Asianet Suvarna News Asianet Suvarna News

ಪಠ್ಯಪುಸ್ತಕ ಪರಿಷ್ಕರಣೆ ವಿಷಯ ಮುಗಿದ ಅಧ್ಯಾಯ: ಸಚಿವ ನಾಗೇಶ್‌

*  ಸರ್ಕಾರವನ್ನು ಟೀಕಿಸಲು ಕಾಂಗ್ರೆಸ್‌ನವರಿಗೆ ಯಾವುದೇ ವಿಷಯವೇ ಸಿಗುತ್ತಿಲ್ಲ
*  ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ
*  ವಿಷಯ ಇಲ್ಲದಿದ್ದಾಗ ಈ ರೀತಿ ಅನಾವಶ್ಯಕ ಆರೋಪ ಮಾಡುವುದರಲ್ಲಿ ತಲ್ಲೀನ 

Minister BC Nagesh React on Textbook Revision in Karnataka grg
Author
Bengaluru, First Published Jun 15, 2022, 9:44 PM IST

ಶಿವಮೊಗ್ಗ(ಜೂ.15):  ಪಠ್ಯಪುಸ್ತಕ ಪರಿಷ್ಕರಣೆ ವಿಷಯ ಮುಗಿದು ಹೋಗಿರುವ ಅಧ್ಯಾಯ. ಕಾಂಗ್ರೆಸ್‌ನವರು ರಾಜಕೀಯ ಮಾಡುವುದಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಾರೆ, ವಯಸ್ಸಾಗಿರುವವರನ್ನು ತೆಗೆದುಕೊಳ್ಳುತ್ತಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರವನ್ನು ಟೀಕಿಸಲು ಕಾಂಗ್ರೆಸ್‌ನವರಿಗೆ ಯಾವುದೇ ವಿಷಯವೇ ಸಿಗುತ್ತಿಲ್ಲ. ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಆ ಕಾರಣಕ್ಕೆ ವಿಷಯ ಇಲ್ಲದಿದ್ದಾಗ ಈ ರೀತಿ ಅನಾವಶ್ಯಕ ಆರೋಪ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ದೂರಿದರು.

ನಾಳೆ(ಜೂ.16) ದ್ವಿತೀಯ PUC ರಿಸಲ್ಟ್‌ ಪ್ರಕಟವಾಗಲ್ಲ, ಸಚಿವ ನಾಗೇಶ್ ಸ್ಪಷ್ಟನೆ

ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎಂದು ಓದುವುದಕ್ಕೆ ಬರದೇ ಇರುವವರು ಯಾರಾದರೂ ಹೇಳಿದರೆ ಒಪ್ಪಿಕೊಳ್ಳುತ್ತೇನೆ. ಆದರೆ, ಓದುವುದಕ್ಕೆ ಬರುವವರು ಸುಮ್ಮನೆ ಆರೋಪ ಮಾಡುತ್ತಾರೆಂದರೆ ಹೇಗೆ? ಕುವೆಂಪು ಅವರಿಗೆ ಅವಮಾನ ಮಾಡಿದವರು ಯಾರ್ರಿ? ತುಂಬಾ ಒಳ್ಳೆಯ ಮಂತ್ರಿ ಆಗಿದ್ದಂತವರು, ತುಂಬಾ ಒಳ್ಳೆಯ ಶಾಸಕರು ಎಂದೆನಿಸಿಕೊಂಡವರು ಇದ್ದಾರಲ್ಲ, ಅವರಿಗೆ ಓದುವುದಕ್ಕಂತೂ ಬರುತ್ತದೆ ಅಲ್ಲವೇ? ಎಂದು ವ್ಯಂಗ್ಯವಾಡಿದರು.

