿಯ ಗೌಪ್ಯತೆಯನ್ನ ಇಲ್ಲಿ ಮೌಲ್ಯಮಾಪಕರು ಬಹಿರಂಗಗೊಳಸಿದ್ದು ಅಕ್ಷಮ ಎನ್ನಿದ್ದಾರೆ.. ಈ ಬಗ್ಗೆ ಅಧಿಕಾರಿಗಳು ನಿರ್ಧರಿಸಬೇಕಿದೆ.