ಐಎಂಎಗೆ ಸೇರಿದ ಶಾಲೆಯನ್ನು ತೆರವು ಮಾಡುವಂತೆ ಸಕ್ಷಮ ಪ್ರಾಧಿಕಾರ ನೋಟಿಸ್‌ ನೀಡಿದ್ದರಿಂದ ಆತಂಕಗೊಂಡ ಶಿವಾಜಿ ನಗರದ ನೆಹರು ಶಾಲೆ ಬಳಿ ಧಾವಿಸಿದ ಪೋಷಕರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು (ಸೆ.25): ಐ ಮಾನಿಟರಿ ಅಡ್ವೈಸರಿ(ಐಎಂಎ)ಗೆ ಸೇರಿದ ಶಾಲೆಯನ್ನು ತೆರವು ಮಾಡುವಂತೆ ಸಕ್ಷಮ ಪ್ರಾಧಿಕಾರ ನೋಟಿಸ್‌ ನೀಡಿದ್ದರಿಂದ ಆತಂಕಗೊಂಡ ಶಿವಾಜಿ ನಗರದ ನೆಹರು ಶಾಲೆ ಬಳಿ ಧಾವಿಸಿದ ಪೋಷಕರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್‌ ಅಲಿಖಾನ್‌ ನೆಹರು ಶಾಲೆಯ ಟ್ರಸ್ಟ್‌ ಅಧ್ಯಕ್ಷರಾಗಿದ್ದು, ಪ್ರಕರಣವು ನ್ಯಾಯಾಲಯದಲ್ಲಿದೆ. ಸಕ್ಷಮ ಪ್ರಾಧಿಕಾರವು ಐಎಂಎಗೆ ಸಂಬಂಧಿಸಿದ ಆಸ್ತಿಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದು ಭಾರತಿ ನಗರದ ಸೆಂಟ್‌ ಚಾರ್ಲ್ಸ್ ಚಚ್‌ರ್‍ ಸಮೀಪ ಇರುವ ನೆಹರು ಶಾಲೆಯನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಿದೆ. ಆಗ ಶಾಲೆಯ ಆಡಳಿತ ಮಂಡಳಿಯವರು ಪೋಷಕರಿಗೆ ದೂರವಾಣಿ ಕರೆ ಮಾಡಿ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಶಾಲೆ ಬಳಿ ಜಮಾಯಿಸಿ, ‘ಇತ್ತೀಚೆಗಷ್ಟೇ ಶಾಲೆಯಿಂದ ಶುಲ್ಕ ಕಟ್ಟಿಸಿಕೊಳ್ಳಲಾಗಿದೆ. ವಿಷಯ ಗೊತ್ತಿದ್ದರೂ ಅದನ್ನು ಮುಚ್ಚಿಡಲಾಗಿದೆ. ಈಗ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌, ಪೋಷಕರು ಭಯ ಪಡಬಾರದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸೋಮವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪೋಷಕರು ಪ್ರತಿಭಟನೆ ಹಿಂಪಡೆದರು.

Add Asianetnews Kannada as a Preferred SourcegooglePreferred

ಇಲ್ಲಿರುವ ಪ್ರತಿ ಮಗುವಿನ ಮಾಹಿತಿಯೂ ನಮ್ಮ ಬಳಿ ಇದ್ದು, ಒಂದು ದಿನದ ಶಿಕ್ಷಣವೂ ಹಾಳಾಗಲು ಬಿಡುವುದಿಲ್ಲ. ಇದೇ ಶಾಲೆಯಲ್ಲಿ ಅಭ್ಯಾಸ ಮಾಡುವುದು ಕಷ್ಟವಾಗಲಿದ್ದು ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು. ಪೋಷಕರು, ಶಾಲಾ ಸಿಬ್ಬಂದಿಯೂ ಮಾತುಕತೆ ವೇಳೆ ಹಾಜರಿರಲಿ ಎಂದು ಶಾಸಕರು ಸ್ಪಷ್ಟಪಡಿಸಿದರು. ಇದರಿಂದ ಸಮಾಧಾನಗೊಂಡ ಪೋಷಕರು ನಿಟ್ಟುಸಿರುಬಿಟ್ಟರು. 1ರಿಂದ 10ನೇ ತರಗತಿ ವರೆಗೆ 350ಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ಧಾರೆ.

ನೆಹರೂ ಶಾಲೆಯ ಸಮಸ್ಯೆ ಇಲಾಖೆಯ ಗಮನಕ್ಕೆ ಬಂದಿದೆ. ಮಕ್ಕಳ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ಪೋಷಕರ ಜೊತೆ ಚರ್ಚಿಸಿ ಹತ್ತಿರದಲ್ಲಿ ಇರುವ ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು.

-ಜಯಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ.

ಕೊರೋನಾ ಕಡಿಮೆಯಾಗುತ್ತಿದ್ದಂತೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕುಸಿತ..!

ಶಾಲಾ ಬ್ಯಾಗ್‌ ತೂಕ ಇಳಿಕೆ, ಸರ್ಕಾರಕ್ಕೆ ಕೋರ್ಟ್ ನೋಟಿಸ್‌
ಶಾಲಾ ಮಕ್ಕಳ ಬ್ಯಾಗ್‌ನ ತೂಕ ಇಳಿಕೆಗೆ ಕೂಡಲೇ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಸರ್ಕಾರಕ್ಕೆ ಹೈಕೋರ್ಚ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ತುಮಕೂರಿನ ವಕೀಲ ಎಲ್‌. ರಮೇಶ್‌ ನಾಯಕ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ನೋಂದಾಯಿತ ಖಾಸಗಿ ಅನುದಾನರಹಿತ ಶಾಲೆಗಳ ಸಂಘಕ್ಕೆ (ರುಪ್ಸಾ) ನೋಟಿಸ್‌ ಜಾರಿಗೊಳಿಸಿತು. ಹಾಗೆಯೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಬೆಳ್ತಂಗಡಿ: ಕಟ್ಟಡ, ಪೀಠೋಪಕರಣಗಳಿವೆ, ವಿದ್ಯಾರ್ಥಿಗಳಿಗಲ್ಲ..!

ನಗರ-ಪಟ್ಟಣಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಅಧಿಕ ತೂಕದ ಬ್ಯಾಗ್‌ಗಳನ್ನು ಹೊತ್ತು ನಿತ್ಯ ಶಾಲೆಗೆ ಹೋಗುವುದು ಸಾಮಾನ್ಯವಾಗಿದೆ. ಆರೋಗ್ಯ ತಜ್ಞರ ವಿವಿಧ ಅಧ್ಯಯನಗಳ ಪ್ರಕಾರ ಭಾರೀ ತೂಕದ ಶಾಲಾ ಬ್ಯಾಗ್‌ ಹೊರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಅವರ ಬೆನ್ನು ಮತ್ತು ಕಾಲಿಗೆ ಹಾನಿಯಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.