ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ನಡೆಯುತ್ತಿರುವ ವಿಚಾರಣೆಯ ನಡುವೆಯೇ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಮಂಡಳಿ ಪರೀಕ್ಷೆಗಳು ಆರಂಭವಾಗಲಿವೆ.

ಬೆಂಗಳೂರು (ಮಾ.27): ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ನಡೆಯುತ್ತಿರುವ ವಿಚಾರಣೆಯ ನಡುವೆಯೇ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಮಂಡಳಿ ಪರೀಕ್ಷೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿಗೆ 5 ಮತ್ತು 8ನೇ ತರಗತಿ ಮಕ್ಕಳಿಗೆ ಮಂಡಳಿ ಪರೀಕ್ಷೆ ನಡೆಯಲಿವೆ. 

Add Asianetnews Kannada as a Preferred SourcegooglePreferred

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದು, ಎಲ್ಲ ಶಾಲೆಗಳಿಗೂ ರವಾನಿಸಲಿದೆ. ಈ ಪ್ರಶ್ನೆ ಪತ್ರಿಕೆ ಆಧಾರಿಸಿ ಎಲ್ಲ ಶಾಲೆಗಳು ಪರೀಕ್ಷೆ ನಡೆಸಬೇಕಿದೆ. ಆಯಾ ಶಾಲೆಗಳೇ ಪರೀಕ್ಷಾ ಕೇಂದ್ರಗಳಾಗಿದ್ದು, ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಪ್ರತಿ ವಿಷಯಕ್ಕೆ 40 ಅಂಕಗಳಿಗೆ ಪರೀಕ್ಷೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಬಹುತೇಕ ಎಲ್ಲ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿವೆ. 

5, 8ನೇ ಕ್ಲಾಸ್‌ ಪರೀಕ್ಷೆ ಮುಂದೂಡಿಕೆ: ಮತ್ತೊಮ್ಮೆ ಹೈಕೋರ್ಟ್‌ ನಕಾರ

ಐದನೇ ತರಗತಿ ಮಕ್ಕಳಿಗೆ ಮಾ.27ರಿಂದ 30ರ ವರೆಗೆ ಮತ್ತು ಎಂಟನೇ ತರಗತಿಗೆ ಮಾ.27ರಿಂದ ಏ.1ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಮಾ.30ರಂದು ನಡೆಯಲಿರುವ ಗಣಿತ ವಿಷಯದ ಪರೀಕ್ಷೆ ಮಾತ್ರ ಬೆಳಗ್ಗೆ 10.30ರಿಂದ 12.30ರ ವರೆಗೆ ನಡೆಯಲಿದೆ. ಉಳಿದೆಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆಯಲಿವೆ. ಈ ಎರಡೂ ತರಗತಿ ಮಕ್ಕಳಿಗೆ ಮಂಡಳಿ ಪರೀಕ್ಷೆ ಪ್ರಶ್ನಿಸಿ ಕೆಲ ಖಾಸಗಿ ಶಾಲಾ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಕೂಡ ಸೋಮವಾರ ವಿಚಾರಣೆಗೆ ಬರಲಿದೆ. ಇದರ ನಡುವೆಯೇ ಪರೀಕ್ಷೆಗಳು ಆರಂಭವಾಗಲಿವೆ.

ಸುಪ್ರೀಂ ಹೇಳಿದ್ದೇನು?: ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ.ಪಿ.ಎಸ್‌.ನರಸಿಂಹ ಮತ್ತು ನ್ಯಾ. ಜೆ.ಬಿ.ಪರ್ಡೀವಾಲಾ ಅವರಿದ್ದ ಪೀಠ, ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ‘ಹೈಕೋರ್ಟ್‌ಗಳ ಆದೇಶದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ. ಒಂದು ರಾಜ್ಯಕ್ಕೆ ಏನು ಬೇಕು ಎಂಬುದು ಹೈಕೋರ್ಟ್‌ಗಳಿಗೆ ಚೆನ್ನಾಗಿ ತಿಳಿದಿರುತ್ತದೆ’ ಎಂದು ಹೇಳಿ ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಿದೆ.

2nd PUC Annual Exam: ದ್ವಿತೀಯ ಪಿಯುಸಿ ಮಾದರಿ ಉತ್ತರ ಪ್ರಕಟ

ರಾಜ್ಯ ಶಿಕ್ಷಣ ಇಲಾಖೆಯು 5 ಮತ್ತು 8ನೇ ತರಗತಿ ಬೋರ್ಡ್‌ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡು ಕಳೆದ ನವೆಂಬರ್‌ನಲ್ಲಿ ಅಧಿಕೃತ ಸುತ್ತೋಲೆ ಹೊರಡಿಸಿತ್ತು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಬೋರ್ಡ್‌ ಪರೀಕ್ಷೆಯ ಬಗ್ಗೆ ತಿಳಿಸದೆ ವರ್ಷದ ಮಧ್ಯದಲ್ಲಿ ಪ್ರಕಟಿಸಿದ್ದನ್ನು ಪ್ರಶ್ನಿಸಿ ಅವರ್‌ ಸ್ಕೂಲ್ಸ್‌, ರುಪ್ಸಾ ಸೇರಿದಂತೆ ಕೆಲ ಸಂಘಟನೆಗಳು ಮೊದಲು ಹೈಕೋರ್ಟ್‌ ಮೆಟ್ಟಿಲೇರಿದಾಗ ಏಕಸದಸ್ಯ ಪೀಠ ಬೋರ್ಡ್‌ ಪರೀಕ್ಷೆ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಹೋದಾಗ ಏಕಸದಸ್ಯ ಪೀಠದ ಆದೇಶಕ್ಕೆ ದ್ವಿಸದಸ್ಯ ಪೀಠ ತಡೆ ನೀಡಿ ಬೋರ್ಡ್‌ ಪರೀಕ್ಷೆಗೆ ಅನುಮತಿ ನೀಡಿತ್ತು. ಅದರಂತೆ ಸರ್ಕಾರ ಮಾ.27ರಿಂದ ಪರೀಕ್ಷೆಗೆ ವೇಳಾಪಟ್ಟಿಪ್ರಕಟಿಸಿದ ಬೆನ್ನಲ್ಲೇ ಅತ್ತ ಖಾಸಗಿ ಶಾಲೆಗಳು ಈ ವಿಚಾರವನ್ನು ಸುಪ್ರೀಂ ಕೋರ್ಟ್‌ ಮುಂದೆ ಕೊಂಡೊಯ್ದಿವೆ.