*   ಏ.21ರಿಂದ ಮೌಲ್ಯಮಾಪನ*   ಮೇ 2ನೇ ವಾರ ಫಲಿತಾಂಶ*  ಇಂದು ಕೀ ಉತ್ತರ ಪ್ರಕಟ 

ಬೆಂಗಳೂರು(ಏ.12): 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ(SSLC Exam) ಮುಕ್ತಾಯಗೊಂಡಿದ್ದು, ಏ.21ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ(Result) ಪ್ರಕಟವಾಗುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಪರೀಕ್ಷೆಯ ಕೊನೆಯ ದಿನವಾದ ಸೋಮವಾರ ವಿಜ್ಞಾನ ವಿಷಯದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಹಿಜಾಬ್‌ ವಿವಾದ(Hijab Controversy) ತೀವ್ರಗೊಂಡಿದ್ದ ನಡುವೆಯೇ ಮಾ.28ರಿಂದ ಆರಂಭವಾಗಿದ್ದ ಪರೀಕ್ಷೆಯು ನಿಗದಿಯಂತೆ ಏ.11ರ ಸೋಮವಾರ ಕೊನೆಗೊಂಡಿದೆ. ಬಹುತೇಕ ಎಲ್ಲ ವಿದ್ಯಾರ್ಥಿಗಳು(Students) ಸರ್ಕಾರದ ಆದೇಶದಂತೆ ಸಮವಸ್ತ್ರ ಧರಿಸಿ ಬಂದು ಪರೀಕ್ಷೆ ಬರೆದಿದ್ದಾರೆ. ಮೊದಲ ದಿನ ಚಿಕ್ಕೋಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಆರು ಜನ ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದಿದ್ದು ಹೊರತುಪಡಿಸಿದರೆ ಉಳಿದ ಪರೀಕ್ಷೆಗಳು ಅಕ್ರಮಗಳಿಲ್ಲದೆ ನಡೆದಿವೆ.

Hijab ಬಗ್ಗೆ ಹಟ ಬೇಡ, ಮಕ್ಕಳನ್ನು ಪರೀಕ್ಷೆಗೆ ಕಳಿಸಿ: ಡಿ.ಕೆ.ಶಿವಕುಮಾರ್‌

ಸದ್ಯ 10 ದಿನಗಳ ಕಾಲ ಶಿಕ್ಷಕರಿಗೆ ಬಿಡುವು ನೀಡಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ ಏ.21ರ ನಂತರ 34 ಜಿಲ್ಲೆಗಳ 234 ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ(Evaluation) ಕಾರ್ಯ ಆರಂಭವಾಗಲಿದೆ. ಈ ಕಾರ್ಯಕ್ಕೆ 60 ಸಾವಿರ ಶಿಕ್ಷಕರನ್ನು(Teachers) ನಿಯೋಜಿಸಲು ತೀರ್ಮಾನಿಸಲಾಗಿದೆ. ಮೌಲ್ಯಮಾಪನ ಕಾರ್ಯವನ್ನು ಮೇ ಮೊದಲ ವಾರದೊಳಗೆ ಮುಗಿಸಿ ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಆಲೋಚನೆ ಮಾಡಲಾಗಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಕೀ ಉತ್ತರ ಪ್ರಕಟ

ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳ ಕೀ ಉತ್ತರಗಳನ್ನು ಏ.12ರಂದು ಮಂಡಳಿಯ ವೆಬ್‌ಸೈಟ್‌ (https://sslc.karnataka.ggov.in) ನಲ್ಲಿ ಬಿಡುಗಡೆ ಮಾಡಲಾಗುವುದು. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಮೂರು ದಿನಗಳ ಒಳಗೆ ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮೂಲಕ ಲಾಗಿನ್‌ ಆಗಿ ಆನ್‌ಲೈನ್‌ ಮೂಲಕವೇ ಆಕ್ಷೇಪಣೆ ಸಲ್ಲಿಸಬಹುದು ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಯಿ ಸಾವಿನ ದುಃಖದಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ...!

