Asianet Suvarna News Asianet Suvarna News

ಕಾಡು ಹಂದಿ ಹಿಡಿಯಲು ಹಾಕಿದ್ದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ಪೊಲೀಸರು ಸಾವು

  • ಕಾಡು ಹಂದಿ ಹಿಡಿಯಲು ತಂತಿ ಅಳವಡಿಸಿದ ವ್ಯಕ್ತಿ
  • ತಂತಿಗೆ ಸಿಲುಕಿ ಇಬ್ಬರು ಪೊಲೀಸರ ದಾರುಣ ಸಾವು
  • ಕೇರಳದ ಪಾಲಕ್ಕಾಡ್‌ನಲ್ಲಿ ಘಟನೆ
Two cops died by power shock one held for laying wire trap for hunting wild boar akb
Author
Kerala, First Published May 22, 2022, 10:01 AM IST

ಕೇರಳ: ವ್ಯಕ್ತಿಯೊರ್ವ ಕಾಡು ಹಂದಿ ಬೇಟೆಗೆ ಅಳವಡಿಸಿದ ತಂತಿಗೆ ಸಿಲುಕಿ ಇಬ್ಬರು ಪೊಲೀಸರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಪೊಲೀಸ್ ಕ್ಯಾಂಪ್ ಬಳಿಯ ಜಲಾವೃತವಾದ ಗದ್ದೆಯಲ್ಲಿ ಪೊಲೀಸರ ಶವ ಪತ್ತೆಯಾಗಿದೆ. ಬುಧವಾರ ರಾತ್ರಿ ಇವರು ಪೊಲೀಸ್‌ ಶಿಬಿರದಿಂದ ನಾಪತ್ತೆಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ತಂತಿ ಅಳವಡಿಸಿದ ಸುರೇಶ್‌ ಎಂಬಾತನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. 

ಮೃತ ಪೊಲೀಸರನ್ನು 36 ವರ್ಷದ ಎಂ ಅಶೋಕ್ ಕುಮಾರ್ (Ashok Kumar)  ಮತ್ತು 35 ವರ್ಷದ ಕೆ ಮೋಹನ್ ದಾಸ್ (K Mohandas) ಎಂದು ಗುರುತಿಸಲಾಗಿದೆ. ಇಬ್ಬರೂ ಪಾಲಕ್ಕಾಡ್‌ನಲ್ಲಿ (Palakkad)  ಕೇರಳ ಸಶಸ್ತ್ರ ಪೊಲೀಸ್ ಬೆಟಾಲಿಯನ್‌ನ ಹವಾಲ್ದಾರ್‌ಗಳಾಗಿದ್ದರು. ಎಂ ಅಶೋಕ್ ಕುಮಾರ್ ಅವರು ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್ ಆಗಿರುವ ಅಂತಾರಾಷ್ಟ್ರೀಯ ಅಥ್ಲೀಟ್ ಎಸ್ ಸಿನಿ (S Sini) ಅವರ ಪತಿ. ಗುರುವಾರ ಬೆಳಗ್ಗೆ ಪೊಲೀಸ್ ಕ್ಯಾಂಪ್ ಬಳಿಯ ಜಲಾವೃತವಾದ ಗದ್ದೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಬುಧವಾರ ರಾತ್ರಿ ಅವರು ನಾಪತ್ತೆಯಾಗಿದ್ದರು. 

ಚಿರತೆಯನ್ನು ತಿನ್ನುತ್ತಿರುವ ಕಾಡುಹಂದಿಗಳು: ವಿಡಿಯೋ ವೈರಲ್

ಘಟನೆಗೆ ಸಂಬಂಧಿಸಿದಂತೆ ಪಾಲಕ್ಕಾಡ್ ಎಸ್ಪಿ ಆರ್ ವಿಶ್ವನಾಧ್ (R Vishwanadh) ಮಾತನಾಡಿ, ಆರೋಪಿ 49 ವರ್ಷದ ಸುರೇಶ್ ಪೊಲೀಸ್‌ ಕ್ಯಾಂಪ್ ಬಳಿ ವಾಸಿಸುತ್ತಿದ್ದು, ತಂತಿ ಬಲೆಗಳನ್ನು ಬಳಸಿ ಕಾಡುಹಂದಿಗಳನ್ನು ಹಿಡಿಯುವ ಅಭ್ಯಾಸವನ್ನು ಹೊಂದಿದ್ದ. ಬುಧವಾರ ರಾತ್ರಿ ತನ್ನ ಮನೆಯಿಂದ ಲೈವ್ ತಂತಿಯನ್ನು ಎಳೆದು ಕಾಡುಹಂದಿಯನ್ನು ಬೇಟೆಯಾಡಲು ಬಲೆ ಹಾಕಿ ನಂತರ ನಿದ್ದೆಗೆ ಜಾರಿದ್ದ. ಆದರೆ ಗುರುವಾರ ಮುಂಜಾನೆ ಎದ್ದು ನೋಡಿದ ಆತನಿಗೆ ಶಾಕ್ ಕಾದಿತ್ತು. ಇಬ್ಬರು ಪೊಲೀಸರು ವಿದ್ಯುತ್ ಆಘಾತಕ್ಕೊಳಗಾಗಿ ಪ್ರಾಣ ಬಿಟ್ಟು ಮಲಗಿರುವುದು ಕಂಡು ಬಂತು. ಕೂಡಲೇ ಈತ ಪೊಲೀಸರ ಶವಗಳನ್ನು ತಳ್ಳು ಗಾಡಿಯೊಂದರಲ್ಲಿ ಎತ್ತಿಕೊಂಡು ಹೋಗಿ ಹತ್ತಿರದ ಗದ್ದೆಯೊಂದರಲ್ಲಿ ಬಿಸಾಕಿ ಬಂದಿದ್ದಾನೆ ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Bidar: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತರ ಡಿಫರೆಂಟ್ ಐಡಿಯಾ..!

