Asianet Suvarna News Asianet Suvarna News

Padma Awards: ಪದ್ಮಶ್ರೀ ಹಾಜಬ್ಬ ಸ್ವಾಗತಕ್ಕೆ ತವರಲ್ಲಿ ಜನಸಾಗರ!

*ಮಂಗಳೂರು ಏರ್‌ಪೋರ್ಟಲ್ಲಿ ಹಾರ, ತುರಾಯಿ ತಂದ ಜನ
*ತಮ್ಮ ಕಾರಿನಲ್ಲಿ ಕರೆದೊಯ್ದು ಸನ್ಮಾನಿಸಿದ ಜಿಲ್ಲಾಧಿಕಾರಿ
*ಎಲ್ಲರಿಗೂ ತಲೆಬಾಗುತ್ತೇನೆ : ಹರೇಕಳ ಹಾಜಬ್ಬ!

Padmashri Awardee Harekala Hajabba had a grand welcome in his hometown Mangaluru in Karnataka mnj
Author
Bengaluru, First Published Nov 10, 2021, 12:23 AM IST

ಮಂಗಳೂರು (ನ. 10): ದೆಹಲಿಯ ರಾಷ್ಟ್ರಪತಿ ಭವನದಲ್ಲಿ ‘ಪದ್ಮಶ್ರೀ’ (Padmashri) ಪ್ರಶಸ್ತಿ ಸ್ವೀಕರಿಸಿ ಮಂಗಳವಾರ ತವರಿಗೆ ಮರಳಿದ ಅಕ್ಷರಸಂತ ಹರೇಕಳ ಹಾಜಬ್ಬ(Harekala Hajabba)  ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಹಾಜಬ್ಬ ಅವರನ್ನು ಸ್ವಾಗತಿಸಲು ಊರಿನವರು ಹಾರ, ತುರಾಯಿಯೊಂದಿಗೆ ಸೇರಿದ್ದರು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಭಾರೀ ಸಂಖ್ಯೆಯ ಜನರನ್ನು ಕಂಡ ಹಾಜಬ್ಬ ಮುಜುಗರದಿಂದಲೇ ನನಗೆ ಯಾವುದೇ ಸನ್ಮಾನ ಬೇಡ ಎನ್ನುತ್ತ, ಎಲ್ಲರಿಗೂ ಕೈಮುಗಿಯುತ್ತಾ ತಮಗಾಗಿ ಜಿಲ್ಲಾಡಳಿತದಿಂದ ಕಳುಹಿಸಲಾಗಿದ್ದ ಕಾರು ಹತ್ತಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ (Dr. Rajendra) ಸರ್ಕ್ಯೂಟ್ ಹೌಸ್‌ನಲ್ಲಿ ಹಾಜಬ್ಬರನ್ನು ಸ್ವಾಗತಿಸಿ ತಮ್ಮ ಜತೆಯಲ್ಲೇ ಕಾರಿನಲ್ಲಿ ಡಿಸಿ ಕಚೇರಿಗೆ (DC office) ಕರೆತಂದರು. ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಎಲ್ಲರಿಗೂ ತಲೆಬಾಗುತ್ತೇನೆ

ಪದ್ಮಶ್ರೀಯಂಥ ದೊಡ್ಡ ಪ್ರಶಸ್ತಿಗೆ ನನಗೆ ಅವಕಾಶ ನೀಡಿದ್ದು ಜೀವಮಾನದಲ್ಲಿ ಎಂದೂ ಮರೆಯಲಾಗದು. ನನ್ನನ್ನು ಈ ಹಂತಕ್ಕೆ ಬೆಳೆಸಿದ ಎಲ್ಲರಿಗೂ ತಲೆಬಾಗುತ್ತೇನೆ ಎಂದು ಅಕ್ಷರಸಂತ ಹರೇಕಳ ಹಾಜಬ್ಬ ಅವರು ಭಾವುಕರಾಗಿ ನುಡಿದರು. ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ 130 ಕೋಟಿ ಜನರಲ್ಲಿ ನಾನೊಬ್ಬ ಸಾಮಾನ್ಯ ಮನುಷ್ಯ. ಬಡತನದಲ್ಲಿ ಬೆಳೆದವನು. ಕಿತ್ತಳೆ ಹಣ್ಣು ಸಾಲ ಪಡೆದು ಮಾರಿದ ವ್ಯಕ್ತಿಗೆ ಇಂತಹ ಅತ್ಯುನ್ನತ ಪ್ರಶಸ್ತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲರಿಗೂ ನಾನು ಶಿರಬಾಗಿ ನಮಿಸುತ್ತೇನೆ ಎಂದು ಪುನರುಚ್ಚರಿಸಿದರು.

ಪಿಯು ಕಾಲೇಜಿಗೆ 1 ಕೋಟಿ ನೀಡಿ-ನಿರ್ಮಲಾಗೆ ಮನವಿ

ಪ್ರಶಸ್ತಿ ಪ್ರದಾನ ಬಳಿಕ ನಡೆದ ಚಹಾ ಕೂಟದ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala sitaraman) ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಅವರಿಗೆ ಕನ್ನಡ ಬರುವುದರಿಂದ ಹರೇಕಳದಲ್ಲಿ ಪಿಯು ಕಾಲೇಜು ಕಟ್ಟಲು ಒಂದು ಕೋಟಿ ರು. ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಹಾಜಬ್ಬ ಸುದ್ದಿಗಾರರಿಗೆ ತಿಳಿಸಿದರು.

