ಕಲಬುರಗಿಯ ಸೇಡಂ ತಾಲೂಕಿನಲ್ಲಿ ನಾಟಿ ಔಷಧ ಸೇವಿಸಿ ಮೂವರು ಮೃತಪಟ್ಟಿದ್ದಾರೆ. ಕುಡಿತದ ಚಟ ಬಿಡಿಸಲು ಸೇವಿಸಿದ ಔಷಧವೇ ಸಾವಿಗೆ ಕಾರಣ ಎನ್ನಲಾಗಿದೆ. ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಕಲಬುರಗಿ, (ಆಗಸ್ಟ್ 6): ಕುಡಿತದ ಚಟ ಬಿಡಿಸಲು ನಾಟಿ ಔಷಧ ಸೇವಿಸಿದ ಕಾರಣ ಸೇಡಂ ತಾಲೂಕಿನ ಇಮಡಾಪೂರ ಗ್ರಾಮದಲ್ಲಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ನಡೆದಿದೆ.

ಇದೇ ಔಷಧ ಸೇವಿಸಿದ ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತರನ್ನು ಸೇಡಂ ತಾಲೂಕಿನ ಬುರುಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ ಪಟ್ಟಣದ ಗಣೇಶ ಬಾಬು ರಾಠೋಡ (24) ಮತ್ತು ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕುಡಿತದ ಚಟವನ್ನು ಬಿಡಲು ಸ್ಥಳೀಯವಾಗಿ ಲಭ್ಯವಾದ ನಾಟಿ ಔಷಧವನ್ನು ಸೇವಿಸಿದ್ದರು. ಆದರೆ, ಔಷಧ ಸೇವಿಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ.

ಇದೇ ಔಷಧವನ್ನು ಸೇವಿಸಿದ ಲಕ್ಷ್ಮೀ ನರಸಿಂಹಲು ಪುತ್ರ ನಿಂಗಪ್ಪ ನರಸಿಂಹಲು ಗಂಭೀರ ಸ್ಥಿತಿಯಲ್ಲಿದ್ದು, ಕಲಬುರಗಿಯ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಔಷಧದ ಮೂಲ, ಅದರ ಗುಣಮಟ್ಟ ಮತ್ತು ತಯಾರಿಕೆ ಪರಿಶೀಲಿಸಲಾಗುತ್ತೆ. ಸ್ಥಳೀಯರು ಈ ಔಷಧವನ್ನು ಯಾರು ಸರಬರಾಜು ಮಾಡಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ.

ಯಾವುದೇ ಔಷಧವನ್ನು ಸೇವಿಸುವ ಮುನ್ನ ಗ್ರಾಮಸ್ಥರು ವೈದ್ಯಕೀಯ ಸಲಹೆ ಪಡೆಯುವುದು ಒಳ್ಳೆಯದು.