ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದುವರೆಗಿನ ಮಾನವೀಯತೆ ಇಲ್ಲದ, ಬದುಕನ್ನು ಕಲಿಸದ, ಪ್ರತಿಭೆಗೆ ಅವಕಾಶ ಇಲ್ಲದ ಶಿಕ್ಷಣದಿಂದ ಬಿಡುಗಡೆಯಾಗಿ, ಅನುಶಾಸನ ಮತ್ತು ಸ್ವಾಭಿಮಾನವನ್ನು ಬೆಳೆಸುವ ಶಿಕ್ಷಣ ನಮ್ಮ ಮುಂದಿನ ಪೀಳಿಗೆಗೆ ದೊರೆಯಲಿದೆ: ಕಲ್ಲಡ್ಕ ಪ್ರಬಾಕರ ಭಟ್‌ 

ಉಡುಪಿ(ಜ.09): ಪ್ರಾಚೀನ ಸನಾತನ ಚಿಂತನೆಯೇ ನಿಜವಾದ ಭಾರತೀಯ ಚಿಂತನೆಯಾಗಿದ್ದು, ಇದನ್ನು ಬೆಳೆಸುವ ನೂತನ ರಾಷ್ಟ್ರೀಯ ಶಿಕ್ಷಣ ದೇಶದಲ್ಲಿ ಜಾರಿಯಾಗುತ್ತಿದೆ. ಇದಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳು ಸಿದ್ಧವಾಗಬೇಕಾಗಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಬಾಕರ ಭಟ್‌ ಹೇಳಿದರು.

ಅವರು ರೂರಲ್‌ ಎಜ್ಯುಕೇಶನ್‌ ಸೊಸೈಟಿ ಆಶ್ರಯದಲ್ಲಿ ಪಟ್ಲದ ವಿದ್ಯಾನಗರ ಯು.ಎಸ್‌. ಪ್ರೌಢಶಾಲೆಯ ನೂತನ ವಿಶ್ವಂಭರ ಶಿಶುಮಂದಿರ, ಶಿವಕೃಪಾ ಶಿಕ್ಷಕರ ವಸತಿಗೃಹ ಮತ್ತು ಕೇಶವ ಕೃಪಾ ವಿದ್ಯಾರ್ಥಿನಿಲಯಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀರಾಮನ ಆದರ್ಶ ತಿಳಿಸುವುದು ಅನಿವಾರ್ಯ: ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದುವರೆಗಿನ ಮಾನವೀಯತೆ ಇಲ್ಲದ, ಬದುಕನ್ನು ಕಲಿಸದ, ಪ್ರತಿಭೆಗೆ ಅವಕಾಶ ಇಲ್ಲದ ಶಿಕ್ಷಣದಿಂದ ಬಿಡುಗಡೆಯಾಗಿ, ಅನುಶಾಸನ ಮತ್ತು ಸ್ವಾಭಿಮಾನವನ್ನು ಬೆಳೆಸುವ ಶಿಕ್ಷಣ ನಮ್ಮ ಮುಂದಿನ ಪೀಳಿಗೆಗೆ ದೊರೆಯಲಿದೆ ಎಂದವರು ಹೇಳಿದರು. ಅತಿಥಿಗಳಾಗಿ ನೇತ್ರತಜ್ಞ ಡಾ. ಕೃಷ್ಣಪ್ರಸಾದ್‌, ಗುತ್ತಿಗೆದಾರ ಶಿವಪ್ರಸಾದ್‌ ಹೆಗ್ಡೆ ಆಗಮಿಸಿದ್ದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಣೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀಕಾಂತ್‌ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯರಾಜ್‌ ಹೆಗ್ಡೆ ವಂದಿಸಿದರು. ಇದೇ ಸಂದರ್ಭದಲ್ಲಿ ನೂತನ ಕಟ್ಟಡಗಳ ದಾನಿಗಳನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಬೆಂಗಳೂರಿನ ಗಾನ ವರ್ಧಿನಿ ಸಂಗೀತ ಶಾಲೆಯ ಕಲಾವಿದರಿಂದ ಭಕ್ತಿ ಸಂಗೀತ ಗಾಯನ ನಡೆಯಿತು.