ಧಾರವಾಡದಲ್ಲಿ ಯುಪಿಎಸ್‌ಸಿ ಪರೀಕ್ಷಾರ್ಥಿ ಹಾಗೂ ದಾವಣಗೆರೆಯಲ್ಲಿ ಉದ್ಯಮಿಯ ಮಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರೂ ಯುವಕರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಧಾರವಾಡ/ದಾವಣಗೆರೆ (ಜು.9): ರಾಜ್ಯದಲ್ಲಿ ಹೃದಯಾಘಾತದಿಂದ ಉಂಟಾಗುತ್ತಿರುವ ಸಾವುಗಳ ಸಂಖ್ಯೆಯಲ್ಲಿ ಆತಂಕಕಾರಿಯಾಗಿ ಏರಿಕೆ ಕಾಣುತ್ತಿದೆ. ಮಂಗಳವಾರ ಧಾರವಾಡ ಹಾಗೂ ದಾವಣಗೆರೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವು ಕಂಡಿದ್ದಾರೆ. ಒಬ್ಬಾಕೆ ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದ ಯುವತಿಯಾಗಿದ್ದರೆ, ಇನ್ನೊಬ್ಬ ದಾವಣೆಗರೆಯ ಉದ್ಯಮಿಯ ಮಗ ಎಂದು ಗುರುತಿಸಲಾಗಿದೆ.

Add Asianetnews Kannada as a Preferred SourcegooglePreferred

26 ವರ್ಷದ ಜೀವಿತಾ ಕುಸಗೂರ ಸಾವು

ಯುಪಿಎಸ್‌ಸಿ ತಯಾರಿ ಮಾಡುತಿದ್ದ ಯುವತಿ ಹೃದಯಾಘಾತದಿಂದ ಸಾವು ಕಮಡಿರುವ ಘಟನೆ ಧಾರವಾಡ ನಗರದ ಪುರೋಹಿತ್ ನಗರದಲ್ಲಿ ನಡೆದಿದೆ. 26 ವರ್ಷದ ಜೀವಿತಾ ಕುಸಗೂರ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ತಲೆ‌ ಸುತ್ತು ಬರುತ್ತಿದೆ ಎಂದು‌ ಜೀವಿತಾ ಸುಸ್ತಾಗಿ ಕುಳಿತಿದ್ದರು. ತಕ್ಷಣವೇ ಕುಟುಂಬದವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದರು ಎನ್ನಲಾಗಿದೆ.

ಆದರೆ ಜೀವಿತಾ ಮಾರ್ಗ ಮದ್ಯದಲ್ಲೇ ಸಾವು ಕಂಡಿದ್ದಾರೆ. ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ತಿಳಿಸಿದ್ದಾರೆ. ಎಂಎಸ್ಸಿ ಅಗ್ರಿ ಮಾಡಿದ್ದ ಯುವತಿ, ಐಎಎಸ್‌ ಅಧಿಕಾರಿಯಾಗುವ ಕನಸು ಕಂಡು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು.

ಜೀವಿತಾ ಅವರ ತಂದೆ‌ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದು, ಮಗಳು ಯುಪಿಎಸ‌್‌ಸಿ ಪರೀಕ್ಷೆ ಪಾಸ್ ಆಗಲಿ‌ ಎಂದು ಕನಸು ಕಂಡು ತಯಾರಿ ಮಾಡಿಸುತ್ತಿದ್ದರು. ಆದರೆ ಹೃದಯಾಘಾತದಿಂದ ಯುವತಿ ಇಹಲೋಕ ತ್ಯಜಿಸಿದ್ದಾಳೆ.

ಕುಸಿದು ಬಿದ್ದು ಯುವಕ ಸಾವು

ದಾವಣಗೆರೆಯಲ್ಲಿಯೂ ಹೃದಯಾಘಾತ ಮರಣ ಮೃದಂಗ ಮುಂದುವರಿದಿದೆ. 22 ವರ್ಷದ‌ ಕಾಲೇಜು ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಕೆಲವೇ ಹೊತ್ತಲ್ಲಿ ಆತ ಸಾವು ಕಂಡಿದ್ದಾನೆ. ಅಕ್ಷಯ್‌, ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ. ದಾವಣಗೆರೆ ನಗರದ ಜಯನಗರ ಮನೆಯಲ್ಲಿ ಯುವಕ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣದಲ್ಲಿ ಯುವಕ ಸಾವು ಕಂಡಿದ್ದಾನೆ.