ಶಿಗ್ಗಾವಿ(ಮಾ.31): ಒಂದೆಡೆ ಹೆತ್ತು ಹೊತ್ತು, ತುತ್ತು ಉಣಿಸಿದ ತಾಯಿಯ ಉಸಿರು ನಿಂತಿದೆ! ಇನ್ನೊಂದೆಡೆ ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆ. ಸುಮಾರು ಹೊತ್ತು ಈ ಸಂದಿಗ್ದತೆಯಲ್ಲಿ ತೊಳಲಾಡಿದ ಪುತ್ರ ಕೊನೆಗೂ ತಾಯಿಯ(Mother) ಅಗಲಿಕೆಯ(Passed Away) ನೋವನ್ನು ಎದೆಯಲ್ಲಿ ಇಟ್ಟುಕೊಂಡೇ ಪರೀಕ್ಷೆ ಎದುರಿಸುವ ಮೂಲಕ ಇಡಿ ಊರಿಗೆ ಊರೇ ಮರುಗುವಂತೆ ಮಾಡಿದ್ದನು. 

ತಾಲೂಕಿನ ಹನುಮರಹಳ್ಳಿ ಬುಧವಾರ ಇಂಥದೊಂದು ಘಟನೆಗೆ ಸಾಕ್ಷಿಯಾಯಿತು. ಗ್ರಾಮದ ಯಶವಂತ ಉಮೇಶ ಸಂಶಿ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ(Student) ಬೆಳಗ್ಗೆ ಇಂಗ್ಲಿಷ ಪರೀಕ್ಷೆ(Exam) ಬರೆಯಬೇಕಾಗಿತ್ತು. ಆದರೆ, ಇನ್ನೂ ಬೆಳಗಾಗುವ ಮುನ್ನವೇ ಆತನ ತಾಯಿ ಸರಸ್ವತಿ (36) ತೀರಿ ಹೋಗಿದ್ದರು. ಶಿಗ್ಗಾಂವಿ(Shiggoan) ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಈ ವಿದ್ಯಾರ್ಥಿ ಜೆಎಂಜಿ ಪರೀಕ್ಷಾ ಕೇಂದ್ರದಲ್ಲಿ ದುಃಖದ ನಡುವೆಯೂ ಪರೀಕ್ಷೆ ಎದುರಿಸಿದ್ದನು.

SSLC Exams: ಕೋವಿಡ್‌ ಭಯವಿಲ್ಲದೇ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ..!

ಸರಸ್ವತಿಗೆ ಮಂಗಳವಾರ ರಾತ್ರಿ ದಿಢೀರನೆ ಅರ್ಧಾಂಗ ವಾಯು ಹೊಡೆಯಿತು. ತಕ್ಷಣ ಶಿಗ್ಗಾಂವಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕೆತ್ಸೆ(Treatment) ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ(Hubballi) ಕಿಮ್ಸ್‌ಗೆ(KIMS) ಕರೆದುಕೊಂಡು ಹೋದರು. ಆದರೆ, ಅಲ್ಲಿ ಚಿಕೆತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದರು.

ಇಂತಹ ದುಃಖದ ಪರಿಸ್ಥಿತಿಯಲ್ಲಿ ದಿಕ್ಕು ತೋಚದಂತಾದ ವಿದ್ಯಾರ್ಥಿ ಯಶವಂತ ಪರೀಕ್ಷೆ ಬರೆಯುವುದನ್ನು ಬಿಟ್ಟು ಕೈಚೆಲ್ಲಿ ಕುಳಿತಿದ್ದ. ಆದರೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗೆ ಧೈರ್ಯ ತುಂಬಿ, ಪರೀಕ್ಷೆ ಎಷ್ಟುಮಹತ್ವದ್ದು ಎಂಬುದನ್ನು ವಿವರಿಸಿ ದುಃಖದಲ್ಲಿಯೂ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದರು. ಯಶವಂತ ದುಃಖ, ನೋವಿನಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದ. ಬಳಿಕ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ.