ವಿಜಯಪುರ ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೊಹಮ್ಮದ್ ನಾಯ್ಕೋಡಿ ಎಂಬ ದಿವ್ಯಾಂಗ ವಿದ್ಯಾರ್ಥಿ ಪರೀಕ್ಷೆ ಬರೆಯಲು ಪರದಾಡಿದ್ದಾನೆ. 

ವಿಜಯಪುರ(ಮಾ.28): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ದಿವ್ಯಾಂಗ(ವಿಶೇಷಚೇತನ) ವಿದ್ಯಾರ್ಥಿಯೊಬ್ಬನಿಗೆ ಸಹಾಯಕ ವಿದ್ಯಾರ್ಥಿಯನ್ನು ನೀಡದ ಹಿನ್ನೆಲೆ ವಿದ್ಯಾರ್ಥಿಯೊಬ್ಬ ಪರದಾಡಿದ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

Add Asianetnews Kannada as a Preferred SourcegooglePreferred

ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೊಹಮ್ಮದ್ ನಾಯ್ಕೋಡಿ ಎಂಬ ದಿವ್ಯಾಂಗ ವಿದ್ಯಾರ್ಥಿ ಪರೀಕ್ಷೆ ಬರೆಯಲು ಪರದಾಡಿದ್ದಾನೆ. ಆತನಿಗೆ ಸಹಾಯಕ ವಿದ್ಯಾರ್ಥಿ ನೀಡದ ಕಾರಣ ಪರೀಕ್ಷೆ ಬರೆಯಲು ಆಗದೇ ಪರೀಕ್ಷಾರ್ಥಿ ಸುಮ್ಮನೆ ಕುಳಿತಿದ್ದನ್ನು ಕಂಡು ತಮ್ಮ ಮಗನಿಗೆ ಪರೀಕ್ಷೆ ಬರೆಯಲು ಆಗಲ್ಲ. ಆದರೂ ಸಹಾಯಕ್ಕೆ ಬೇರೆ ವಿದ್ಯಾರ್ಥಿಯನ್ನು ನೀಡಿಲ್ಲ ಎಂದು ವಿದ್ಯಾರ್ಥಿ ಮೊಹಮ್ಮದ್‌ನ ತಂದೆ ಅಝ್ಲಾನ್ ನಾಯ್ಕೋಡಿ ಪರೀಕ್ಷಾ ಕೇಂದ್ರದ ಹೊರಗಡೆ ಕಣ್ಣೀರಿಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷೆ ಆರಂಭವಾದ ಬಳಿಕ ಸಹಾಯಕ ವಿದ್ಯಾರ್ಥಿಗೆ ಅವಕಾಶ ನೀಡಿದ್ದು, ಮುಂದಿನ ಪರೀಕ್ಷೆಗಳಿಗೆ ಈ ರೀತಿ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ: ಒಬ್ಬ ಡಿಬಾರ್‌, ಇಬ್ಬರು ಶಿಕ್ಷಕರು ಸಸ್ಪೆಂಡ್‌..!

ಶಾಲೆಯ ಆಡಳಿತ ಮಂಡಳಿ ನಮ್ಮ ಶಾಲೆಯ ವಿದ್ಯಾರ್ಥಿಗೆ ಸಹಾಯಕ ಬೇಕು ಎಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಬೇಡಿಕೆ ಇಡಬೇಕು. ಆದರೆ, ಅವರು ಅದನ್ನು ಮಾಡಿಲ್ಲ. ಹೀಗಾಗಿ ಪರೀಕ್ಷಾ ಸಮಯದಲ್ಲಿ ದಿವ್ಯಾಂಗ ವಿದ್ಯಾರ್ಥಿಗೆ ಸಮಸ್ಯೆ ಆಗಿದ್ದನ್ನು ಕಂಡು ತಕ್ಷಣವೇ ನಾವು ಹಾಗೂ ನಮ್ಮ ಡಿಡಿಪಿಐ ಸಾಹೇಬರು ಪರೀಕ್ಷಾ ಮಂಡಳಿಗೆ ಕರೆಮಾಡಿ ಮಾಹಿತಿ ನೀಡಿದೆವು. ಅವರು ಸಹ ತ್ವರಿತವಾಗಿ ಸ್ಪಂದಿಸಿ ವಿದ್ಯಾರ್ಥಿಗೆ ಸಹಾಯಕ ವಿದ್ಯಾರ್ಥಿಯನ್ನು ನೀಡಲು ಅನುಮತಿಸಿದರು. ತತಕ್ಷಣವೇ ವಿದ್ಯಾರ್ಥಿಗೆ ಆಗಿದ್ದ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಆತ ನಿರಾಳವಾಗಿ ಪರೀಕ್ಷೆ ಬರೆಯುವಂತಾಗಿದೆ. ತೊಂದರೆ ಅನುಭವಿಸಿದ ವಿದ್ಯಾರ್ಥಿ ಶಾಲೆಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಗರ ವಲಯ -ಬಸವರಾಜ ತಳವಾರ ತಿಳಿಸಿದ್ದಾರೆ. 

