ಕೊಪ್ಪಳದಲ್ಲಿ ಪತಿಯನ್ನು ಹತ್ಯೆಗೈದು ಸುಟ್ಟುಹಾಕಿದ ಪತ್ನಿ ಪ್ರಿಯಕರನೊಂದಿಗೆ ಬಂಧನಕ್ಕೊಳಗಾಗಿದ್ದಾಳೆ. ನಾಗರ ಪಂಚಮಿ ಆಚರಣೆಯ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತದೇಹ ಗುರುತಿಸಲು ಪೊಲೀಸರಿಗೆ ಸವಾಲಾಗಿತ್ತು.

ಕೊಪ್ಪಳ (ಆ.2): ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಸುಟ್ಟು ಹಾಕಿದ ಪತ್ನಿ ಕುಟುಂಬದೊಂದಿಗೆ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಿದ ಘಟನೆ ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಕನಪಳ್ಳಿ ಹೊರವಲಯದ ಬೂದಗುಂಪಾ ಗ್ರಾಮದ ನಿವಾಸಿ ದ್ಯಾಮಣ್ಣ ಧರ್ಮಪ್ಪ ವಜ್ರಬಂಡಿ (38) ಹತ್ಯೆಯಾದ ವ್ಯಕ್ತಿ. ಮೃತನ ಪತ್ನಿ ನೇತ್ರಾವತಿ ವಜ್ರಬಂಡಿ ಹಾಗೂ ಅವಳ ಪ್ರಿಯಕರ ಕಾಮನೂರು ಗ್ರಾಮದ ಸೋಮಪ್ಪ ಕುರುಬಡಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗಿ 14 ವರ್ಷವಾಗಿದ್ದರೂ ಹಳೆಯ ಪ್ರಿಯಕರನೊಂದಿಗೆ ನೇತ್ರಾವತಿ ಸಂಪರ್ಕದಲ್ಲಿ ಇದ್ದಳು. ಜು.25ರಂದು ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದಿದ್ದ ನೇತ್ರಾವತಿ ಮನೆಯಲ್ಲಿ ಎಲ್ಲರೊಂದಿಗೆ ಪಂಚಮಿ ಆಚರಿಸಿದ್ದರಲ್ಲದೆ ತನಗೇನು ಗೊತ್ತೇ ಇಲ್ಲ ಎನ್ನುವಂತೆ ಇದ್ದಳು. ತನ್ನ ಪತಿಯ ಮಾಹಿತಿ ಕೇಳಿದರೆ ಅವರು ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳುತ್ತಿದ್ದಳು. ವಾರ ಕಳೆದರೂ ಬಾರದೆ ಇದ್ದಾಗ ಅನುಮಾನಗೊಂಡು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ತಿಳಿಸಿದ್ದಾರೆ.

ಗುರುತು ಸಿಗದ ಶವ:

ಮೃತದೇಹವನ್ನು ಪೂರ್ಣ ಸುಟ್ಟು ಹಾಕಿದ್ದರಿಂದ ಆರಂಭದಲ್ಲಿ ಶವದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆಗ ಅನಾಮಧೇಯ ಶವವೆಂದು ಪರಿಗಣಿಸಿ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಮಾಹಿತಿ ಕಲೆಹಾಕಲು ಪೊಲೀಸರು ಸುತ್ತಮುತ್ತಲ ಜಿಲ್ಲೆಯಲ್ಲಿಯೂ ತಡಕಾಡಿದ್ದರು.