ಉತ್ತರ ಪ್ರದೇಶದ ಹಾಪುರದಲ್ಲಿ, ಆಭರಣ ಅಂಗಡಿಗೆ ಬಂದ ಯುವತಿಯೊಬ್ಬಳು ನೀರೆಂದು ತಿಳಿದು ಆ್ಯಸಿಡ್ ಕುಡಿದಿದ್ದಾಳೆ. ಪಕ್ಕದ ಅಂಗಡಿಯವನು ತಪ್ಪಾಗಿ ನೀಡಿದ ಬಾಟಲಿಯಿಂದ ಈ ದುರ್ಘಟನೆ ಸಂಭವಿಸಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿನ್ನಾಭರಣ ಅಂಗಡಿಯೊಂದಕ್ಕೆ ತಾಯಿಯ ಜೊತೆ ಬಂದಿದ್ದ ಯುವತಿಯೊಬ್ಬಳು ನೀರಿನ ಬಾಟಲಿಯಲ್ಲಿ ಇದ್ದದ್ದು ನೀರೆಂದು ತಿಳಿದು ಕುಡಿದರೆ ಅದು ಆ್ಯಸಿಡ್​ ಆಗಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ. ಕೂಡಲೇ ಆಕೆ ಅದನ್ನುಉಗುಳಿದ್ದು, ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಆ್ಯಸಿಡ್​ ಕುಡಿದ ಯುವತಿ

ತಾಯಿಯ ಜೊತೆ ಯುವತಿ, ಅರ್ಜುನ್ ನಗರ ಪ್ರದೇಶದಲ್ಲಿ ಆಭರಣ ಖರೀದಿಸಲು ಹೋಗಿದ್ದರು. ಬಾಯಾರಿಕೆಯಾಗಿ ಅಂಗಡಿಯಲ್ಲಿ ನೀರು ಕೇಳಿದರು. ಅಲ್ಲಿ ನೀರು ಇರಲಿಲ್ಲ. ಆಗ ಅಂಗಡಿಯವ ಪಕ್ಕದ ಅಂಗಡಿಯವರ ಬಳಿ ಕೇಳಿ ನೀರಿನ ಬಾಟಲಿ ತಂದಿದ್ದಾನೆ. ಆದರೆ ಅವರು ನೀರಿನ ಬಾಟಲಿ ಕೊಡುವ ಬದಲು ಆ್ಯಸಿಡ್​ ಬಾಟಲಿ ಕೊಟ್ಟಿದ್ದಾರೆ. ಅದರ ಅರಿವೇ ಇಲ್ಲದ ಆಭರಣ ಅಂಗಡಿಯವ ಯುವತಿಗೆ ಅದನ್ನು ನೀಡಿದ್ದಾನೆ. ಯುವತಿಯೂ ಅದನ್ನು ಕುಡಿದಿದ್ದಾರೆ. ಮೇಲಿನಿಂದ ನೀರು ಸ್ವಲ್ಪ ಕುಡಿಯುತ್ತಲೇ ಅದು ನೀರಲ್ಲ ಎಂದು ಗೊತ್ತಾಗಿ, ವಾಂತಿ ಮಾಡಿಕೊಂಡಿದ್ದಾಳೆ.

ಕೂಡಲೇ ನೋವಿನಿಂದ ಚೀರಿದ್ದಾಳೆ. ಅಲ್ಲಿಯೇ ಬಿದ್ದಾಗ ಅಲ್ಲಿ ಇದ್ದವರಿಗೆ ಏನು ಆಯಿತೆಂದು ತಿಳಿಯಲಿಲ್ಲ. ಕೂಡಲೇ ಎಲ್ಲರೂ ಸೇರಿ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಸ್ಥಿತಿ ಗಂಭೀರ ಇರುವ ಹಿನ್ನೆಲೆಯಲ್ಲಿ, ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡುವಂತೆ ಹೇಳಲಾಯಿತು. ಸದ್ಯ ಯುವತಿಯ ಸ್ಥಿತಿ ಸುಧಾರಿಸಿದೆ.

ಪೊಲೀಸರಿಂದ ತನಿಖೆ

ಪೊಲೀಸರು ಸಿಹಿ ಅಂಗಡಿ ಮಾಲೀಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಂಗಡಿಯವನು ತಾನು ಫ್ರಿಜ್​ನಲ್ಲಿ ಇದ್ದ ಬಾಟಲಿಯನ್ನು ಕೊಟ್ಟಿದ್ದೇನೆ. ಅದು ಸೀಲ್​ ಬಾಟಲಿ. ಅದನ್ನೇ ನೀರು ಎಂದು ನೇರವಾಗಿ ಕೊಟ್ಟೆ. ಅದರಲ್ಲಿ ಆ್ಯಸಿಡ್​ ಇದ್ದದ್ದು ಗೊತ್ತಿರಲಿಲ್ಲ. ನನ್ನ ತಪ್ಪೇನೂ ಇಲ್ಲ ಎಂದಿದ್ದಾನೆ. ಪೊಲೀಸರು ಅಂಗಡಿಯಿಂದ ಕೆಲವು ಬಾಟಲಿಗಳ ಆಸಿಡ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.