ಪ್ರೇಮ ಪ್ರಕರಣದ ಹಿನ್ನೆಲೆ ಯುವಕನನ್ನು ಸುಟ್ಟು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತೊಗರ್ಸಿ ಹೊರವಲಯದ ಸ್ಮಶಾನದ ಬಳಿ ನಡೆದಿದೆ. 

ಶಿವಮೊಗ್ಗ(ಮಾ.17): ಪ್ರೇಮ ಪ್ರಕರಣದ ಹಿನ್ನೆಲೆ ಯುವಕನನ್ನು ಸುಟ್ಟು ಕೊಲೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ತೊಗರ್ಸಿ ಹೊರವಲಯದ ಸ್ಮಶಾನದ ಬಳಿ ನಡೆದಿದೆ. ಶಿವಮೊಗ್ಗ ನಗರದ ಗಾಡಿಕೊಪ್ಪದ ವೀರೇಶ್ ಕೊಲೆಯಾದ ಯುವಕ. ಶಿಕಾರಿಪುರ ತಾಲೂಕಿನ ಯುವತಿ ಅಂಕಿತ ಎಂಬವರನ್ನು ವೀರೇಶ್ ಪ್ರೀತಿಸುತ್ತಿದ್ದ. ಇಬ್ಬರು ಒಂದೇ ಜಾತಿಯವರಾಗಿದ್ದು, ಹತ್ತಿರದ ಸಂಬಂಧಿಕರು ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಶಿವಮೊಗ್ಗದಲ್ಲಿ ಪಿ.ಜಿ.ಯಲ್ಲಿದ್ದು ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಂಕಿತ ಹಾಗೂ ವೀರೇಶ್‌ ಇಬ್ಬರೂ ಪ್ರೀತಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಯುವತಿಯ ಸಹೋದರ ಪ್ರವೀಣ್ ಮತ್ತಿತರರು ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ವೀರೇಶ್ ಮನೆಗೆ ಶುಕ್ರವಾರ ಬಂದು ಸಹೋದರಿ ಅಂಕಿತ ಜೊತೆಗೆ ಮದುವೆ ಮಾಡುವುದಾಗಿ ಹೇಳಿದ್ದರು. ಬಳಿಕ ವೀರೇಶ್ ಮೊಬೈಲ್‌ನಲ್ಲಿದ್ದ ಫೋಟೋ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ.

ಫ್ಲೆಕ್ಸ್ ವಿಚಾರಕ್ಕೆ ಗಲಾಟೆ, ಮೈಸೂರಿನಲ್ಲಿ ಮುಸ್ಲಿಂ ಧರ್ಮಗುರು ಬರ್ಬರ ಹತ್ಯೆ!

ಯುವತಿ ಅಂಕಿತ ಸಂಬಂಧಿಕರ ಮಾತಿನಂತೆ ವೀರೇಶ್ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾನೆ. ನಂತರ ತಡರಾತ್ರಿ 10 ಗಂಟೆ ವೇಳೆಗೆ ಯುವಕನನ್ನು ಪುಸಲಾಯಿಸಿದ ಅಣ್ಣ ಪ್ರವೀಣ್‌, ಅಂಕಿತ ಅಳುತ್ತಿದ್ದಾಳೆ, ಮನೆಗೆ ಬಾ ಎಂದು ಹೇಳಿ, ಬರುವಂತೆ ತಿಳಿಸಿದ್ದಾನೆ.

ಆಗ ಅಂಕಿತ ಅವರ ಸಹೋದರ ಪ್ರವೀಣ್‌ ಕರೆದ ಹಿನ್ನೆಲೆ ವೀರೇಶ್ ತೊಗರ್ಸಿಗೆ ಸ್ನೇಹಿತನ ಇನ್ನೋವಾ ಕಾರಿನಲ್ಲಿ ತೆರಳಿದ್ದ. ಬಳಿಕ ರಾತ್ರಿ ಮನೆಗೆ ಹಿಂದಿರುಗಿರಲಿಲ್ಲ. ಆದರೆ, ಶನಿವಾರ ಬೆಳಗ್ಗೆ ಕಾರಿನಲ್ಲಿ ದಹನವಾಗಿರುವುದು ಪತ್ತೆಯಾಗಿದೆ. ಕಿಡಿಗೇಡಿಗಳು ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವೀರೇಶ್‌ ಶವ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸಂಬಂಧ ವೀರೇಶ್ ತಾಯಿ ಮಹಾದೇವಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.