*   ಕೊರೋನಾ ಕಾರಣ ಪದವಿ ಪರೀಕ್ಷೆ ರದ್ದು ಮಾಡಿದ್ದ ಕುಲಪತಿ*   ಕುಲಪತಿ ನಿರ್ಣಯವನ್ನು ಸಿಂಡಿಕೇಟ್‌ ರದ್ದು ಮಾಡಿತ್ತು*   ಸಿಂಡಿಕೇಟ್‌ ನಿರ್ಣಯ ಪ್ರಶ್ನಿಸಿದ್ದ ಹಾಸನ ವಿದ್ಯಾರ್ಥಿಗಳು 

ಬೆಂಗಳೂರು(ಜೂ.04): ಕೊರೋನಾ ಹಿನ್ನೆಲೆಯಲ್ಲಿ ಕುವೆಂಪು ಮುಕ್ತ ವಿಶ್ವವಿದ್ಯಾಲಯದ 2019-20ನೇ ಸಾಲಿನ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ ವಿಶ್ವವಿದ್ಯಾಲಯದ ಕುಲಪತಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಈ ಕುರಿತಂತೆ ಹಾಸನದ ಸುಜಲಾ ಕಾಲೇಜ್‌ ಆಫ್‌ ಕಾಮರ್ಸ್‌ ಹಾಗೂ ಏಳು ಮಂದಿ ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರು ಈ ಆದೇಶ ಮಾಡಿದರು.

Add Asianetnews Kannada as a Preferred SourcegooglePreferred

ಕೊರೋನಾ ಹಿನ್ನೆಲೆಯಲ್ಲಿ ಧನ ಸಹಾಯ ಆಯೋಗದ (ಯುಜಿಸಿ) ಮಾರ್ಗಸೂಚಿ ಮೇರೆಗೆ ಕುವೆಂಪು ಮುಕ್ತ ವಿಶ್ವವಿದ್ಯಾಲಯ 2019-20ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ ವಿಶ್ವವಿದ್ಯಾಲಯದ ಕುಲಪತಿ ಆದೇಶ ಹೊರಡಿಸಿದ್ದರು. ಈ ಮಧ್ಯೆ ಕುವೆಂಪು ವಿವಿ ಸಿಂಡಿಕೇಟ್‌ 2022ರ ಫೆ.8ರಂದು ಸಭೆ ಸೇರಿ ಕುಲಪತಿಗಳ ಆದೇಶ ರದ್ದುಪಡಿಸಲು ನಿರ್ಧರಿಸಿತ್ತು. ಜತೆಗೆ, ಪರೀಕ್ಷೆ ಬರೆಯದೆಯೇ ಮುಂದಿನ ತರಗತಿಗಳಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮಳೆ ನೀರು ಬಂದ್ರೆ ತುಂಬಿಕೊಳ್ಳುತ್ತೆ ಜ್ಞಾನ ದೇಗುಲ: ಶಾಲೆಯ ಕೊಠಡಿಗೆ ನೀರು ರಜೆ ಫಿಕ್ಸ್!

ಈಗಾಗಲೇ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಶುಲ್ಕ ಪಾವತಿಸಿ ಪ್ರವೇಶ ಪಡೆದಿದ್ದಾರೆ. ಈ ಹಂತದಲ್ಲಿ ಸಿಂಡಿಕೇಟ್‌ ನಿರ್ಣಯವನ್ನು ಮಾನ್ಯ ಮಾಡಲಾಗದು ಎಂದು ಹೈಕೋರ್ಟ್‌ ಆದೇಶದಲ್ಲಿ ಅಭಿಪ್ರಾಯಟ್ಟಿದೆ. ಜತೆಗೆ, ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ ವಿಶ್ವವಿದ್ಯಾಲಯದ ಕುಲಪತಿ ಹೊರಡಿಸಿದ್ದ ಆದೇಶವನ್ನು ಇದೇ ವೇಳೆ ಎತ್ತಿ ಹಿಡಿಯಿತು.