* ಜಾಮೀನು ಸಿಕ್ಕರೂ ನಟ ಚೇತನ್ ಗೆ ಇಲ್ಲ ಬಿಡುಗಡೆ ಭಾಗ್ಯ* ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನಲೆ * ಇನ್ನೂ ಎರಡು ದಿನ ಜೈಲಿನಲ್ಲೇ ಉಳಿಯಲಿರುವ ಚೇತನ್ * ನಾಳೆ ನಾಲ್ಕನೇ ಶನಿವಾರ, ಬಳಿಕ ಭಾನುವಾರ ರಜೆ ಹಿನ್ನಲೆ

ಬೆಂಗಳೂರು(ಫೆ. 25) ಸಾಮಾಜಿಕ ಹೋರಾಟದಲ್ಲಿ ಕಾಣಿಸಿಕೊಂಡಿರುವ ನಟ ಚೇತನ್ ಬಂಧನ ವಿಚಾರ ಸಹ ದೊಡ್ಡ ಸುದ್ದಿಯಾಗಿತ್ತು. ಇದೀಗ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಕುಮಾರ್ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ನಟ ಚೇತನ್ ಕುಮಾರ್ ಅವರಿಗೆ (Bengaluru) 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದ್ದರೂ ಬಿಡುಗಡೆ ಭಾಗ್ಯ ಇಲ್ಲ.

Add Asianetnews Kannada as a Preferred SourcegooglePreferred

ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯೊಂದಿಗೆ ನ್ಯಾಯಾಲಯ ನಟ ಚೇತನ್ (Chetan Kumar) ಅವರಿಗೆ ಜಾಮೀನು (Bail) ನೀಡಲಾಗಿದ್ದರೂ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣಕ್ಕೆ ಇನ್ನೂ ಎರಡು ದಿನ ಜೈಲಿನಲ್ಲೇ ಕಳಿಯಬೇಕಿದೆ.

ನಾಳೆ ನಾಲ್ಕನೇ ಶನಿವಾರ, ಬಳಿಕ ಭಾನುವಾರ ರಜೆ ಹಿನ್ನಲೆ ರಜೆ ಬಂದಿದೆ. ಒಂದು ಲಕ್ಷ ಬಾಂಡ್ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ. ಸೋಮವಾರ ಬಾಂಡ್ ಪ್ರಕ್ರಿಯೆ ಪೂರೈಸಿದ ಬಳಿಕ ಪರಪ್ಪನ‌ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ದ ಅವಹೇಳನಕಾರಿ ಟ್ವೀಟ್ ಹಿನ್ನಲೆ ಕೇಸ್ ದಾಖಲಾಗಿತ್ತು. ಸುಮೋಟೊ ಪ್ರಕರಣ ದಾಖಲಿಸಿ ನಟ ಚೇತನ್ ಅವರನ್ನು ಬಂಧಿಸಿದ್ದರೆ ಚೇತನ್ ಪತ್ನಿ ಪತಿ ಕಾಣೆಯಾಗಿದ್ದಾರೆ ಎಂದು ದೂರು ಕೊಟ್ಟಿದ್ದರು.

ನಟ್ ಚೇತನ್ ಬಂಧನಕ್ಕೆ ಕಾರಣವಾದ ಪ್ರಕರಣ

ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ನಟ ಚೇತನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ, ನಟ ಚೇತನ್ ಕುಮಾರ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಟ ಚೇತನ್‌ಗೆ ಜಾಮೀನು ನೀಡಿತ್ತು. ಆದರೆ ಬಿಡುಗಡೆ ತಡವಾಗಿದೆ.

ಈ ಹಿಂದೆ ನಡೆದ ಅತ್ಯಾಚಾರ ಪ್ರಕರಣ ಹಾಗೂ ಈಗಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಾಮೂರ್ತಿಗಳ ಕುರಿತು ನಟ ಚೇತನ್ ಫೆಬ್ರವರಿ 16 ರಂದು ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದ ಕಾರಣಕ್ಕೆ ಚೇತನ್ ಕುಮಾರ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಯಿತು. ನ್ಯಾಯಮೂರ್ತಿಗಳಿಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಪೊಲೀಸರು ಫೆಬ್ರವರಿ 22 ರಂದು ಚೇತನ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದರು. ಐಪಿಸಿ ಸೆಕ್ಷನ್ 505 (2), 504 ಅಡಿಯಲ್ಲಿ ಚೇತನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಚೇತನ್ ಪರ ಬ್ಯಾಟ್ ಬೀಸಿದ್ದ ನಟಿ ರಮ್ಯಾ, ಬಂಧನವಾಗುವಂತಹ ತಪ್ಪು ಅವರು ಏನು ಮಾಡಿದ್ದಾರೆ. ದೇಶದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ ಎಂದು ಹೇಳಿದ್ದರು.

ಹಿಜಾಬ್ ಪ್ರಕರಣ: ಉಡುಪಿಯ ಕಾಲೇಜಿನಿಂದ ಆರಂಭವಾದ ಹಿಜಾಬ್ ಪ್ರಕರಣ ಹೈಕೋರ್ಟ್ ವರೆಗೆ ಬಂದು ನಿಂತಿದೆ. ಕೋರ್ಟ್ ನಲ್ಲಿ ನಿಒರಂತರ ವಿಚಾರಣೆ ನಡೆದಿದೆ. ಹಿಜಾಬ್ ಯಾಕೆ ಅಗತ್ಯ ಎಂದು ವಾದ ಮಂಡನೆ ಆಗಿದ್ದರೆ ಸಮವಸ್ತ್ರದ ಪ್ರಾಮುಖ್ಯ ಏನು ಎಂಬ ವಾದವೂ ಮಂಡನೆಯಾಗಿದೆ.

ಇನ್ನೊಂದು ಕಡೆ ರಾಜಕೀಯ ನಾಯಕರು ಪರಸ್ಪರ ಆರೋಪ ಮಾಡಿಕೊಳ್ಳುತ್ತಲೇ ಇದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿಯಾಗುತ್ತಿದೆ. ಬಹುದೊಡ್ಡ ಚರ್ಚೆಯ ವಸ್ತು ಇದಾಗಿದ್ದು ನ್ಯಾಯಾಲಯ ಯಾವ ಆಧಾರದ ಮೇಲೆ ಅಂತಿಮ ಫಲಿತಾಂಶ ನೀಡಲಿದೆ ಎನ್ನುವ ಕುತೂಹಲ ಇದೆ. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳಿಗೆ ಅವಕಾಶ ಇಲ್ಲ ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಒಟ್ಟಿನಲ್ಲಿ ಹಿಜಾಬ್ ವಿವಾದ ಇನ್ನು ತಾರ್ಕಿಕ ಅಂತ್ಯ ಕಂಡಿಲ್ಲ.