Asianet Suvarna News Asianet Suvarna News

ಲವರ್‌ಗಾಗಿ ಪ್ರಿಯತಮೆ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದ ಯುವಕನನ್ನು ಕೊಂದ ಯುವತಿ ಮನೆಯವರು..!

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದ ಘಟನೆ 

Young Man Killed after Minor Girl Committed Suicide in Vijayapura grg
Author
First Published Oct 15, 2022, 10:53 AM IST

ವಿಜಯಪುರ(ಅ.15): ಬಸ್‌ನಲ್ಲಿ ಶುರುವಾದ ಪ್ರೀತಿ ಸಾವಿನೊಂದಿಗೆ ಅಂತ್ಯವಾಗಿದೆ. ಪ್ರಿಯಕರನಿಗಾಗಿ ಅಪ್ತಾಪ್ತ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರೆ ಇದರಿಂದ ರೊಚ್ಚಿಗೆದ್ದ ಯುವತಿ ತಂದೆ ಅದೇ ವಿಷವನ್ನ ಪ್ರಿಯಕರನಿಗೆ ಕುಡಿಸಿ ಕೊಲೆ ಮಾಡಿದ್ದಾನೆ. ಈ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿರೋದು ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಘೋಣಸಗಿ ಗ್ರಾಮ. 

ಕುರುಡು ಪ್ರೀತಿಗಾಗಿ ಅಪ್ರಾಪ್ತೆ ಸೂಸೈಡ್, ಯುವಕನ ಕೊಲೆ 

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಯುವಕ ಮಲ್ಲಿಕಾರ್ಜುನ ಭೀಮಣ್ಣ ಜಮಖಂಡಿ ಅದೇ ಗ್ರಾಮದ ಅಪ್ರಾಪ್ತೆಯನ್ನ ಪ್ರೀತಿ ಮಾಡುತ್ತಿದ್ದ. ಈ ವಿಚಾರ ಅಪ್ರಾಪ್ತೆ ಮನೆಯಲ್ಲಿ ಗೊತ್ತಾಗಿ ಪ್ರೀತಿಯನ್ನ ಇಲ್ಲಿಗೆ ನಿಲ್ಲಿಸುವಂತೆ ತಾಕೀತು ಮಾಡಿದ್ರು. ಇದರಿಂದ ನೊಂದ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನ ಕಣ್ಣಾರೆ ಕಂಡ ಅಪ್ರಾಪ್ತೆ ತಂದೆ ಗುರಪ್ಪ‌‌ ಗಿಡ್ಡನವರ್ ಅದೇ ವಿಷವನ್ನ ಯುವಕ ಮಲ್ಲುಗೆ ಕುಡಿಸಿ ಕೊಲೆ ಮಾಡಿದ್ದಾನೆ. ನಂತರ ಎರಡೂ ಶವಗಳನ್ನ ಕೃಷ್ಣಾ ನದಿಗೆ ಬಿಸಾಕಿ ಬಂದಿದ್ದಾನೆ. 

ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿದ ಭಗ್ನಪ್ರೇಮಿ: ಕಾಲೇಜು ವಿದ್ಯಾರ್ಥಿನಿ ಸಾವು  

ಏಕಾಂತದಲ್ಲಿದ್ದಾಗಲೇ ಸಿಕ್ಕಿಬಿದ್ದ ಇಬ್ಬರು 

ಕೊಲೆ ನಡೆಯುವ ದಿನ ಇಬ್ಬರು ಒಂದೇ ಮನೆಯಲ್ಲಿ ಏಕಾಂತದಲ್ಲಿ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ತಂದೆ ಗುರಪ್ಪ ತಿಳಿ ಹೇಳುವ ಕೆಲಸ ಕೂಡ ಮಾಡಿದ್ದನಂತೆ. ಆದ್ರೆ ಇದೆ ವೇಳೆ ಹಠ ಮಾಡಿದ ಅಪ್ರಾಪ್ತ ಮಗಳು ಅಲ್ಲೆ ಮೊದಲೆ ತಂದು ಇಟ್ಟುಕೊಂಡಿದ್ದ ವಿಷವನ್ನ ಸೇವನೆ ಮಾಡಿ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ. ಬಳಿಕ ಸಿಟ್ಟಿಗೆದ್ದ ಆಕೆ ತಂದೆ ಅಲ್ಲಿ ಉಳಿದಿದ್ದ ವಿಷವನ್ನ ಪ್ರಿಯಕರ ಮಲ್ಲುಗೆ ಕುಡಿಸಿ ಕೊಂದು ಯಾರಿಗೂ ಗೊತ್ತಾಗದಂತೆ ಇಬ್ಬರನ್ನು ಕೃಷ್ಣಾ ನದಿ ಪಾಲು ಮಾಡಿದ್ದಾನೆ ಎನ್ನಲಾಗಿದೆ. 