857 ವಿದ್ಯಾರ್ಥಿಗಳು ಗೈರು

ವಿಜಯಪುರ: ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ಪತ್ರಿಕೆಗೆ ಜಿಲ್ಲೆಯ 127 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದ್ದು, ಪರೀಕ್ಷೆಗೆ ನೋಂದಣಿಯಾದ ಒಟ್ಟು 40,518 ವಿದ್ಯಾರ್ಥಿಗಳಲ್ಲಿ 39,661 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 857 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿಯಲ್ಲಿ ಕುಸಿದು ಬಿದ್ದ ವಿದ್ಯಾರ್ಥಿ; ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವು

ದೇವರಹಿಪ್ಪರಗಿ: 44ವಿದ್ಯಾರ್ಥಿಗಳು ಗೈರು

ದೇವರಹಿಪ್ಪರಗಿ: ನೂತನ ತಾಲೂಕಿನ ಸುಮಾರು 7 ಎಸ್.ಎಸ್.ಎಲ್.ಸಿ ಪರೀಕ್ಷಾ ಕೆಂದ್ರಗಳಲ್ಲಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಒಟ್ಟು 44 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾಹಿತಿ ನೀಡಿದ್ದಾರೆ. ಯಾವುದೇ ತೊಂದರೆಗಳು ಬಾಧಿಸದೇ ವಿದ್ಯಾರ್ಥಿಗಳು ಸೂಸೂತ್ರವಾಗಿ ಪರೀಕ್ಷೆಗಳನ್ನು ಬರೆಯುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಯಲ್ಲಿ ಬುಧವಾರದಂದು ನಡೆದ ಸಮಾಜ ವಿಜ್ಞಾನ ಪರೀಕ್ಷೆಗಳು ಪೂರ್ಣಗೊಂಡಿದ್ದು 2194 ವಿದ್ಯಾರ್ಥಿಗಳಲ್ಲಿ 2150 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 44 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಪಟ್ಟಣದ ಸಿದ್ದೇಶ್ವರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 3 ಜನ ವಿದ್ಯಾರ್ಥಿಗಳು,ಎ ಬಿ ಸಾಲಕ್ಕಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 2ಜನ ವಿದ್ಯಾರ್ಥಿಗಳು, ಜ್ಞಾನಜ್ಯೋತಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 2 ಜನ ವಿದ್ಯಾರ್ಥಿಗಳು, ಕೆಪಿಜೆ ಜಾಲವಾದ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 9 ಜನ ವಿದ್ಯಾರ್ಥಿಗಳು, ಎಸ್ ಜೆ ಎಚ್‌ ಜೆ ಹಿಟ್ನಳ್ಳಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 23 ಜನ ವಿದ್ಯಾರ್ಥಿಗಳು, ಇಕ್ರ ಡೆವಿಲ್ ಹುಣಶ್ಯಾಳ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 5 ಜನ ವಿದ್ಯಾರ್ಥಿಗಳು ಗೈರಾಗಿದ್ದರು. ಆದರೆ, ತಿಳಗೂಳ ಪ್ರೌಢಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಶೇ.100 ಹಾಜರಾತಿ ಇದೆ ಎಂದು ತಿಳಿಸಿದ್ದಾರೆ.