ಕನ್ನಡಪ್ರಭ ನನ್ನನ್ನು ಮೊದಲು ಗುರುತಿಸಿತು : ಪದ್ಮಶ್ರೀ ಪುರಸ್ಕೃತ ಹಾಜಬ್ಬ

ದಕ್ಷಿಣ ಕನ್ನಡ (Dakshina Kannada) ಜಿಲ್ಲಾಡಳಿತ ವತಿಯಿಂದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮಂಗಳೂರಿನಲ್ಲಿ ಸನ್ಮಾನಿಸಿದರು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಬೇಕಾದ ಸಂದರ್ಭ ಜಿಲ್ಲಾಧಿಕಾರಿ ಅವರು ಮುಂಜಾನೆ 5 ಗಂಟೆಗೆ ಕಾರು ಕಳುಹಿಸಿ, ದೆಹಲಿಯಿಂದ (Delhi) ಹಿಂತಿರುಗುವರೆಗೂ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಸಾಮಾನ್ಯ ಬಡ ವ್ಯಕ್ತಿಯೊಬ್ಬನನ್ನು ಈ ಜಿಲ್ಲೆಯಿಂದ ದೇಶದ ರಾಜಧಾನಿಯ ರಾಷ್ಟ್ರಪತಿ ಭವನಕ್ಕೆ ಕಳುಹಿಸಲು ಸಹಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿಯ ಸಹಕಾರವನ್ನು ಸ್ಮರಿಸಿದರು.

ಸಮಸ್ಯೆ ಹೇಳದ ಹಾಜಬ್ಬ 

ಸರ್ಕಾರದಿಂದ ನಿಮಗೇನಾದರೂ ಸಹಾಯದ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ಪದ್ಮಶ್ರೀಗಿಂತ ದೊಡ್ಡ ಆಸ್ತಿ ಬೇರೆ ಏನಿದೆ ಎನ್ನುತ್ತ ತಮ್ಮ ವೈಯಕ್ತಿಕ ಸಮಸ್ಯೆಗಳ್ಯಾವುದನ್ನೂ ಹೇಳಿಕೊಳ್ಳದೆ ಹಾಜಬ್ಬ ದೊಡ್ಡತನ ಮೆರೆದರು. ಹರೇಕಳದಲ್ಲಿ ಪಿಯು ಶಾಲೆ ಸ್ಥಾಪಿಸುವ ಬೇಡಿಕೆ ಯಾವತ್ತೂ ಇದೆ. ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಕನ್ನಡಪ್ರಭ ನನ್ನನ್ನು ಮೊದಲು ಗುರುತಿಸಿತು 

ನನ್ನ ಕಡೆಯಿಂದ ಕನ್ನಡಪ್ರಭಕ್ಕೆ (Kannadaprabha) ಅಭಿನಂದನೆಗಳು. ಕನ್ನಡಪ್ರಭ ಪತ್ರಿಕೆ ನನ್ನನ್ನು ಮೊದಲು ಗುರುತಿಸಿತು. ಕನ್ನಡಪ್ರಭದವರು ಲೋಕಕ್ಕೆ ತೋರಿಸಿದರು. ನನ್ನನ್ನು ವರ್ಷದ ವ್ಯಕ್ತಿಯಾಗಿ ಮಾಡಿದರು. ನಾನು ಈಗಲೂ ಕೂಡ ಪತ್ರಿಕೆಗೆ ಋುಣಿ’-ಇದು ಸೋಮವಾರ ರಾಷ್ಟ್ರಪತಿಯಿಂದ ಪ್ರತಿಷ್ಠಿತ ಪದ್ಮ ಪ್ರಶಸ್ತಿ (padma Shri) ಸ್ವೀಕರಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ (Harekala hajabba) ಅವರ ಮನದಾಳದ ಮಾತು.

ರಾಷ್ಟ್ರಪತಿ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಜೋಗತಿ ಮಂಜಮ್ಮ, ವೈರಲ್ ಆಯ್ತು ವಿಶೇಷ ಘಟನೆ!

ನನ್ನ ಜೀವಮಾನದಲ್ಲೇ ಇಂಥ ಕನಸು ಕಂಡವನಲ್ಲ. ಒಬ್ಬ ಸಾಮಾನ್ಯನಿಗೆ ದೇಶದ ಉನ್ನತ ಪ್ರಶಸ್ತಿ ಕೊಟ್ಟಿದ್ದು ಬಹಳ ಸಂತಸ ತಂದಿದೆ. ನನ್ನ ಈ ಪಯಣದಲ್ಲಿ ಹಲವರು ಬೆನ್ನಿಗೆ ನಿಂತಿದ್ದರು. ಅವರನ್ನು ನಾನು ಆಗ ನೆನಪು ಮಾಡಿಕೊಂಡೆ ಎಂದು ಹೇಳಿದರು.

Follow Us:
Download App:
  • android
  • ios