ಬೀಳಗಿ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕ ಯುವಕನ ಶವ ಪತ್ತೆ 

ಇಬ್ಬರ ಶವಗಳನ್ನ ಚೀಲವೊಂದರಲ್ಲಿ ಕಟ್ಟಿ ಕೃಷ್ಣಾನದಿಗೆ ಬಿಸಾಡಿದ್ದರು. ಬಳಿಕ ಅ. 10 ನೆರೆಯ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹದರಿಹಾಳ ಗ್ರಾಮದ ಬಳಿಯ ಕೃಷ್ಣಾ ನದಿಯ ತಟದಲ್ಲಿ ಮೂಟೆಯಲ್ಲಿ ಶವವೊಂದು ಸಿಕ್ಕಿತ್ತು. ಅದನ್ನು ತೆರೆದು ನೋಡಿದ ಬೀಳಗಿ ಪೊಲೀಸರು ಶವ ಯಾರದ್ದೆಂದು ಕಂಡು ಹಿಡಿಯಲು ಮುಂದಾಗಿದ್ದರು. ಶವ ಬಹುತೇಕ ಕೊಳೆತು ಹೋಗಿತ್ತು. ಶವದ ಮೇಲಿದ್ದ ಟೀ ಶರ್ಟ್ ಮೇಲಿದ್ದ ಸೈನಿಕ ತರಬೇತಿ ಶಾಲೆಯ ಸೀಲ್ ನೋಡಿ ತರಬೇತಿ ಶಾಲೆಯ ಮುಖಸ್ಥರಿಗೆ ಕರೆ ಮಾಡಿದ್ದಾರೆ. ಆಗ ವಿಚಾರ ಮಾಡಿದಾಗ ಕಾಣೆಯಾದ ಮಲ್ಲಿಕಾರ್ಜುನ ಜಮಖಂಡಿ ಶವವೆಂದು ಗುರುತಿಸಿದ್ದಾರೆ. ಶವದ ಮೈಮೇಲಿದ್ದ ಬಟ್ಟೆ, ಕೈಲಿದ್ದ ವಾಚ್ ಹಾಗೂ ಇತರ ವಸ್ತುಗಳನ್ನು ನೋಡಿದ ಬಾಲಕ ಪೋಷಕರು ಇದು ಮಲ್ಲು ಶವವೆಂದು ಕಂಡು ಹಿಡಿದಿದ್ದಾರೆ. ಬಾಲಕಿಯ ಜೊತೆಗೆ  ಮನೆಯ ಬಿಟ್ಟು ಓಡಿ ಹೋಗಿದ್ದನೆಂದು ತಿಳಿದುಕೊಂಡಿದ್ದ ಎಲ್ಲರಿಗೂ ಬಾಲಕನ ಶವ ಸಿಕ್ಕ ಬಳಿಕ ಶಾಕ್ ಆಗಿತ್ತು.  ನಮ್ಮ ಮಗನನ್ನು ಕೊಲೆ ಮಾಡಿ ನದಿಗೆ ಬಿಸಾಡಿದ್ದು ಬಾಲಕಿಯ ಮನೆಯವರು ಎಂದು ಮೃತ ಬಾಲಕನ ಪೋಷಕರು ಆರೋಪ ಮಾಡಿದ್ದಾರೆ. ಇತ್ತ ಅಪ್ರಾಪ್ತೆಯ ಶವ ಇನ್ನು ಪತ್ತೆಯಾಗಿಲ್ಲ.