ಕುವೆಂಪು ಅವರಿಗೆ ನಿಜವಾಗಿಯೂ ಅವಮಾನ ಮಾಡಿದವರು ಯಾರು? 2017ರಲ್ಲಿ ನಾಡಗೀತೆಯಂತಹ ಶ್ರೇಷ್ಠ ಗೀತೆಯನ್ನು ತಿರುಚಿದವರು ಯಾರು? ನಾಡಗೀತೆಯನ್ನು ತಿರುಚಿದಂತವರ ಮೇಲೆ ಆಗ ಆಡಳಿತದಲ್ಲಿದ್ದ ಸಿದ್ದರಾಮಯ್ಯನವರ ಸರ್ಕಾರ ಯಾವ ಕ್ರಮ ಕೈಗೊಂಡಿದ್ದಾರೆ? ಒಂದೇ ಒಂದು ಸಣ್ಣ ಕೇಸನ್ನು ಹಾಕಲಿಲ್ಲ. ಏನಿದೆ ಮಾಜಿ ಸಿಎಂ ಸಿದ್ದರಾಮಯ್ಯನವರ ತಲೆಯಲ್ಲಿ? ಕುವೆಂಪು ಅವರಿಗೆ ಅವಮಾನ ಮಾಡುವ ಉದ್ದೇಶ ಇದ್ದಿದ್ದರಿಂದಲೇ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಅವರದೇ ಪರಿಷ್ಕರಣ ಸಮಿತಿ 8 ಪಾಠ ಇದ್ದಿದ್ದನ್ನು 7ಕ್ಕೆ ಇಳಿಸಿದರು. ಆಗ ಯಾವುದೇ ಸಾಹಿತಿಗಳಿಗೆ, ಮತ್ತೊಬ್ಬರಿಗೆ, ಮಾಜಿ ಮಂತ್ರಿಗಳಿಗೆ, ಶಾಸಕರಿಗೆ ಅದು ಅವಮಾನ ಎಂದು ಅನಿಸಲೇ ಇಲ್ಲ. ಅದರಲ್ಲೂ ಜ್ಞಾನಪೀಠ ಪ್ರಶಸ್ತಿ ಪಡೆದಂತಹ ‘ರಾಮಾಯಣ ದರ್ಶನಂ’ನಂತಹ ಒಂದು ಪಠ್ಯ ತೆಗೆದು ಹಾಕಿದಾಗ ಕುವೆಂಪು ಬಗ್ಗೆ ಮಂತ್ರಿಗಳು, ಶಾಸಕರುಗಳಿಗೆ ಅವಮಾನ ಎನಿಸಲಿಲ್ಲ. ಇದೀಗ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತುಕಡೆ ಗ್ಯಾಂಗ್ ಮಾಡಿದ ಕೆಲ್ಸವನ್ನೇ ಕರ್ನಾಟಕದಲ್ಲಿ ಬರಗೂರು ಸಮಿತಿ ಮಾಡಿದೆ: ಸಚಿವ ನಾಗೇಶ್

ಸಿದ್ದರಾಮಯ್ಯ ಸರ್ಕಾರವಿದ್ದ ಸಂದರ್ಭದಲ್ಲಿ ಮೈಸೂರು ಮಹಾರಾಜರ ಪಠ್ಯವನ್ನು ತೆಗೆದು ಹಾಕಿದ್ದರು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪಠ್ಯವನ್ನು ಕೈಬಿಟ್ಟಿದ್ದರು. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರಿಂದ ನಾವು ರಾಷ್ಟ್ರೀಯತೆ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

‘ಸಮಸ್ಯೆ ಅರಿವಿದೆ’

ಬಿಸಿಯೂಟ ನೌಕರರು ಕನಿಷ್ಠ ಗೌರವಧನ ಪಡೆಯುತ್ತಿರುವುದು ಸತ್ಯದ ಮಾತು. ಅದನ್ನು ಅಲ್ಲಗೆಳೆಯುವುದಿಲ್ಲ. ಅವರಿಗೆ ಒಂದಿಷ್ಟುತೊಂದರೆ ಆಗುತ್ತಿದೆ. ಮುಂದಿನ ದಿನದಲ್ಲಿ ಸಮಸ್ಯೆ ಸರಿಪಡಿಸಲಾಗುವುದು. ಅವರ ನೋವು ನಮಗೆ ಅರ್ಥವಾಗುತ್ತದೆ. ಏಕೆಂದರೆ ದಿನಕ್ಕೆ 100 ರು. ನೀಡುವುದು ಸರಿಯಲ್ಲ. ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಚಿಂತನೆ ನಡೆಸಲಾಗಿದೆ. ಅಲ್ಲದೇ, ಇಲ್ಲಿರುವ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು ಅಂತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.  

Follow Us:
Download App:
  • android
  • ios