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪೊಲೀಸರು ವಿದ್ಯುತ್ ಸ್ಪರ್ಶದಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಾಬೀತಾಗಿದೆ. ಆದರೆ ಪೊಲೀಸರು ವಸತಿ ಶಿಬಿರದಿಂದ ಏಕೆ ಹೊರಗೆ ಹೋದರು ಎಂಬ ಬಗ್ಗೆ ಮಾಹಿತಿ ಇಲ್ಲ. ಬಹುಶಃ ಮೀನುಗಾರಿಕೆಗೆ (Fishing) ಅವರು ತೆರಳಿರಬಹುದು ಎಂದು ಎಸ್ಪಿ ಹೇಳಿದ್ದಾರೆ. ಬಂಧಿತ ವ್ಯಕ್ತಿ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದ, ಅದರಲ್ಲಿ ಅವನು ಲೈವ್ ವೈರ್ ಬಳಸಿ ಕಾಡುಹಂದಿಯನ್ನು (Wildbore) ಕೊಂದಿದ್ದ ಎಂದು ಎಸ್ಪಿ ಹೇಳಿದ್ದಾರೆ. 

ವಿದ್ಯುತ್‌ ತಂತಿ ಇಟ್ಟು ಕಾಡು ಹಂದಿ ಬೇಟೆಯಾಡುವುದು ಹಳ್ಳಿ ಭಾಗದಲ್ಲಿ ಸಾಮಾನ್ಯ ಎನಿಸುವಷ್ಟು ವ್ಯಾಪಕವಾಗಿದೆ. ಕೆಲವರು ಕಾಡುಹಂದಿ ಹಿಡಿಯಲು ಉರುಳು ಹಾಕಿದರೆ ಮತ್ತೆ ಕೆಲವರು ಸ್ಫೋಟಕಗಳನ್ನು ಇಡುತ್ತಾರೆ. ಕಾಡು ಹಂದಿ ಬೇಟೆಗೆ ಬಳಸಲಾಗುತ್ತಿದ್ದ ಸ್ಫೋಟಕದ ಉಂಡೆ ಸಿಡಿದು 'ಹೋರಿ' ಬಾಯಿ ಸಂಪೂರ್ಣ ಹರಿದು ಹೋದ ಹೃದಯ ವಿದ್ರಾವಕ ಘಟನೆ ಕಲಬುರಗಿ- ಕಮಲಾಪುರ ರಸ್ತೆಯಲ್ಲಿ ಬರುವ ಉಪಳಾಂವ್ ಗುಡ್ಡದ ತಿರುವಿನ ಬಳಿ ಕೆಲ ದಿನಗಳ ಹಿಂದೆ ಸಂಭವಿಸಿತ್ತು. 

ಕಪನೂರು ಗ್ರಾಮದ ರೈತ ಚಂದ್ರಕಾಂತ ಎಂಬುವವರಿಗೆ ಸೇರಿದ್ದ 'ಹೋರಿ' ಈ ಘಟನೆಯಲ್ಲಿ ತೀವ್ರ ಗಾಯ ಅನುಭವಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನ ಪಶು ವೈದ್ಯಕೀಯ ವಿವಿಗೆ ರವಾನಿಸಲಾಗಿದೆ. ಎಂದಿನಂತೆ ಈ ಹೋರಿ ಮೇಯಲು ಹೊರಟಿತ್ತು. ಕಸದ ತೊಟ್ಟಿಯ ಬಳಿ ಬಂದು ತಿನ್ನಲು ಬಾಯಿ ಹಾಕುತ್ತಲೇ ಸ್ಫೋಟಕದ ಉಂಡೆ ಅದರ ಬಾಯಿ ಸೇರಿದೆ. ಉಂಡೆ ಬಾಯಿಯೊಳಗೆ ಹೋಗುತ್ತಲೇ ಸಿಡಿದಿದೆ. ಆ ಸಿಡಿತದ ರಭಸಕ್ಕೆ ಹೋರಿಯ ಬಾಯಿ ಸಂಪೂರ್ಣ ಹರಿದು ಹೋಗಿ ರಕ್ತಸ್ರಾವವಾಗಿದೆ. 


 

Follow Us:
Download App:
  • android
  • ios