ಓಡಿ ಹೋಗಲು ರೆಡಿಯಾಗಿದ್ದ ಅಪ್ರಾಪ್ತೆ ಹಾಗೂ ಯುವಕ 

ಈ ಕೊಲೆಗೂ ಮುನ್ನ ಅಪ್ರಾಪ್ತೆ ಹಾಗೂ ಯುವಕ ಓಡಿ ಹೋಗಲು ರೆಡಿಯಾಗಿದ್ದರು ಎನ್ನಲಾಗಿದೆ. ಅದೆ ವಿಚಾರವಾಗಿ ಏಕಾಂತದಲ್ಲಿ ಇಬ್ಬರು ಅಪ್ರಾಪ್ತೆಯ ಮನೆಯಲ್ಲೇ ಸೇರಿದ್ದರು. ಈ ವೇಳೆ ತಂದೆಯಲ್ಲಿ‌ ಸಿಕ್ಕಿಹಾಕಿಕೊಂಡಾಗಲೇ ಈ ಘಟನೆ ನಡೆದಿದೆ.

ಬಸ್‌ನಲ್ಲೇ ಇಬ್ಬರಿಗೂ ಪ್ರೇಮಾಂಕುರ 

ಮಲ್ಲಿಕಾರ್ಜುನ ವಿಜಯಪುರದಲ್ಲಿ ಕಾಲೇಜು ಪಿಯು ಓದುತ್ತಿದ್ದ. ನಿತ್ಯ ಬಸ್ ನಲ್ಲಿ ಕಾಲೇಜಿಗೆ ಹೋಗಿ ಬರೋವಾಗ ಈತನಿಗೆ ಪಿಯುಸಿ ಓದುತ್ತಿರುವ ಬಾಲಕಿ ಪರಿಚಯವಾಗಿದೆ. ಪರಿಚಯವಾಗಿ ಅದು ಪ್ರೀತಿಗೆ ತಿರುಗಿದೆ. ಕಾಲೇಜಿಗೆ ಹೋಗುವ ನೆಪದಲ್ಲಿ ವಿಜಯಪುರ ನಗರದಲ್ಲಿ ಇಬ್ಬರೂ ತಿರುಗಾಡಿದ್ದರಂತೆ. ಸಾಕಷ್ಟು ಪೋಟೋಗಳನ್ನು ಇಬ್ಬರು ತೆಗೆಸಿಕೊಂಡಿದ್ದಾರೆ. ಆ ಪೋಟೊಗಳು ಈಗ ವೈರಲ್ ಆಗ್ತಿವೆ. 

ಬೆಂಗಳೂರು: ಮನೆ ತೊರೆಯಲೊಪ್ಪದ ಅತ್ತೆಯ ತಲೆ ಗೋಡೆಗೆ ಡಿಕ್ಕಿ ಹೊಡೆಸಿ ಕೊಂದ ಸೊಸೆ..!

