ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪ್ರೇಮಿಗಳ ವಿಚಾರವಾಗಿ ನಡೆದ ಜಗಳವು ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಸ್ಥಳೀಯರಾದ ಮಂಜುನಾಥ್ ಮತ್ತು ಕಿರಣ್ ಎಂಬುವವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. 

ಶಿವಮೊಗ್ಗ(ಡಿ.12): ಪ್ರೇಮಿಗಳ ವಿಚಾರದಲ್ಲಿ ನಡೆದ ಜಗಳ ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ. ಮಂಜುನಾಥ್ (64) ಮತ್ತು ಕಿರಣ್ (26) ಮೃತಪಟ್ಟ ದುರ್ದೈವಿಗಳು.

Add Asianetnews Kannada as a Preferred SourcegooglePreferred

ಪ್ರೇಮಿಗಳ ವಿಚಾರವೇ ಜಗಳಕ್ಕೆ ಕಾರಣ

ಘಟನೆಗೆ ಮೂಲ ಕಾರಣ ಪ್ರೇಮಿಗಳ ನಡುವಿನ ವೈಯಕ್ತಿಕ ವಿಚಾರ. ಎರಡು ದಿನಗಳ ಹಿಂದೆ ನಂದೀಶ್ ಮತ್ತು ಸೃಷ್ಟಿ ಎಂಬ ಯುವಕ-ಯುವತಿ ಓಡಿ ಹೋಗಿದ್ದರು. ಇಂದು ಸಂಜೆ ಅವರು ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಸೃಷ್ಟಿ, ತಾನು ತನ್ನ ಪ್ರಿಯಕರ ನಂದೀಶ್‌ನೊಂದಿಗೆ ಹೋಗುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು.

ಪ್ರೇಮಿಗಳ ಠಾಣೆಗೆ ಬಂದ ವೇಳೆ ಮಾರಾಮಾರಿ

ಈ ಸಂದರ್ಭದಲ್ಲಿ ಯುವತಿ ಸೃಷ್ಟಿಯ ಸಹೋದರ ಹಾಗೂ ಆತನ ಸ್ನೇಹಿತರಾದ ಶಶಿ, ಸಂಡು, ಕೆಂಚ, ಸುರೇಶ್ ಸೇರಿದಂತೆ ಇತರರು ಸೇರಿ ತಕರಾರು ತೆಗೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಅದು ಮಾರಾಮಾರಿಯಾಗಿ ಪರಿವರ್ತನೆಯಾಗಿದೆ.

ಜಗಳ ಬಿಡಿಸಲು ಹೋದ ಇಬ್ಬರ ಸಾವು

ಗುಂಪುಗಳ ನಡುವೆ ನಡೆದ ಈ ಜಗಳವನ್ನು ಬಿಡಿಸಲು ಸ್ಥಳೀಯರಾದ ಮಂಜುನಾಥ್ (64) ಮತ್ತು ಕಿರಣ್ (26) ಅವರು ಮಧ್ಯಪ್ರವೇಶಿಸಿದ್ದಾರೆ. ದುಷ್ಕರ್ಮಿಗಳು ಜಗಳ ಬಿಡಿಸಲು ಬಂದ ಈ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಮತ್ತು ಕಿರಣ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಈ ಘಟನೆಯ ನಂತರ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಕೊಲೆಗೆ ಕಾರಣರಾದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.