ಬೆಂಗಳೂರಿನ ಸದಾಶಿವನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಕಚೇರಿಯಿಂದ 91 ಲಕ್ಷ ರೂ. ದೋಚಿದ್ದ ಕ್ಯಾಷಿಯರ್ ಧನಂಜಯ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 81 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಯ ಕಚೇರಿಯಲ್ಲಿದ್ದ 91 ಲಕ್ಷ ರು. ಹಣ ದೋಚಿದ್ದ ಕ್ಯಾಷಿಯರ್ ಸೇರಿದಂತೆ ಇಬ್ಬರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಿವಮೊಗ್ಗ ಜಿಲ್ಲೆಯ ಧನಂಜಯ ಹಾಗೂ ದಾವಣಗೆರೆಯ ಪ್ರವೀಣ್‌ ನಾಯಕ್‌ ಬಂಧಿತರಾಗಿದ್ದು, ಆರೋಪಿಗಳಿಂದ 81 ಲಕ್ಷ ರು. ನಗದು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕ್ಯಾಷಿಯರ್‌ನ ಸ್ನೇಹಿತ ಶಿವಮೊಗ್ಗದ ತಿಪ್ಪೇಶ್ ಹಾಗೂ ಆತನ ಸಹಚರನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಸದಾಶಿವನಗರ ಸಮೀಪ ನರಸಿಂಹ ಎಂಬುವರಿಗೆ ಸೇರಿದ ರಿಯಲ್ ಎಸ್ಟೇಟ್ ಕಂಪನಿ ಕಚೇರಿ ಬೀಗ ಮುರಿದು 91 ಲಕ್ಷ ರು. ಹಣ ಕಳ್ಳತನವಾಗಿತ್ತು. ಈ ಬಗ್ಗೆ ಕಂಪನಿ ಮಾಲಿಕ ನೀಡಿದ ದೂರಿನ ಮೇರೆಗೆ ತನಿಖೆ ಮಾಡಿದ ಇನ್ಸ್‌ಪೆಕ್ಟರ್ ಪ್ರದೀಪ್ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಜಮೀರ್ ಆವಟಿ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಕ್ಯಾಶಿಯರ್ ಹಾಗೂ ಆತನ ಸ್ನೇಹಿತನನ್ನು ಸೆರೆ ಹಿಡಿದಿದ್ದಾರೆ.

ಹಣದಾಸೆಗೆ ಕೃತ್ಯ:

ಸದಾಶಿವನಗರದ ದೇವಸಂದ್ರದಲ್ಲಿ ನೆಲೆಸಿದ್ದ ಶಿವಮೊಗ್ಗದ ಧನಂಜಯ, ಮೂರು ವರ್ಷಗಳಿಂದ ನರಸಿಂಹ ಮಾಲಿಕತ್ವದ ಬಿಲ್ಡರ್ಸ್ ಅಂಡ್ ಮೈನಿಂಗ್ ಬಿಸಿನೆಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿದ್ದ. ಕ್ರಮೇಣ ಮಾಲಿಕನ ವಿಶ್ವಾಸ ಗಳಿಸಿದ್ದ. ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆ ತಿಳಿದುಕೊಂಡ ಆತ ಕಂಪನಿಯ ಹಣ ಕಳ್ಳತನ ಮಾಡಲು ಯೋಜಿಸಿ ಈ ಬಗ್ಗೆ ಸ್ನೇಹಿತ ತಿಪ್ಪೇಶ್ ಜತೆ ಮಾತುಕತೆ ನಡೆಸಿದ. ಕೊನೆಗೆ ಆ ಗೆಳೆಯ ಸಹ ಹಣದಾಸೆಗೆ ಕೃತ್ಯಕ್ಕೆ ಸಹಕರಿಸಲು ಒಪ್ಪಿಕೊಂಡನು ಎಂದು ಪೊಲೀಸರು ಹೇಳಿದ್ದಾರೆ.

ನಂತರ ಕಳ್ಳತನಕ್ಕೆ ಧನಂಜಯ್ ಸಂಚು ರೂಪಿಸಿದ್ದ. ತರುವಾಯ ತಿಪ್ಪೇಶ್ ಮೂಲಕ ಪ್ರವೀಣ್ ನಾಯಕ್ ಹಾಗೂ ಮತ್ತೊಬ್ಬ ಧನಂಜಯ್‌ ಪರಿಚಯವಾಗಿದ್ದಾರೆ. ಆರೋಪಿ ಪ್ರವೀಣ್‌ ಕಾರನ್ನು ಬಳಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಮುಂಜಾನೆ ಹೊತ್ತಿನಲ್ಲಿ ಜನ ಸಂಚಾರ ಕಡಿಮೆ ಇರುತ್ತಾರೆ. ಆ ವೇಳೆ ಕೃತ್ಯ ಎಸಗಲು ಸುಸಮಯ ಎಂದು ಕ್ಯಾಶಿಯರ್ ಹೇಳಿದ್ದ. ಅಂತೆಯೇ ಕಳ್ಳತನಕ್ಕೂ ವಾರದ ಹಿಂದೆ ರಿಯಲ್ ಎಸ್ಟೇಟ್ ಕಂಪನಿ ಕಚೇರಿ ಬಳಿ ಬಂದು ತಂಡ ರೇಖಿ ಮಾಡಿತ್ತು. ಅಂತಿಮವಾಗಿ ಫೆ.13 ರಂದು ನಸುಕಿನಲ್ಲಿ ತಮ್ಮ ಸಂಚನ್ನು ಆರೋಪಿಗಳು ಕಾರ್ಯರೂಪಕ್ಕಿಳಿಸಿದ್ದರು.