ಇಬ್ಬರ ಪ್ರೀತಿಯ ಗುಟ್ಟು ಮನೆಯವರೆದುರು ರಟ್ಟು

ಇಬ್ಬರ ಪ್ರೀತಿಯ ವಿಚಾರ ಬಾಲಕಿ ಮನೆಯವರಿಗೆ ಗೊತ್ತಾಗಿ ಗ್ರಾಮದ ಹಿರಿಯರ ಮೂಲಕ ನ್ಯಾಯ ಪಂಚಾಯತಿಯೂ ಆಗಿತ್ತಂತೆ. ಕಾರಣ ಬಾಲಕನನ್ನು ಆತನ ಪೋಷಕರು ಮಿಲಿಟರಿ ತರಬೇತಿಗೆ ಬಾಗಲಕೋಟೆಯ ಬನಹಟ್ಟಿಯಲ್ಲಿನ ತರಬೇತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಬಾಲಕಿಯ ಉಸಾಬರಿಗೆ ಹೋಗಬೇಡವೆಂದು ತಿದ್ದಿ ಬುದ್ದಿ ಹೇಳಿದ್ದರಂತೆ. ಇಷ್ಟಾದರೂ ಅಪ್ರಾಪ್ತ ಪ್ರೇಮಿಗಳು ಮೊಬೈಲ್‌ನಲ್ಲಿ ಕಾಂಟ್ಯಾಕ್ಟ್ ಇದ್ದರಂತೆ.  ಕೊನೆಗೆ ಬಾಲಕಿಯ ತಂದೆ ಗುರಪ್ಪ ಗಿಡ್ಡನ್ನವರ ನಮ್ಮ ಮಗಳು ಪ್ರೇಮಿಸಿದವನ ಜೊತೆಗೆ ಮದುವೆಯನ್ನೂ ಮಾಡೋದಾಗಿ ಹೇಳಿದ್ದನಂತೆ. ಮಿಟಲಿರಿ ತರಬೇತಿಗೆ ಹೋಗಿದ್ದ ಮಲ್ಲಿಕಾರ್ಜುನ ಜಮಖಂಡಿ ಬಿಎ ಸೆಮಿಸ್ಟರ್ ಪರೀಕ್ಷೆ ಬರೆಯಲು ತನ್ನೂರಿಗೆ ಬಂದಿದ್ದಾನೆ. ಅದು ಸ. 22 ರ ರಾತ್ರಿ ಬೈಕ್ ಸಮೇತ ಮನೆಯಿಂದ ರಾತ್ರಿ ಹೋದವ ನಂತರ ಪತ್ತೆಯೇ ಆಗಿರಲಿಲ್ಲ. ಇತ್ತ ಬಾಲಕಿಯೂ ಸಹ ಆಕೆಯ ಮನೆಯಿಂದ ನಾಪತ್ತೆಯಾಗಿದ್ದಾಳೆ. ಇಬ್ಬರೂ ಎಲ್ಲಿಯೋ ಓಡಿ ಹೋಗಿದ್ದಾರೆಂದು ಎರಡೂ ಮನೆಯವರು ತಿಳಿದುಕೊಂಡಿದ್ದಾರೆ. ಜೊತೆಗೆ ಬಾಲಕಿಯ ಪೋಷಕರು ನಮ್ಮ ಮಗಳನ್ನು ಮಲ್ಲಿಕಾರ್ಜುನ ಜಮಖಂಡಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆಂದು ದೂರು ನೀಡಿದ್ದಾರೆ. ಬಾಲಕ ಮಲ್ಲಿಕಾರ್ಜುನ ಮನೆಯವರು ನಮ್ಮ ಮಗಾ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾರೆ. ಬಳಿಕ ಈ ಸುಸೈಡ್ ಹಾಗೂ ಮರ್ಡರ್ ಪ್ರಕರಣ ಬಯಲಾಗಿದೆ.

ಕೊಲೆಯ ಬಗ್ಗೆ ಬಾಯ್ಬಿಟ್ಟ ಅಪ್ರಾಪ್ತೆ ತಂದೆ

ಸಧ್ಯ ಬೀಳಗಿ ಪೊಲೀಸರ ಎದುರಿಗೆ ಯುವಕನನ್ನ ವಿಷ ಕುಡಿಸಿ ಕೊಲೆ ಮಾಡಿ ಕೃಷ್ಣಾ ನದಿಯಲ್ಲಿ ಬಿಸಾಕಿದ್ದಾಗಿ ಬಾಲಕಿಯ ತಂದೆ ಗುರಪ್ಪ ಬಾಯಿ ಬಿಟ್ಟಿದ್ದಾನೆ. ಇತ್ತ ಬಾಲಕಿ ಶವವನ್ನು ಅಲ್ಲೇ ಬಿಸಾಕಿರುವ ಮಾಹಿತಿ ನೀಡಿದ್ದಾರೆ. ಆದ್ರೆ ಯುವಕನ ಶವ ಮಾತ್ರ ಸಿಕ್ಕಿದ್ದು ಕೊಲೆ ಮಾಡಿದ್ದು ಸಾಭೀತಾದದಂತಾಗಿದೆ. ಇತ್ತ ಅಪ್ರಾಪ್ತ ಬಾಲಕಿ ಶವ ಪತ್ತೆಯಾಗಿಲ್ಲ. ಬಾಲಕಿಯ ಕೊಲೆ ಮಾಡಿದ್ದಾರೋ ಇಲ್ಲವೋ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರ ತನಿಖೆ ಮುಂದುವರೆದಿದೆ.

Follow Us:
Download App:
  • android
  • ios