ಸೆರೆಯಾಗಿದ್ದು ಹೇಗೆ?

ಕಳ್ಳತನದ ಬಳಿಕ ಶಿವಮೊಗ್ಗಕ್ಕೆ ಆರೋಪಿಗಳು ಪರಾರಿಯಾಗಿದ್ದರು. ಪ್ರತಿ ಹಂತದಲ್ಲೂ ಯಾರಿಗೂ ಅನುಮಾನ ಬಾರದಂತೆ ಅವರು ಆಯೋಜಿಸಿದ್ದರು. ಆದರೆ ತಂಡ ಸಿಕ್ಕಿ ಬೀಳಲು ಸುತ್ತಿಗೆ ತಂದಿದ್ದ ಬ್ಯಾಗ್ ಮಹತ್ವದ ಸುಳಿವು ನೀಡಿದೆ. ಜತೆಗೆ ರಿಯಲ್ ಎಸ್ಟೇಟ್ ಕಂಪನಿಯ ಕಚೇರಿಯಲ್ಲಿ ನಾಲ್ಕು ಕೋಣೆಗಳಿದ್ದವು. ಆದರೆ ಕಚೇರಿಯ ಬೀಗ ಮುರಿದು ಒಳ ನುಗ್ಗಿದ್ದ ಆರೋಪಿಗಳು, ಹಣವಿದ್ದ ಕೋಣೆಗೆ ನೇರವಾಗಿ ಹೋಗಿದ್ದು ಕೃತ್ಯದಲ್ಲಿ ಪರಿಚಿತರ ಪಾತ್ರದ ಬಗ್ಗೆ ಗುಮಾನಿಗೆ ಎಡೆ ಮಾಡಿತು.

ಬೀಗ ಒಡೆಯಲು ತಂದಿದ್ದ ಬ್ಯಾಗ್ ಅನ್ನು ಕೃತ್ಯ ಎಸಗಿದ ನಂತರ ಪರಾರಿಯಾಗುವ ಅವಸರದಲ್ಲಿ ಸ್ಥಳದಲ್ಲೇ ಬಿಟ್ಟು ಕಳ್ಳರು ಹೋಗಿದ್ದರು. ಆ ಬ್ಯಾಗ್‌ ಮೇಲೆ ಶಿವಮೊಗ್ಗ ಅಂಗಡಿಯ ಹೆಸರಿತ್ತು. ಆಗ ಕೃತ್ಯದಲ್ಲಿ ಶಿವಮೊಗ್ಗ ಕಡೆಯವರ ಪಾಲ್ಗೊಳ್ಳುವಿಕೆಗೆ ಕುರುಹು ಸಿಕ್ಕಿತು. ಈ ಸುಳಿವು ಆಧರಿಸಿ ಬೆಂಗಳೂರು-ಶಿವಮೊಗ್ಗ ಹೆದ್ದಾರಿಯ ಟೋಲ್‌ಗಳ ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ಹಿಂದೆ ಸಿಂಬಲ್ ಇದ್ದ ಕಾರಿನ ಸುಳಿವು ಲಭಿಸಿತ್ತು. ಈ ಮಾಹಿತಿ ಬೆನ್ನತ್ತಿದ್ದಾಗ ಪ್ರವೀಣ್ ಬಲೆಗೆ ಬಿದ್ದ. ಆತನ ವಿಚಾರಣೆ ನಡೆಸಿದಾಗ ಕ್ಯಾಶಿಯರ್ ಧನಂಜಯ ಮುಖವಾಡ ಕಳಚಿತು ಎಂದು ಪೊಲೀಸರು ವಿವರಿಸಿದ್ದಾರೆ.

ತಂದೆ ಮನೆಯಲ್ಲಿ ಹಣ ಇಟ್ಟಿದ್ದರು

ಈ ಕೃತ್ಯದಲ್ಲಿ ದೋಚಿದ್ದ ಹಣವನ್ನು ಧನಂಜಯ್ ತಂದೆ ಮನೆಯಲ್ಲಿ ಪ್ರವೀಣ್ ಗ್ಯಾಂಗ್ ಇಟ್ಟು ಪರಾರಿಯಾಗಿತ್ತು. ವಿಚಾರಣೆ ಬಳಿಕ ಆ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.